ಬ್ರಿಟನ್ನಿನಿಂದ ಬಸವೇಶ್ವರ ಮೂರ್ತಿ ಸ್ಥಾಪನೆಗೆ ಒಪ್ಪಿಗೆ
ಲಂಡನ್, ಜ. 28 : ಐತಿಹಾಸಿಕ ಬ್ರಿಟಿಷ್ ಪಾರ್ಲಿಮೆಂಟಿನ ಎದುರುಗಡೆ, ಥೇಮ್ಸ್ ನದಿಯ ದಡದಲ್ಲಿ ಐತಿಹಾಸಿಕ ಅಲ್ಬರ್ಟ್ ಎಂಬ್ಯಾಂಕ್ಮೆಂಟ್ ಮೇಲೆ ಮತ್ತು ಬಿಗ್ ಬೆನ್ ಬಳಿಯಲ್ಲಿ ಕಂಚಿನಿಂದ ತಯಾರಿಸಲಾಗಿರುವ ಬಸವಣ್ಣನ ಬೃಹತ್ ಪುತ್ಥಳಿಯನ್ನು ಸ್ಥಾಪಿಸಲು ಬ್ರಿಟನ್ನಿನ ಸಂಸ್ಕೃತಿ ಮಾಧ್ಯಮ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ಅನುಮತಿ ನೀಡಿದ್ದಾರೆ.
ಹನ್ನೆರಡನೇ ಶತಮಾನದಲ್ಲಿ ಕ್ರಾಂತಿಗೆ ಕಾರಣರಾಗಿದ್ದ ಜಗಜ್ಯೋತಿ ಬಸವೇಶ್ವರ ಅವರ ಕಂಚಿನ ಪುತ್ಥಳಿಯನ್ನು ಲಂಡನ್ ಬರೋ ಆಫ್ ಲ್ಯಾಂಬೆತ್ನಲ್ಲಿ ಸ್ಥಾಪಿಸಲಾಗುತ್ತಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಮೂರ್ತಿ ಸ್ಥಾಪನೆಗೆ ಗ್ರಾನೈಟ್ ಅಡಿಪೀಠ ನಿರ್ಮಿಸಲು ಲ್ಯಾಂಬೆತ್ ಕೌನ್ಸಿಲ್ ಅನುಮತಿ ನೀಡಿತ್ತು. ಸಂಸತ್ತಿನ ಅನುಮತಿ ದೊರೆಯುವುದೊಂದು ಬಾಕಿಯಿತ್ತು.
ಲ್ಯಾಂಬೆತ್ ಮೇಯರ್ ಆಗಿದ್ದ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರು ಬ್ರಿಟಿಷ್ ಪಾರ್ಲಿಮೆಂಟಿನ ಸ್ಪೀಕರ್ ಜಾನ್ ಬರ್ಕೌ ಅವರನ್ನು ಅಭಿನಂದಿಸಿ, ಬಸವೇಶ್ವರ ಮೂರ್ತಿಯ ಪ್ರತಿಕೃತಿಯನ್ನು ಅರ್ಪಿಸಿ ಧನ್ಯವಾದ ಹೇಳಿದರು. ಈ ಸಂದರ್ಭದಲ್ಲಿ ಭಾರತ್ ಫೋರ್ಜ್ನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಬಾಬಾ ಕಲ್ಯಾಣಿ ಮತ್ತು ಲಂಡನ್ ಐ ನಿರ್ಮಾತೃ ಡೆವಿಡ್ ಮಾರ್ಕ್ಸ್ ಅವರು ಉಪಸ್ಥಿತರಿದ್ದರು.
ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವ ಹೊಂದಿರುವ ಯುನೈಟೆಡ್ ಕಿಂಗಡಂನಲ್ಲಿ ಪ್ರಜಾಪ್ರಭುತ್ವದ ಕಲ್ಪನೆ ಹುಟ್ಟಿಕೊಳ್ಳುವ ಮೊದಲೇ 12ನೇ ಶತಮಾನದಲ್ಲಿ ತತ್ತ್ವಜ್ಞಾನಿ, ಕನ್ನಡ ಕವಿ ಬಸವೇಶ್ವರ ಅವರು ಪ್ರಜಾಪ್ರಭುತ್ವ, ಮಾನವ ಹಕ್ಕು, ಲಿಂಗ ಸಮಾನತೆಯನ್ನು ಬೆಂಬಲಿಸಿ ಕ್ರಾಂತಿ ಉಂಟುಮಾಡಿದ್ದರು ಎಂದು ಪಾರ್ಲಿಮೆಂಟಿನ ಸ್ಪೀಕರ್ ಜಾನ್ ಬರ್ಕೌ ಅವರು ಬಸವಣ್ಣನನ್ನು ಶ್ಲಾಘನೆ ಮಾಡಿದರು.
ಕಳೆದ ವರ್ಷ ಜೂನ್ ತಿಂಗಳಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಲ್ಯಾಂಬೆತ್ಗೆ ಭೇಟಿ ನೀಡಿ, ಬಸವೇಶ್ವರನ ಮೂರ್ತಿ ಸ್ಥಾಪನೆಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಲಂಡನ್ನಿನಲ್ಲಿ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಲು ಇಲ್ಲಿನ ಕನ್ನಡಿಗರು ಶ್ರಮಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದ ಅವರು, ಥೇಮ್ಸ್ ನದಿಯ ದಡದಲ್ಲಿ, ಪಾರ್ಲಿಮೆಂಟಿನ ಎದಿರು ಇರುವ ತಾಣದಲ್ಲಿ ಸ್ಥಾಪಿಸುತ್ತಿರುವುದರಿಂದ ಈ ತಾಣದ ಸೌಂದರ್ಯ ಇನ್ನೂ ಹೆಚ್ಚಲಿದೆ ಎಂದು ಹೇಳಿದ್ದರು.