ಓದುಗರ ಓಲೆ : 'ನಿಷ್ಕಳಂಕ' ವ್ಯಕ್ತಿತ್ವದ ಶ್ರೀಗಳ ವಿರುದ್ಧ ಅಪಪ್ರಚಾರ
ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ ಅವರನ್ನು ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ರಾಮಚಂದ್ರಾಪುರ ಮಠದ ಶ್ರೀಗಳಾದ ರಾಘವೇಶ್ವರ ಶ್ರೀಗಳ ವಿರುದ್ಧ ಕೋರ್ಟಿನಲ್ಲಿ ಕೇಸು ದಾಖಲಾಗಿದೆ. ವಿಚಾರಣೆ ಕೂಡ ನಡೆಯುತ್ತಿದೆ. ಅವರು ಆರೋಪಿ ಸ್ಥಾನದಲ್ಲಿ ನಿಂತಿರುವುದರಿಂದ ಮರ್ಯಾದೆಯಿಂದ ಪೀಠತ್ಯಾಗ ಮಾಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.
ಇದಕ್ಕೆ ಪ್ರತಿಯಾಗಿ ಆರೋಪವೇನಾದರೂ ಸಾಬೀತಾದರೆ ಪೀಠತ್ಯಾಗ ಮಾತ್ರವಲ್ಲ ಶ್ರೀಗಳು ದೇಹತ್ಯಾಗಕ್ಕೂ ಸಿದ್ಧರಿದ್ದಾರೆ ಎಂದು ಮಠದ ವಕ್ತಾರರು ಪ್ರತ್ಯುತ್ತರ ನೀಡಿದ್ದಾರೆ. 'ಸರ್ವಸಂಗವನ್ನು ಪರಿತ್ಯಾಗ ಮಾಡಿದ ನಮಗೆ ಮಾನ ಅಪಮಾನ, ಸಾವು ನೋವು ಎಲ್ಲವೂ ಒಂದೇ' ಎಂದು ಹೇಳಿಕೆ ನೀಡಿದ್ದ ಶ್ರೀಗಳ ಬಗ್ಗೆ ಮಂಜುನಾಥ ಹೆಗಡೆ ಎಂಬುವವರು ಒಂದು ಪತ್ರ ಬರೆದಿದ್ದಾರೆ. ಇದನ್ನು ಇಲ್ಲಿ ಓದಿರಿ, ನಿಮ್ಮ ಅಭಿಪ್ರಾಯವನ್ನು ಮಂಡಿಸಿರಿ.
***
ರಾಘವೇಶ್ವರ ಭಾರತಿ ಶ್ರೀಗಳು ಪೀಠತ್ಯಾಗ ಮಾತ್ರವಲ್ಲ ದೇಹತ್ಯಾಗಕ್ಕೂ ಸಿದ್ಧ ಎಂಬ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳನ್ನು ನೋಡಿ ಅವರಿಗೆ ಈ ವಿಚಾರದಲ್ಲಿ ಕೆಲ ವಾಹಿನಿಗಳು ಮತ್ತು ಕೆಲವು ಟ್ಯಾಬ್ಲಾಯ್ಡ್ ಗಳ ಮಿತಿಮೀರಿದ ಅತಿರಂಜಕ ಅಪಪ್ರಚಾರದ ಹೊರತು ಬೇರೆ ಯಾವ ಮಾಹಿತಿ ಕೂಡ ಇಲ್ಲ ಎಂಬುದು ತಿಳಿಯಿತು.
1. ಸ್ವಾಮಿಗಳು ಈಗಾಗಲೇ 60 ಗಂಟೆಗಳ ಕಾಲ ವಿಚಾರಣೆಗೆ ಸಹಕರಿಸಿದ್ದಾರೆ. ಅದರಲ್ಲಿ ಅವರ ಮೇಲಿನ ಆರೋಪಕ್ಕೆ ಪೂರಕವಾದ ಒಂದೇ ಒಂದು ಸುಳಿವು ಕೂಡ ದೊರಕಿಲ್ಲ!
