50ರ ಹೊಸ್ತಿಲಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಕಾರ್ಯಕ್ರಮಕ್ಕೆ ಸಿದ್ಧತೆ ಹೇಗಿದೆ?
ಚಾಮರಾಜನಗರ, ನವೆಂಬರ್,10: ರಾಜ್ಯವಷ್ಟೇ ಅಲ್ಲದೇ ದೇಶದ ಜನಪ್ರಿಯ ಹಾಗೂ ಟೈಗರ್ ಪ್ರಾಜೆಕ್ಟ್ನ ಮೊದಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 50ರ ಹೊಸ್ತಿಲಿಗೆ ಬಂದು ನಿಂತಿದೆ. 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಬೆಂಗಾಲ್ ಟೈಗರ್ ಅನ್ನು ಉಳಿಸುವ ಸಲುವಾಗಿ ದೇಶದ 9 ಕಡೆಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದರು. ಆಗಸ್ಟ್ 9ರ ಪಟ್ಟಿಯಲ್ಲಿ ಬಂಡೀಪುರವೂ ಒಂದಾಗಿದ್ದು, ಮೊದಲಿಗೆ ಕೇವಲ 12 ಹುಲಿಗಳಿದ್ದವು. ಇದೀಗ ಇಲ್ಲಿ ಹುಲಿಗಳದ್ದೇ ಆಡಳಿತ ಆಗಿರುವುದು ಸಂತಸದ ವಿಚಾರವಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಅರಣ್ಯ, ಹುಲಿ ಸಂರಕ್ಷಿತ ಅರಣ್ಯವಾಗಿ 50ನೇ ವಸಂತಕ್ಕೆ ಕಾಲಿಡುತ್ತಿದೆ. ಆದ್ದರಿಂದ ವರ್ಷಪೂರ್ತಿ ಕಾರ್ಯಕ್ರಮ ನಡೆಸಲು ಅರಣ್ಯ ಇಲಾಖೆ ಉದ್ದೇಶಿಸಿದೆ. 13 ವಲಯವಿರುವ 1,200 ಚದರ ಕಿಲೋ ಮೀಟರ್ ವ್ಯಾಪ್ತಿಯ ಅರಣ್ಯದಲ್ಲಿ ಆಗ ಕೇವಲ 10 ರಿಂದ 13 ಹುಲಿಗಳಷ್ಟೆ ಇದ್ದವು. ಇದಾದ ಬಳಿಕ ಉತ್ತಮವಾದ ಸಂರಕ್ಷಣೆಯಿಂದ ಇದೀಗ ಬಂಡೀಪುರದಲ್ಲಿ 140ಕ್ಕೂ ಹೆಚ್ಚು ಹುಲಿಗಳಿವೆ ಎಂದು ಕಳೆದ ಹುಲಿಗಣತಿ ವೇಳೆ ಅಂದಾಜು ಮಾಡಲಾಗಿತ್ತು. ಅಷ್ಟೇ ಅಲ್ಲದೆ ಉತ್ತಮವಾದ ಸಂರಕ್ಷಣೆಯಿಂದ ಕಾಡಿನಲ್ಲಿ ಪ್ರಾಣಿಗಳ ಭೇಟೆ ಆಗುತ್ತಿದ್ದ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆ ಕಂಡಿದೆ.
ಬಿಳಿಗಿರಿರಂಗನಾಥ ಸ್ವಾಮಿ ಹುಂಡಿಯಲ್ಲಿ 37 ಲಕ್ಷ ರು ಸಂಗ್ರಹ, ಅಮೆರಿಕನ್ ಡಾಲರ್ಗಳು ಪತ್ತೆ
ಹುಲಿಗಳ ನಾಡು ಎಂದೇ ಪ್ರಸಿದ್ಧವಾದ ಜಿಲ್ಲೆ?
ಇದೀಗ ಹುಲಿಗಳಂತಹ ಮಾಂಸಹಾರಿ ಪ್ರಾಣಿಗಳಿಗೆ ಬೇಕಾದ ಬೇಟೆ ಪ್ರಾಣಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣದಿಂದಲೇ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿಯೇ ಚಾಮರಾಜನಗರ ಜಿಲ್ಲೆಯನ್ನು ಹುಲಿಗಳ ನಾಡು ಎಂದು ಕರೆಯಲಾಗುತ್ತದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯವಾಗಿ ಘೋಷಣೆಯಾದ ಸಂದರ್ಭದಲ್ಲಿ ಕಳ್ಳಬೇಟೆಯೂ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಕಾನೂನುಗಳು ಕಠಿಣವಾದ ಹಿನ್ನೆಲೆ ವರ್ಷ ಕಳೆಯುತ್ತಿದ್ದಂತೆ ಕಳ್ಳಬೇಟೆ ಪ್ರಕರಣಗಳು ಕೂಡ ತೀರ ಕಡಿಮೆ ಆಗಿದೆ. ಇದರಿಂದ ಕಾಡು ಪ್ರಾಣಿಗಳ ಸಂತತಿಯೂ ಕೂಡ ದುಪ್ಪಟ್ಟಾಗಿದೆ.
