HT ಹತ್ತಿ ವಿರುದ್ಧ ಹೋರಾಟಕ್ಕೆ ಕಾಲ ಪಕ್ವ; ಸರ್ಕಾರ, ಚಳವಳಿಗಳು ನಿಗಾವಹಿಸಬೇಕು
ತೆಲಂಗಾಣ ರಾಜ್ಯದಲ್ಲಿ ಎಲ್ಲೆಡೆ ಉತ್ತಮ ಮುಂಗಾರು ಮಳೆಯಾಗಿ ಹತ್ತಿ ಬೆಳೆಗಾರರು ದಾಖಲೆಯ 60 ಲಕ್ಷ ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆದಿದ್ದಾರೆ. ಒಟ್ಟಾರೆ ಹತ್ತಿ ಬೆಳೆಯಲಾಗುತ್ತಿರುವ ಪ್ರದೇಶದ ಸುಮಾರು ಶೇಕಡಾ 10 ರಷ್ಟು, ಅಂದರೆ ಸುಮಾರು 5 ರಿಂದ 6 ಲಕ್ಷ ಎಕರೆ ಪ್ರದೇಶದಲ್ಲಿ HT ಹತ್ತಿ (Herbicide tolerant) ಬೆಳೆಯಲಾಗುತ್ತಿದೆ.
Recommended Video
ಈ ಹತ್ತಿಯನ್ನು ಬೆಳೆಯಲು ರಾಜ್ಯದಲ್ಲಿ ಅನುಮತಿ ಇಲ್ಲ. ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೆಲ್ಲೂ ಅನುಮತಿ ಇಲ್ಲವಾದರೂ HT ಹತ್ತಿ ಬೀಜಗಳ ಮಾರಾಟ ಮತ್ತು ಅದನ್ನು ಬೆಳೆಯುವುದು ಕಾನೂನುಬಾಹಿರವಾಗಿ ನಡೆಯುತ್ತಲೇ ಇದೆ. ಈಚೆಗೆ ಮಹಾರಾಷ್ಟ್ರದ ರೈತರು HT ಹತ್ತಿ ಬೀಜಗಳನ್ನು ಬಿತ್ತನೆ ಮಾಡಿ ಅವು ಮೊಳಕೆ ಬಾರದೆ ಬೇಸ್ತು ಬಿದ್ದದ್ದನ್ನು ಇಲ್ಲಿ ಸ್ಮರಿಸಬಹುದು.
ಬೀಜಗಳ ಕಳ್ಳ ಮಾರಾಟ
ತೆಲಂಗಾಣದ ಗಡಿ ಪ್ರದೇಶಗಳಲ್ಲಿ ಈ ಬೀಜಗಳ ಕಳ್ಳ ಮಾರಾಟ ನಡೆದಿದೆ. ರೈತರು ಅಲ್ಲಿಂದಲೇ ಅವುಗಳನ್ನು ಕೊಂಡು ತರುತ್ತಿದ್ದಾರೆ. ಈ ಬೀಜಗಳಿಂದ ರೈತರಿಗೆ ಬಹಳ ದೊಡ್ಡ ಏಟು ಬೀಳಲಿದೆ ಎಂದು ಅಲ್ಲಿನ ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ HT ಹತ್ತಿ ಬೆಳೆಯಲಾಗುತ್ತಿದೆ ಎಂಬ ರೈತ ಮುಖಂಡರ ಆರೋಪವನ್ನು ತಳ್ಳಿಹಾಕಿರುವ ರಾಜ್ಯದ ಕೃಷಿ ಆಯುಕ್ತ ಬಿ.ಜನಾರ್ಧನ್ ರೆಡ್ಡಿ, " ಈ ಬಗ್ಗೆ ಯಾರಲ್ಲಿಯೂ ನಿಖರ ಅಂಕಿ ಅಂಶಗಳಿಲ್ಲ" ಎಂದು ಹೇಳಿದ್ದಾರೆ.
