ಶನೈಶ್ಚರನ ವಾಹನ ಕಾಗೆಗಳ ಸಂತತಿ ಕ್ಷೀಣ, ಸಿಟ್ಟಾಗುತ್ತಾನಾ ರವಿ ಪುತ್ರ!
ಕೆಲ ತಿಂಗಳ ಹಿಂದೆ ಅಂದರೆ ಪಿತೃ ಪಕ್ಷದ ಸಂದರ್ಭದಲ್ಲಿ ಖಾಸಗಿ ಸುದ್ದಿ ವಾಹಿನಿ ಒಂದಕ್ಕೆ ಚರ್ಚೆಗೆ ಕರೆದಿದ್ದರು. ಅಂದಿನ ಆ ಚರ್ಚೆಯ ವಿಚಾರ ನನ್ನ ಪಾಲಿಗೆ ಬಹಳ ಆಶ್ಚರ್ಯ ಅನಿಸಿತು. ಪಿತೃಪಕ್ಷ ಆದುದರಿಂದ ಎಲ್ಲ ತಮ್ಮ ಪಿತೃಗಳಿಗೆ ಪಿಂಡ ಇಟ್ಟು ನಂತರ ಕಾಗೆಗಳಿಗೆ ಅನ್ನ ಹಾಕಲು ಹುಡುಕಿದಿರೆ ಕಾಗೆಗಳೇ ಇಲ್ಲ!
ಆಗ ಅಲ್ಲಿ ಹತ್ತಿರದಲ್ಲಿ ಪಕ್ಷಿಗಳ ಸಂರಕ್ಷಕ ಒಬ್ಬರ ಬಳಿ ಒಂದು ಕಾಗೆ ಇತ್ತು. ಅದನ್ನೇ ಹಿಡಿದು ಅದಕ್ಕೆ ಎಲ್ಲರೂ ಒತ್ತಾಯಪೂರ್ವಕವಾಗಿ ಎರಡೆರಡು ಅಗಳು ಅನ್ನ ನೀಡುತ್ತಾ ಇದ್ದರು. ಇಲ್ಲಿ ಆ ಕಾರ್ಯ ಆ ಪಕ್ಷಿ ಸಂರಕ್ಷಕರು ಹಣ ಸಂಪಾದನೆಗೆ ಮಾಡಿದರು ಎಂದು ಆರೋಪಿಸಲಾಗಿತ್ತು. ಆದರೆ ನಂತರ ಅದು ಸುಳ್ಳು ಎಂದು ಸಾಬೀತು ಸಹ ಆಯಿತು.
ಇಲ್ಲಿ ವಿಷಯ ಅಂದರೆ ಆ ಚರ್ಚೆಗೆ ನಾನು ಹೋದಾಗ ಅಲ್ಲಿದ್ದ ನಿರೂಪಕರ ಮುಖಾಂತರ ಕಾಗೆ ಈಗ ಅಳಿವಿನ ಅಂಚಿನಲ್ಲಿ ಇರುವ ಒಂದು ಪಕ್ಷಿ ಎಂಬ ಆಘಾತಕಾರಿ ವಿಚಾರ ತಿಳಿಯಿತು. ಅದು ಅಲ್ಲ ಎಂದು ಹೇಳುವ ಜನ ಸಹ ಇನ್ನೂ ಇದ್ದಾರೆ. ಆದರೆ ಅದು ಹೌದಾಗಿದ್ದಲ್ಲಿ ಮಾತ್ರ ಕಾಗೆಗಳು ಅಳಿವಿನ ಅಂಚಿನಲ್ಲಿ ಇರುವುದು ಆಘಾತಕಾರಿ ವಿಚಾರ. ಅತ್ತ ಧಾರ್ಮಿಕವಾಗಿ, ಇತ್ತ ವೈಜ್ಞಾನಿಕವಾಗಿ ಎರಡೂ ಕಾರಣಗಳಿಂದ ಸಮಸ್ಯೆ ಆಗುತ್ತದೆ.

