ಸಾಡೇ ಸಾತ್ ಶನಿಯ ಈ ಏಳು ಲಕ್ಷಣಕ್ಕೂ ನೀವು ಎಚ್ಚೆತ್ತುಕೊಳ್ಳದಿದ್ದರೆ!
"ನಾನು ಕೆಲಸ ಬಿಡಬೇಕು ಅಂತ ತೀರ್ಮಾನಿಸಿದ್ದೀನಿ ಗುರುಗಳೇ. ನಾಲ್ಕೈದು ಕಂಪೆನಿಗಳವರು ಈಗಾಗಲೇ ಕರೆದಿದ್ದಾರೆ. ನನಗೇನು ಕೆಲಸಕ್ಕೆ ಸಮಸ್ಯೆ ಆಗಲಿಕ್ಕಿಲ್ಲ. ಎಲ್ಲಿಗೆ ಸೇರಬೇಕು ಅನ್ನೋದನ್ನು ಮಾತ್ರ ನಿರ್ಧಾರ ಮಾಡಲಿಕ್ಕಿದೆ" ಎಂದು ಆ ವ್ಯಕ್ತಿ ನನಗೆ ಹೇಳಿದರು. ನಿಮಗೆ ಸಾಡೇಸಾತ್ ನಡೆಯುತ್ತಿದೆ ಈಗ ಯಾವ ಕಾರಣಕ್ಕೂ ಕೆಲಸ ಬಿಟ್ಟು, ಮತ್ತೊಂದು ಉದ್ಯೋಗ ಹುಡುಕಬೇಡಿ ಅಂದೆ.
ಇಲ್ಲ, ನನಗೆ ಈಗಿನ ಕೆಲಸದಿಂದ ಹೊರಗೆ ಬರಬೇಕಿದೆ. ಬಹಳ ಕಂಪೆನಿಗಳಲ್ಲಿ ನನ್ನನ್ನು ಕರೆದಿದ್ದಾರೆ ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿದರು. ಇನ್ನು ತಿಳಿ ಹೇಳಿ ಪ್ರಯೋಜನ ಇಲ್ಲ ಅಂದುಕೊಂಡು ಸುಮ್ಮನಾದೆ. ಅದಾಗಿ ಕೆಲ ಸಮಯಕ್ಕೆ ಅದೇ ವ್ಯಕ್ತಿ ನನ್ನ ಬಳಿ ಬಂದರು. ಈ ಸಲ ಅವರ ಧ್ವನಿಯಲ್ಲಿ ಮೊದಲಿನ ವಿಶ್ವಾಸವಾಗಲೀ, ಉತ್ಸಾಹವಾಗಲಿ ಕಂಡುಬರಲಿಲ್ಲ.
ಕೆಲಸ ನೀಡುವುದಾಗಿ ಹೇಳಿದವರು ಆಮೇಲೆ, ನಂತರ ಅಂದರು. ಅದಾಗಲೇ ಇದ್ದ ಉದ್ಯೋಗ ಬಿಟ್ಟಿದ್ದೆ. ಅಷ್ಟು ದೊಡ್ಡ ಸಂಬಳದ ಕೆಲಸ ಬಿಟ್ಟ ಪಶ್ಚಾತಾಪ ಈಗ ಅನುಭವಿಸುತ್ತಾ ಇದ್ದೀನಿ. ಮುಂಚೆ ಇದ್ದ ಸಂಬಳಕ್ಕಿಂತ ಮೂರನೇ ಒಂದು ಭಾಗಕ್ಕೆ ಇಳಿದುಹೋಗಿದೆ ಸದ್ಯದ ವೇತನ ಅಂದರು.
ಅವರಿಗೆ ವಿಷಾದ ವ್ಯಕ್ತಪಡಿಸುವುದನ್ನು ಬಿಟ್ಟು ನನ್ನ ಬಳಿ ಮಾತುಗಳಿರಲಿಲ್ಲ. ನನ್ನ ಬಳಿ ಜ್ಯೋತಿಷ್ಯ ಕೇಳಿಬರುವ- ಸಾಡೇ ಸಾತ್ ನಡೆಯುತ್ತಿರುವವರಿಗೆ ನೀಡುವ ಏಳು ಸಲಹೆಗಳಿವು. ಇವುಗಳಿಗೆ ಬೆಲೆ ಕಟ್ಟುವುದು ಸಾಧ್ಯವೇ ಇಲ್ಲ. ಯಾರಿಗೆಲ್ಲ ಸಾಡೇ ಸಾತ್ ನಡೆಯುತ್ತಿದೆಯೋ ಈ ಸಲಹೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಕಣ್ಣೊಳಗೆ ತೂರಬಹುದಾದ ಚೂರಿ, ರೆಪ್ಪೆಯನ್ನು ದಾಟಿ ಹೋದೀತು.