ಹತ್ತಿ ಬೆಳೆಯುವ ರೈತರಿಗೆ ಕೃಷಿ ಇಲಾಖೆಯ ಸಲಹೆಗಳು
ಕಾನೂನುಬಾಹಿರವಾಗಿ ಹತ್ತಿ ಬೆಳೆಯುತ್ತಿರುವುದು ಮೊದಲಲ್ಲ
ಮುಂದುವರೆದು, ತಮ್ಮ ಇಲಾಖೆಯು ಕಳಪೆ ಬಿತ್ತನೆ ಬೀಜ ಮಾರಾಟಗಾರರನ್ನು ಪತ್ತೆ ಹಚ್ಚಲು ಅನೇಕ ಬಾರಿ ದಾಳಿ ಮಾಡಿರುವುದಾಗಿ ತಿಳಿಸಿರುವುದಲ್ಲದೆ ಈಗಾಗಲೇ ಸುಮಾರು 100 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಗುಜರಾತ್, ರಾಜಸ್ಥಾನ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಕಾನೂನು ಬಾಹಿರವಾಗಿ HT ಹತ್ತಿ ಬೆಳೆಯುತ್ತಿರುವುದು ಇದೇ ಮೊದಲಲ್ಲ. ಈ ಬಗ್ಗೆ ಅನೇಕ ಬಾರಿ ಗದ್ದಲವೆದ್ದಿದೆ.
ರೈತ ಚಳವಳಿಯಿಂದ ಈ ಕೆಲಸ ಆಗಬೇಕಿದೆ
ಇರುಳು ಕಂಡ ಬಾವಿಗೆ ಹಗಲು ಬೀಳುವ ದಡ್ಡತನ/ಪ್ರವೃತ್ತಿ ರೈತ ಸಮುದಾಯದಲ್ಲಿ ಪದೇ ಪದೇ ಪ್ರಕಟವಾಗುತ್ತಲೇ ಇದೆ. ಈ ಬಗ್ಗೆ ದೇಶದಾದ್ಯಂತ ಅರಿವಿನಾಂದೋಲನ ನಡೆಸಬೇಕಿರುವ ತುರ್ತು ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಆ ಕೆಲಸ ರೈತ ಚಳವಳಿಗಳು ಮಾಡಬೇಕಿದೆ.
ಬಿಟಿ ಬಗ್ಗೆ ವಕಾಲತ್ತು; ರಾತ್ರಿ ಕಂಡ ಬಾವಿಗೆ ಹಗಲು ಬಿದ್ದ ರೈತರು...
"ಊರಿಗೆ ಬಂದವಳು ನೀರಿಗೆ ಬಾರದೆ ಇರುವಳೇ" ಎಂಬ ಮಾತಿನಂತೆ ಇದೀಗ ಆಂಧ್ರ ತೆಲಂಗಾಣದಲ್ಲಿ ಕಳ್ಳ ಮಾರ್ಗ ಹಿಡಿದಿರುವ HT ಹತ್ತಿ ಬೀಜ ಮಾರಾಟಗಾರರು ಕರ್ನಾಟಕದಲ್ಲೂ ತಮ್ಮ ಕೈಚಳಕ ತೋರಬಹುದು. ಇಲ್ಲಿನ ರೈತರೂ ಅವುಗಳ ಜಾಲಕ್ಕೆ ಬಲಿಬೀಳಬಹುದು. ಆ ಬಗ್ಗೆ ಸರ್ಕಾರ ನಿಗಾವಹಿಸಬೇಕಿದೆ.
ಆಕ್ರೋಶ ವ್ಯಕ್ತಪಡಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್
ಕೃಷಿ ಸಚಿವ ಬಿ.ಸಿ.ಪಾಟೀಲ್ ಕಳಪೆ ಬಿತ್ತನೆ ಬೀಜಗಳ ಬಗ್ಗೆ ಆಗಾಗ್ಗೆ ಆಕ್ರೋಶ ವ್ಯಕ್ತಪಡಿಸಿರುವುದು ಸುದ್ದಿಯಾಗಿದೆ. ಕಳಪೆ ಬೀಜಗಳನ್ನು ಮಾರಾಟ ಮಾಡುವವರನ್ನು ಪೋಷಿಸಿದರೆ ‘ತಾಯಿಯೇ ಮಗುವಿಗೆ ವಿಷವುಣಿಸಿದಂತೆ" ಎಂದೂ ಅವರು ಭಾವನಾತ್ಮಕವಾಗಿ ಮಾತನಾಡಿದ್ದರು. ಇದೀಗ ಅಕ್ಕ ಪಕ್ಕದ ರಾಜ್ಯಗಳಲ್ಲಿ ಕಾನೂನು ಬಾಹಿರ HT ಹತ್ತಿ ಬೆಳೆಯಲಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕೃಷಿ ಸಚಿವರು ರಾಜ್ಯದಲ್ಲಿ ಅಂತಹ ಸನ್ನಿವೇಶ ಬಾರದಂತೆ ತೀವ್ರ ನಿಗಾವಹಿಸಬೇಕಾಗಿರುವುದು ಈ ಕ್ಷಣದ ತುರ್ತು.