2. ಈಗಾಗಲೇ ಅಗತ್ಯ ವೈದ್ಯಕೀಯ ಪರೀಕ್ಷೆಗಳು ನಡೆದು ಆರೋಪ ಪಟ್ಟಿ ಕೂಡ ಸಲ್ಲಿಕೆ ಆಗಿದೆ. [ಮಾಧ್ಯಮಗಳೇ ಹೀಗೆ ಮಾಡಿದ್ರೆ? ಸ್ವಲ್ಪ ಯೋಚಿಸಿ ಸ್ವಾಮಿ!]
3. ಕಾನೂನು ತಜ್ಞ ಬೇಡ, ಒಬ್ಬ ಸಾಮಾನ್ಯ ಜ್ಞಾನ ಇರುವ ವ್ಯಕ್ತಿ ಕೂಡ ಈ ಆರೋಪ ಪಟ್ಟಿಯನ್ನು ನೋಡಿದರೆ ಇದು ಅಸಂಬದ್ಧ ಹೇಳಿಕೆಗಳ ಮೂಟೆ ಎಂಬುದನ್ನು ಗ್ರಹಿಸಬಹುದು! ಆದರೂ ಬಿ ರಿಪೋರ್ಟ್ ಆಗುವ ಕೇಸಿನ ಮೇಲೆ ಆರೋಪ ಪಟ್ಟಿ ಸಲ್ಲಿಕೆ ಆಗಿದೆ ಎಂದರೆ ತನಿಖಾ ತಂಡದ ಮೇಲೆ ಅದೆಷ್ಟು ಒತ್ತಡ ಇದ್ದಿರಬೇಕು?
4. ಆ ಮಹಿಳೆ ಮತ್ತು ಆಕೆಯ ಪರ ಇರುವ ಹೇಳಿಕೆಗಳೇ ಇದು ಸುಳ್ಳು ದೂರು ಎಂಬುದನ್ನು ಸಾಬೀತು ಮಾಡುತ್ತದೆ. ಅಷ್ಟು ಅಸಂಬದ್ಧ ಹೇಳಿಕೆಗಳು ಅವು. ಅನುಮಾನ ಇದ್ದಲ್ಲಿ ನ್ಯಾಯಾಲಯದ ಪ್ರಕ್ರೀಯೆ ನಡೆಯುವಾಗ ಗಮನಿಸಿ, ಅಲ್ಲಿಯ ತನಕ ತಾಳ್ಮೆ ಇರಲಿ.
5. ಪೀಠತ್ಯಾಗವೇ ಈ ಎಲ್ಲ ಷಡ್ಯಂತ್ರಗಳ ಏಕೈಕ ಗುರಿ. ಪ್ರತಿಯೊಂದು ಬೆಳವಣಿಗೆಗಳು ಕೊನೆಗೆ ಬಂದು ತಲುಪುವುದು ಅಲ್ಲಿಗೆ. ಹಾಗಾದರೆ ಪೀಠತ್ಯಾಗದಿಂದ ಯಾರಿಗೆ ಲಾಭ? ಅದಕ್ಕಾಗಿಯೆ ಆಗ್ರಹ ಮಾಡುತ್ತಿರುವುದು ಯಾಕೆ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಈ ಪ್ರಕರಣದ ಸಾರವನ್ನು ತಿಳಿದಂತೆಯೇ.