ಶನೈಶ್ಚರನ ವಾಹನ
ನಮ್ಮ ಧರ್ಮ ಶಾಸ್ತ್ರದಲ್ಲಿ ಕಾಗೆಗೆ ಬಹಳ ವಿಶೇಷ ಮಹತ್ವ ನೀಡಿದ್ದಾರೆ. ನವಗ್ರಹಗಳಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧ ಗ್ರಹ, ನಮ್ಮ ಪೂರ್ವಾರ್ಜಿತ ಕರ್ಮ ಫಲಗಳನ್ನು ನೋಡಿ ಅಳೆದು ತೂಗಿ ಪರೀಕ್ಷೆಗಳನ್ನು ನೀಡುವ ಶನೈಶ್ಚರನ ವಾಹನ ಕಾಅಗೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ವಾಹನ ಇಲ್ಲದೆ ಸ್ವಾಮಿಯ ಆರಾಧನೆ ಇಲ್ಲ. ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ವಿಧದಲ್ಲಿ ನಾವು ಕಾಗೆಗಳ ನಾಶಕ್ಕೆ ಕಾರಣ ಕರ್ತೃ ಆಗಿದ್ದಲ್ಲಿ ಅದರ ದುಷ್ಪರಿಣಾಮಗಳನ್ನು ಅನುಭವಿಸಲೇ ಬೇಕು. ಶನೈಶ್ಚರನ ಅವಕೃಪೆಗೆ ಪಾತ್ರ ಆಗುವುದರಲ್ಲಿ ಸಂಶಯ ಇಲ್ಲ.

ಪಿತೃದೇವತೆಗಳ ತೃಪ್ತಿ
ಇನ್ನು ಧರ್ಮ- ಕರ್ಮಗಳ ಆಚರಣೆ ವಿಚಾರ ಬಂದಾಗ ನಮ್ಮ ಪಿತೃಗಳಿಗೆ ಶ್ರದ್ದೆಯಿಂದ ಮಾಡುವ ಶ್ರಾದ್ಧವು ಕಾಗೆಗಳು ಇಲ್ಲದಿದ್ದರೆ ಅಪೂರ್ಣ. ಕಾಗೆಗಳ ತೃಪ್ತಿಯ ಮೂಲಕ ಪಿತೃ ದೇವತೆಗಳ ತೃಪ್ತಿಯನ್ನು ಕಾಣುತ್ತೇವೆ. ಆದುದರಿಂದ ನಿತ್ಯ ಜೀವನದಲ್ಲಿ ಧಾರ್ಮಿಕವಾಗಿ ಪ್ರಮುಖ ಪಾತ್ರ ವಹಿಸುವ ಕಾಗೆಗಳು ಅಳಿವಿನ ಅಂಚಿನಲ್ಲಿ ಇವೆ ಎಂದಾದಲ್ಲಿ ಧರ್ಮ- ಕರ್ಮಗಳ ರಕ್ಷಣೆಗಾದರೂ ಕಾಗೆಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು.

ಶುಭಾಶುಭ ಶಕುನ
ಇನ್ನು ಶಕುನ ಶಾಸ್ತ್ರದಲ್ಲಿ ಸಹ ಕಾಗೆಗಳಿಗೆ ವಿಶೇಷ ಮಹತ್ವ ಇದೆ. ನಡೆದುಕೊಂಡು ಹೋಗುವಾಗ ಕಾಗೆ ಬಂದು ತಲೆ ಮೇಲೆ ಕುಟ್ಟಿ ಹೋಗುವುದು, ಮೈ ಮೇಲೆ ನಾವು ಉಟ್ಟ ಬಟ್ಟೆ ಮೇಲೆ ಕಾಗೆ ಪಿಶ್ಟಿ (ಮಲ ವಿಸರ್ಜನೆ) ಮಾಡುವುದು, ಕಾಕ ಮೈಥುನ ದರ್ಶನ ನಮ್ಮ ಮನೆ ಮುಂದೆ ಬಂದು ಕಾಗೆ ಜಾಸ್ತಿ ಹೊತ್ತು ಕೂಗುತ್ತಾ ಇರುವುದು, ನಮ್ಮ ಮನೆ ಒಳಗೆ ಕಾಗೆ ಬರುವುದು ಇತ್ಯಾದಿಯಾಗಿ ಅನೇಕ ವಿಧದಲ್ಲಿ ಕಾಗೆಗಳಿಂದ ಶುಭಾಶುಭ ಶಕುನಗಳನ್ನು ಕಾಣುತ್ತೇವೆ.

ಪ್ರಾಕೃತಿಕ ಸಮತೋಲನ
ವೈಜ್ಞಾನಿಕವಾಗಿ ನೋಡಿದಾಗ ಸಹ ಪ್ರಾಕೃತಿಕವಾಗಿ ಇರುವ ಯಾವುದೇ ಜೀವ ನೇರವಾಗಿ ನಿಸರ್ಗ ಹಾಗೂ ಪ್ರಕೃತಿಗೆ ಸಮತೋಲನ ಕಾಯ್ದುಕೊಳ್ಳಲು ಸಹಕಾರಿ ಆಗಿರುತ್ತದೆ. ಆದರೆ ಮಾನವ ತನ್ನ ಸ್ವಾರ್ಥ ಸಾಧನೆಗಾಗಿ ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡಿಬಿಟ್ಟರೆ ನೇರವಾಗಿ ಪೃಕೃತಿಯನ್ನು ನಾಶ ಮಾಡಿದಂತೆ. ತಾನೇ ಹತ್ತಿ ನಿಂತ ಮರದ ಬುಡವನ್ನು ಕತ್ತರಿಸಿಕೊಂಡಂತೆ.