ಅರಣ್ಯ ಇಲಾಖೆಯಿಂದ ಕಾರ್ಯಕ್ರಮ
ಬಂಡೀಪುರ 50ರ ವಸಂತ ಪೂರೈಸಿರುವ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಈ ಸಂಭ್ರಮವನ್ನು ವಿಭಿನ್ನವಾಗಿ ಆಚರಣೆ ಮಾಡಬೇಕು ಎಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಮೂಲಕ ಅರಣ್ಯ ಇಲಾಖೆಯಿಂದ ವರ್ಷ ಪೂರ್ತಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ಚಿಂತಿಸಲಾಗಿದೆ. ಕಾಡು ಪ್ರಾಣಿಗಳ ಕುರಿತು ಸಾಕ್ಷ್ಯ ಚಿತ್ರ, ಪ್ರದರ್ಶನ, ಪರಿಸರ ಪ್ರಿಯರೊಂದಿಗೆ ಸಂವಾದ, ಅಧಿಕಾರಿಗಳಿಗೆ ಸನ್ಮಾನ, ಕಾರ್ಯಾಗಾರ ಸೇರಿದಂತೆ ಇನ್ನಿತರ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ದೇಶ, ವಿದೇಶಗಳಿಂದ ಪ್ರವಾಸಿಗರ ಆಗಮನ
ಬಂಡೀಪುರದಲ್ಲಿ ಈ ಅರಣ್ಯ ಪ್ರವಾಸಿಗರಿಗೆ ಬಹುಮುಖ್ಯ ಆಕರ್ಷಣೆ ಸಫಾರಿ ಆಗಿದ್ದು, ಇಲ್ಲಿಗೆ ದೇಶ, ವಿದೇಶಗಳಿಂದ ಜನರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಲೇ ಇದ್ದಾರೆ. ದಿನದ ಬೆಳಗ್ಗೆ ಮತ್ತು ಸಂಜೆ ಸಫಾರಿಗೆ ವ್ಯವಸ್ಥೆಯಿದ್ದು, ಬಂಡೀಪುರಕ್ಕೆ ಆದಾಯದ ಮೂಲವೂ ಸಹ ಸಫಾರಿ ಆಗಿದೆ. ಇಲ್ಲಿ ಕೆಲವು ವರ್ಷಗಳ ಹಿಂದೆ ಇದ್ದ ಪ್ರಿನ್ಸ್ ಎಂಬ ಟೈಗರ್ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರಾಣಿ ಆಗಿತ್ತು. ಯಾರಿಗೂ ಹೆದರದೇ ಸಫಾರಿ ವಾಹನಗಳ ಸಮೀಪದಲ್ಲೇ ತುಂಟಾಟ ಆಡುತ್ತಿದ್ದ ಪ್ರಿನ್ಸ್ ಟೈಗರ್ ವಿದೇಶಗಳಲ್ಲೂ ಹೆಸರುವಾಸಿಯಾಗಿತ್ತು. ಒಂದು ಕಾಲದಲ್ಲಿ ರಾಜ- ಮಹರಾಜರು ಬೇಟೆಯಾಡುತ್ತಿದ್ದ ಕಾಡು, ಕಳ್ಳರು ಅಟ್ಟಹಾಸ ಮೆರೆಯುತ್ತಿದ್ದ ಅರಣ್ಯ ಇದೀಗ ಹುಲಿಗಾಳ ಅವಾಸ ಸ್ಥಾನವಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿಶೇಷ
ಇಲ್ಲಿನ ವ್ಯಾಘ್ರಗಳ ತೀಕ್ಷ್ಣ ನೋಟ, ಗಾಂಭೀರ್ಯದ ಹೆಜ್ಜೆಯನ್ನು ನೋಡುವುದೇ ಒಂದು ಖುಷಿ ಆಗಿರುತ್ತದೆ. ಪ್ರಪಂಚಾದ್ಯಂತ ಹುಲಿಗಳು ಎದುರಿಸುತ್ತಿರುವ ಅಪಾಯ, ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ವ್ಯಾಘ್ರ ದಿನವನ್ನು ಆಚರಿಸಲಾಗುತ್ತದೆ. ಕಾಡಿನ ನಾಶ, ಅಕ್ರಮ ಬೇಟೆ ಸೇರಿದಂತೆ ಹಲವು ಕಾರಣಗಳು ಹುಲಿಗಳನ್ನೂ ಅಳಿವಿನಂಚಿನತ್ತ ಕೊಂಡೊಯ್ಯುತ್ತಿದೆ. ಇದೇ ಕಾರಣದಿಂದ ಹುಲಿಗಳ ರಕ್ಷಣೆಯ ಜಾಗೃತಿಯ ಉದ್ದೇಶದಿಂದ ಅಂತಾರಾಷ್ಟ್ರೀಯ ಹುಲಿ ದಿನ ಆರಂಭವಾಗಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ವಿಚಾರವಾಗಿದೆ.