6. ಈ ಮಠದ ಸ್ಥಾಪಕರು ಶಂಕರಾಚಾರ್ಯರು, ಸುಮಾರು 1300 ವರ್ಷಗಳ ಹಿಂದೆ ಸ್ಥಾಪಿಸಿದರು. ಪ್ರಸ್ತುತ ಇರುವವರು ಪೀಠದ 36ನೆಯ ಯತಿಗಳು. ನಮ್ಮ ದೇಶದಲ್ಲಿ ಇರುವ ಮಠಗಳ ಪೈಕಿ ಯತಿಗಳಿಗೆ ಅತ್ಯಂತ ಬಿಗಿಯಾದ ಕಟ್ಟುಪಾಡುಗಳು ಇರುವ ಕೆಲವೇ ಕೆಲವು ಮಠಗಳಲ್ಲಿ ಈ ಗೋಕರ್ಣ ರಾಮಚಂದ್ರಪುರ ಮಠ ಕೂಡ ಒಂದು. ಪೀಠಕ್ಕೆ ಆಯ್ಕೆ ಮಾಡಬೇಕಾದರೆ ಹಲವಾರು ಅಗ್ನಿ ಪರೀಕ್ಷೆಗಳನ್ನು ಎದುರಿಸಿಯೇ ಬರಬೇಕಾಗುತ್ತದೆ.
7. ಈ ಮಠಕ್ಕೆ ಸುಮಾರು 19 ಸಮುದಾಯಗಳು ಪರಂಪರಾಗತವಾಗಿ ನಡೆದುಕೊಂಡು ಬಂದಿವೆ. ಕೇವಲ ಹವ್ಯಕ ಬ್ರಾಹ್ಮಣ ಸಮುದಾಯ ಮಾತ್ರ ಅಲ್ಲ. ಕೇವಲ ಹವ್ಯಕರ ಲೆಕ್ಕ ಹಾಕಿದರೂ ಸುಮಾರು 5 ಲಕ್ಷ ಜನ ಇರುವ ಸಮಾಜದಲ್ಲಿ 500 ಜನ ವಿರೋಧಿಗಳೂ ಇಲ್ಲ! ಅಷ್ಟು ಕಡಿಮೆ ಅವರ ಸಂಖ್ಯೆ. ಹಾಗೆ ವಿರೋಧ ಮಾಡುತ್ತಾ ಇರುವವರು, ಅವರ ಬೆಂಬಲಿಗಳು. ಏನೋ ಸ್ವಾರ್ಥ ಸಾಧನೆ ಮಾಡಲು ಹೋಗಿ ಮಠ ಅಥವಾ ಸ್ವಾಮಿಗಳಿಂದ ತಡೆಯಲ್ಪತ್ತವರು ಅಷ್ಟೇ. [ಹವ್ಯಕ ಬ್ರಾಹ್ಮಣ ಬದುಕು ಮತ್ತು ವಿವಾಹ ಪದ್ಧತಿ]
8. ಅತ್ಯಂತ ಸುಶಿಕ್ಷಿತ ಸಮುದಾಯಗಳಲ್ಲಿ ಒಂದಾದ ಹವ್ಯಕ ಸಮುದಾಯ ಇಂದಿಗೂ ಶ್ರೀಗಳ ಬೆಂಬಲಕ್ಕೆ ನಿಂತಿದೆ ಯಾಕಿರಬಹುದು? ನಮ್ಮ ರಾಜ್ಯ/ದೇಶದ ಮುಖ್ಯಸ್ಥರೂ ಕೂಡ ಶುದ್ಧ ಚಾರಿತ್ರ್ಯ ಹೊಂದಿರಬೇಕು ಎಂದು ಬಯಸುವ ನಾವು ಒಂದು ಆಧ್ಯಾತ್ಮಿಕ ಕೇಂದ್ರದ ಪ್ರಮುಖರು ನೂರಕ್ಕೆ ನೂರು ಪರಿಶುದ್ಧರಾಗಿರಬೇಕು ಎಂದೇ ಬಯಸುತ್ತೇವೆ. ಶ್ರೀಗಳ "ನಿಷ್ಕಳಂಕ" ವ್ಯಕ್ತಿತ್ವದ ಪರಿಚಯ ಇದ್ದ ಕಾರಣಕ್ಕಾಗಿಯೇ ಈ ಸಮಾಜ ಶ್ರೀಗಳ ಜೊತೆಗೆ ಇರುವುದು.
9. ಈ ಷಡ್ಯಂತ್ರದಲ್ಲಿ ಆರೋಪ ಮಾಡಿದವರು ಕೇವಲ ಆಯುಧ ಅಷ್ಟೇ!