ಕೆಲಸ ಬಿಡುವ ಯೋಚನೆ ಬೇಡ
ಶನಿಯ ಮೊದಲ ಪ್ರಭಾವವೇ ಇದು. ಚೆಂದವೋ ಚೆಂದವಲ್ಲವೋ ಇರುವ ಕೆಲಸವನ್ನು ಬಿಡಬೇಕು ಎಂಬ ತುಡಿತವೊಂದು ಮನಸ್ಸಿನಲ್ಲಿ ಆರಂಭವಾಗುವಂತೆ ಮಾಡುತ್ತಾನೆ. ಕೆಲಸವೇ ಬದಲಿಸಬಾರದಾ ಅಂದರೆ, ಅದು ಹಾಗಲ್ಲ. ಪೂರ್ತಿಯಾಗಿ ಖಾತ್ರಿ ಮಾಡಿಕೊಂಡು, ಹೊಸ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಇರುವ ಕೆಲಸ ಬಿಡಬಹುದೇ ವಿನಾ ಏಕಾಏಕಿ ಖಾಲಿ ಕೂತರೆ ಎಷ್ಟೋ ಸಂದರ್ಭದಲ್ಲಿ ಸಾಡೇ ಸಾತ್ ಮುಗಿಯುವ ತನಕ ಕೆಲಸವೇ ಸಿಗದಂಥ ಪರಿಸ್ಥಿತಿ ಎದುರಿಸಿದವರಿದ್ದಾರೆ. ಇಲ್ಲದಿದ್ದರೆ ಮುಂಚೆಗಿಂತ ಕಡಿಮೆ ಸಂಬಳದ, ಕೆಳ ದರ್ಜೆಯ ಉದ್ಯೋಗ ಸೇರಿದವರಿದ್ದಾರೆ.

ಆತ್ಮೀಯರ ಅಗಲಿಕೆ
ಇಲ್ಲಿ ಆತ್ಮೀಯರ ಅಗಲಿಕೆ ಅಂದರೆ ಸಾವು ಎಂಬರ್ಥವಲ್ಲ. ತುಂಬ ಒಳ್ಳೆ ಸ್ನೇಹ ಅಥವಾ ನಮ್ಮ ಕಷ್ಟಕ್ಕೆ ಆದ ವ್ಯಕ್ತಿಗಳ ಸಂಬಂಧವನ್ನು ಕಳೆದುಕೊಳ್ತೀವಿ. ಅದೂ ನಮ್ಮ ತಪ್ಪಾದ ಅಥವಾ ಒರಟು ಮಾತಿನಿಂದ. ತುಂಬ ಗೌರವದಿಂದ ಕಾಣಬೇಕಾದವರ ಬಗ್ಗೆ ಆಡಿದ ತಪ್ಪು ಮಾತುಗಳಿಂದ ಆ ಸ್ನೇಹ ಅಥವಾ ಸಂಬಂಧ ಕಡಿದುಹೋಗುತ್ತದೆ.

ಸಮಾಜದ ಕಣ್ಣಿನಲ್ಲಿ ಅಪರಾಧಿ
ಸುಮ್ಮನಿರದೆ ಇರುವೆ ಬಿಟ್ಟುಕೊಂಡರು ಅನ್ನೋ ಹಾಗೆ ಗೊತ್ತಿದ್ದೂ ಗೊತ್ತಿದ್ದೂ ಸಮಾಜ ಕಣ್ಣಲ್ಲಿ ಅಪರಾಧಿಯಂತೆ ಕಾಣುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಅದರಲ್ಲೂ ಹೆಣ್ಣು-ಗಂಡಿನ ವಿಚಾರವಾಗಿ ಏಳುವ ಗಾಸಿಪ್ ಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಮಾಡದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ನಿಮ್ಮ ಬಾಡಿ ಲಾಂಗ್ವೇಜ್, ನಡವಳಿಕೆ ಎಲ್ಲವನ್ನೂ ಎಚ್ಚರದಿಂದ ನಿರ್ವಹಿಸಬೇಕು.

ಅನಾರೋಗ್ಯ ಬೆನ್ನಟ್ಟುತ್ತದೆ
ಸಾಡೇ ಸಾತ್ ಆರಂಭ ಅಂದರೆ ಆರೋಗ್ಯ ಸಮಸ್ಯೆಯನ್ನು ಸಣ್ಣ-ಪುಟ್ಟದಿದ್ದರೂ ನಿರ್ಲಕ್ಷಿಸುವ ಹಾಗಿಲ್ಲ. ಕೆಮ್ಮು ತಾನೇ, ನೆಗಡಿಯಷ್ಟೇ, ಸ್ವಲ್ಪ ತಲೆ ಸುತ್ತು...ಹೀಗೆ ಯಾವುದೇ ಅನಾರೋಗ್ಯ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಅದು ವಿಪರೀತಕ್ಕೆ ಹೋಗುತ್ತದೆ. ವೈದ್ಯರನ್ನು ಕಂಡು, ಅದರಲ್ಲೂ ಆ ವಿಷಯದಲ್ಲಿ ತಜ್ಞರಾದ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದನ್ನು ನಿರ್ಲಕ್ಷ್ಯ ಮಾಡಬಾರದು.

