ಮೈಸೂರಿನ ವೈದ್ಯ ಶಂಕರ್ ಗೆ ಯುಕೆನಲ್ಲಿ ಸನ್ಮಾನ
ವೈದ್ಯ ಶಂಕರ್ ಅವರು ಕಲಿಕೆ ಸಮಸ್ಯೆಗೆ (ಈ ಪೈಕಿ ಹಲವರಿಗೆ ಎಪಿಲೆಪ್ಸಿ ಕೂಡ ಇದೆ) ಸಂಬಂಧಿಸಿದಂತೆ ನೀಡಿದ ಸೇವೆಯನ್ನು ಪರಿಗಣಿಸಿ ಹೊಸ ವರ್ಷದ ಸಂದರ್ಭದಲ್ಲಿ ಯುನೈಟೆಡ್ ಕಿಂಗ್ ಡಮ್ ನಲ್ಲಿ ಗೌರವ ನೀಡಲಾಗಿದೆ. ಕಲಿಕೆ ಸಮಸ್ಯೆ ಇರುವವರ ಪಾಲಿಗೆ ಆಶಾಕಿರಣದಂತಿರುವ ಶಂಕರ್ ಅವರು ಸುಡೆಪ್ (SUDEP) ಜತೆಗೆ ಕೆಲಸ ನಿರ್ವಹಿಸುತ್ತಿದ್ದಾರೆ.
ಡಾ.ಶಂಕರ್ ಅವರು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದು, ಎಪಿಲೆಪ್ಸಿಯಿಂದ ಸಾವುಂಟಾಗುವ ಕಾರಣಗಳನ್ನು ಪತ್ತೆ ಹಚ್ಚಿದ್ದಾರೆ. ಶಂಕರ್ ರ ಸಂಶೋಧನೆಯ ಮೂಲಕ ಎಪಿಲೆಪ್ಸಿ ಹಾಗೂ ಕಲಿಕೆ ಸಮಸ್ಯೆ ಇರುವವರಿಗೆ ಬಹಳ ಸಹಾಯ ಆಗಿದೆ. ಅಷ್ಟೇ ಅಲ್ಲ, ಎಪಿಲೆಪ್ಸಿಯಿಂದ ಉಂಟಾಗುತ್ತಿದ್ದ ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗಿದೆ.
ಯುನೈಟೆಡ್ ಕಿಂಗ್ ಡಮ್ ನಲ್ಲಿ ಎಪಿಲೆಪ್ಸಿ ಹಾಗೂ ಕಲಿಕೆ ಸಮಸ್ಯೆ ಇರುವವರು ಒಂದೂಕಾಲು ಲಕ್ಷ ಮಂದಿ ಇದ್ದಾರೆ. ಯುಕೆನಲ್ಲಿರುವ ರೋಗಿಗಳ ಪೈಕಿ ಕಾಲು ಭಾಗದಷ್ಟು ಮಂದಿಗೆ ಎಪಿಲೆಪ್ಸಿ ಇದೆ. ಅಧ್ಯಯನಗಳು ಹೊರಹಾಕಿರುವ ಮಾಹಿತಿ ಪ್ರಕಾರ ಎಪಿಲೆಪ್ಸಿ ಹಾಗೂ ಕಲಿಕೆ ಸಮಸ್ಯೆ ಇರುವವರಲ್ಲಿ ದಿಢೀರ್ ಸಾವಿಗೀಡಾಗುವ ಪ್ರಮಾಣ ಹೆಚ್ಚು ಎಂದು ತಿಳಿದುಬಂದಿದೆ.