ಕಾಗೆ ಉಳಿವಿಗೆ ಏನು ಮಾಡಬೇಕು?
ಸರಿ ಹಾಗಾದರೆ ಈ ಕಾಗೆಗಳ ಉಳಿವಿಗಾಗಿ ಏನು ಮಾಡಬೇಕು ಎನ್ನುವುದಾದರೆ, ಮೊದಲಿಗೆ ಕಾಗೆ ಸಂತತಿ ಉಳಿವಿಗೆ ಸರಕಾರಕ್ಕೆ ಹಕ್ಕೊತ್ತಾಯ ಮಾಡಬೇಕು. ಮರಗಳನ್ನು ಕತ್ತರಿಸುವುದನ್ನು ತಡೆಯಬೇಕು. ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಮೊಬೈಲ್ ಟವರ್ ಗಳಿಗೆ ಕಡಿವಾಣ ಹಾಕಬೇಕು. ಕಾಗೆಗಳಿಗೆ ವಿಷ ಹಾಕಿ ಕೊಲ್ಲುತ್ತಿರುವ ವಿಚಾರ ಗೊತ್ತಾದಲ್ಲಿ ಅದನ್ನು ತಡೆಯ ಬೇಕು. ಕಾಗೆಗಳನ್ನು ಕೊಲ್ಲುವುದು ಅಪರಾಧ ಎಂದು ಸರಕಾರದಿಂದ ಘೋಷಣೆ ಆಗಬೇಕು ಹಾಗೂ ಜಾಹೀರಾತುಗಳ ಮೂಲಕ ಕಾಗೆ ಉಳಿವುದು ಎಷ್ಟು ಮುಖ್ಯ ಎಂಬ ಜಾಗೃತಿ ಮೂಡಿಸಬೇಕು.

ವೈದ್ಯರನ್ನು ದೂಷಿಸುತ್ತೇವೆಯೆ?
ನಮಗೆ ಯಾವುದಾದರೂ ಆರೋಗ್ಯ ಬಾಧೆ ಭವಿಷ್ಯದಲ್ಲಿ ಬರುವುದು ಇದ್ದಲ್ಲಿ ಅದನ್ನು ಮೊದಲೇ ಅರಿತು ವೈದ್ಯರು ತಿಳಿಸುತ್ತಾರೆ. ಹಾಗೆಂದು ಆ ಕಾರಣಕ್ಕೆ ವೈದ್ಯರನ್ನು ದೂಷಿಸುವುದಿಲ್ಲ. ಆದರೆ ನಮ್ಮ ಮನೆ ಹೊಕ್ಕು ಅಥವಾ ತಲೆ ಮೇಲೆ ಕುಟ್ಟಿ ಇತ್ಯಾದಿಗಳಿಂದ ಮುಂದೆ ಬರುವ ಅನಿಷ್ಟದ ಸೂಚನೆಯನ್ನು ಪುಕ್ಕಟೆ ಕೊಡುವ ಕಾಗೆಗಳಿಗೆ ಅಹಿತವನ್ನು ಬಯಸುವುದು ಅಮಾನವೀಯ. ಮನೆ ಒಳಗೆ ಕಾಗೆ ಬರುವಂತೆ ಇಲ್ಲ. ಸರಿ ಬಿಡಿ, ಆದರೆ ಹೊರ ಪ್ರಪಂಚದಲ್ಲಿಯೂ ಸ್ವಚ್ಛಂದವಾಗಿ ಹಾರಾಡುತ್ತ ಬದುಕುವ ಹಕ್ಕು ಕಾಗೆಗಳಿಗೆ ನಾವು ನೀಡದಿದ್ದಲ್ಲಿ ಒಬ್ಬ ಶನೈಶ್ಚರನಿಗೆ ಅಷ್ಟೇ ಅಲ್ಲ, ಪ್ರಕೃತಿಯ ಸಿಟ್ಟಿಗೂ ಗುರಿ ಆಗಬೇಕಾದೀತು ಎಚ್ಚರ. ವಿಠ್ಠಲ ಭಟ್ಟ ಕೆಕ್ಕಾರು ಸಂಪರ್ಕ ಸಂಖ್ಯೆ 9845682380.












Click it and Unblock the Notifications