ಮನೆ, ಹೆಂಡತಿಯನ್ನೂ ಬಿಡುವ ದುರಾಲೋಚನೆ
ಯಾರಿಗೆ ಸಾಡೇ ಸಾತ್ ಇರುತ್ತದೋ ಅಂಥವರಿಗೆ ಶನಿಯು ಮನೆ ಬಿಡಿಸುತ್ತಾನೆ, ಹೆಂಡತಿಯನ್ನು ಬಿಡಿಸುತ್ತಾನೆ, ಕೆಲಸವನ್ನು ಬಿಡಿಸುತ್ತಾನೆ. ಇದರರ್ಥ ಬೇರ್ಪಡಿಸುತ್ತಾನೆ. ಉದ್ಯೋಗ, ಮನೆ, ಪತ್ನಿಯಿಂದ ಬೇರ್ಪಡುವಂಥ ಬುದ್ಧಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಅಹಂಕಾರ ಬಿಡಲೇಬೇಕು.

ಮೈಯೆಲ್ಲ ಕಣ್ಣಾಗಿಸಿಕೊಂಡು ವಾಹನ ಚಲಾಯಿಸಿ
ವಾಹನ ಚಲಾಯಿಸುವಾಗ ಅದೆಷ್ಟು ಎಚ್ಚರದಿಂದ ಇರಲು ಸಾಧ್ಯವೋ ಅಷ್ಟೂ ಎಚ್ಚರಿಕೆಯಿಂದ ಇರಬೇಕು. ತಲುಪಬೇಕಾದ ಸ್ಥಳಕ್ಕೆ ಸ್ವಲ್ಪ ಮುಂಚಿತವಾಗಿಯೇ ಹೊರಡಬೇಕು. ಏಕೆಂದರೆ, ಅಪಘಾತ ಸಾಧ್ಯತೆಗಳು ಈ ಅವಧಿಯಲ್ಲಿ ಹೆಚ್ಚಿರುತ್ತವೆ. ಮೈ ಎಲ್ಲ ಕಣ್ಣಾಗಿಸಿಕೊಂಡು ವಾಹನ ಚಲಾಯಿಸಬೇಕು ಅನ್ನೋದು ಸಲಹೆ ಆದರೂ ಅದು ಬಹಳ ಕಷ್ಟ ಆಗುತ್ತದೆ.

ಸಾಲ ಕೊಡಬೇಡಿ, ಪಡೆಯಬೇಡಿ
ಹೊಸದಾಗಿ ಸಾಲ ಮಾಡಿ ಅಥವಾ ಆಸ್ತಿ ಮಾರಿ ವ್ಯಾಪಾರ- ವ್ಯವಹಾರ ಶುರು ಮಾಡ್ತೀನಿ. ನನ್ನ ಸ್ನೇಹಿತ ಅರ್ಧ ದುಡ್ಡು ಹಾಕ್ತಾನೆ, ಇನ್ನರ್ಧ ನಾನು ಹಾಕಿ ವ್ಯಾಪಾರ ಮಾಡ್ತೀನಿ. ಈಗಿರುವ ಕೆಲಸ ಬಿಟ್ಟು ವ್ಯವಹಾರ ಶುರು ಮಾಡ್ತೀನಿ...ಇಂಥ ಯಾವ ಸಾಹಸಕ್ಕೂ ಕೈ ಹಾಕಬೇಡಿ. ಮಾಡುವುದೇ ವ್ಯಾಪಾರ- ವ್ಯವಹಾರ ಅಂದರೆ ವಿಪರೀತ ಹೊಸ ಸಾಹಸ ಬೇಡ. ಯಾರಿಗೂ ಜಾಮೀನು ಹಾಕಬೇಡಿ, ನಿಲ್ಲಬೇಡಿ, ಸಾಲ ಕೊಡಬೇಡಿ, ವಿಪರೀತ ಸಾಲ ಮಾಡಬೇಡಿ.
ಜ್ಯೋತಿಷಿಗಳಾದ ಕಬ್ಯಾಡಿ ಜಯರಾಮಾಚಾರ್ಯ ಅವರ ಬಳಿ ನೇರವಾಗಿ ಜ್ಯೋತಿಷ್ಯ ಕೇಳುವ ಉದ್ದೇಶ ಇರುವವರು ಮಾತ್ರ ಮೊಬೈಲ್ ಸಂಖ್ಯೆ 9448134329 ಸಂಪರ್ಕಿಸಬಹುದು.












Click it and Unblock the Notifications