Get Updates
Get notified of breaking news, exclusive insights, and must-see stories!

ಪರಿಣಾಮಕಾರಿಯಾಗಿ ಮೂಡಿಬಂದ ಸಾಂಬಶಿವ ಪ್ರಹಸನ

A scene from Sambashiva Prahasana
ಎರಡನೇ ನಾಟಕ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರ ಅವರ "ಸಾಂಬಶಿವ ಪ್ರಹಸನ". ಇದೂ ಅಷ್ಟೇ. ವಸ್ತು ಹೊಸದಲ್ಲ. ಆಳುವ ವರ್ಗದ ಭ್ರಷ್ಟತೆ, ಲಂಪಟತೆ, ಅನೈತಿಕತೆಗಳ ಬಗ್ಗೆ ನಾಟಕ ಬೀರುವ ವಿಡಂಬನಾತ್ಮಕ ನೋಟವೂ ಹೊಸದಲ್ಲ. ಒದೆಸಿಕೊಳ್ಳಲು, ಒದೆಯುವ ಕಾಲಿಗೆ ಮುತ್ತಿಡಲು ಸದಾ ಸಿದ್ಧವಾಗಿರುವ ಪ್ರಜೆಗಳ ನಡವಳಿಕೆಯೂ ಪರಿಚಿತವೇ.

ಊರ ಬೆಡಗಿಗೆ ಮಾರುಹೋದ ತಂದೆ-ಮಗ ಸಾಂಬ ಮತ್ತು ಶಿವ, ಅರ್ಥಹೀನ ಹಾಗು ಅಸಂಬದ್ಧ ಎನ್ನಬಹುದಾದ ಯೋಜನೆ ಹೂಡಿ, ದೇವರನ್ನೂ ಶಾಮೀಲು ಮಾಡಿಕೊಳ್ಳುತ್ತಾರೆ. ಕೈಲಾಗದ ದೇವರು ಕೊಡುವ ವರವಾದ ಕತ್ತೆ, ನಿಷ್ಪ್ರಯೋಜಕ ರಾಜನನ್ನು ವಿರೋಧಿಸಹೋದ ಜನರನ್ನು ಒದ್ದು ಅಧಿಕಾರಕ್ಕೆ ಬರುತ್ತದೆ. ಬಾಯಲ್ಲಿಟ್ಟುಕೊಂಡಾಕ್ಷಣ ಗಂಡಸನ್ನು ಹೆಂಗಸು ಮಾಡುವ ಮತ್ತು ಕೈಲಾಗದ ದೇವರು ಕೊಡುವ ಇನ್ನೊಂದು ವರ. ಅದನ್ನು ಉಪಯೋಗಿಸಿಕೊಂಡು ಸಾಂಬ ಬಂಗಾರಿಯಾಗುತ್ತಾನೆ. ಕತ್ತೆಗಿಂತ ಮೂರ್ಖ ಎನ್ನಬಹುದಾದ ಲಂಪಟ ರಾಜ ತಾನು ಒಂದು ಕತ್ತೆಯೇ ಎನ್ನುವುದನ್ನು ತೋರಿಸುತ್ತಾನೆ.

ರಾಜನ ಸುತ್ತ ತುಂಬಿರುವ ಭ್ರಷ್ಟ ಅಧಿಕಾರಿಗಳು, ಹೊಗಳುಭಟರು, ಇತ್ಯಾದಿ ಇತ್ಯಾದಿ ಅವರದೇ ಮಾತಿನಲ್ಲಿ "ಮಸಾಲೆ" ತುಂಬಿದ, 1987ರಲ್ಲಿ ಕಂಬಾರರು ಬರೆದ ಈ ನಾಟಕವನ್ನು ಇಂದು ನಮ್ಮೆದುರು ಪ್ರದರ್ಶಿಸುವ ಸಾಹಸಕ್ಕೆ ನಿರ್ದೇಶಕ ಮಧು ಕೃಷ್ಣಮೂರ್ತಿ ಅವರು ಕೈಹಾಕಿದ್ದು ಶ್ಲಾಘನೀಯವೇ. ನಾಟಕದ ಶೈಲಿ ಮತ್ತು ಓಟದಲ್ಲಿ ವ್ಯಂಗ್ಯ ಮತ್ತು ಹಾಸ್ಯ ಎರಡರ ಮಿಶ್ರಣವೂ ಇರುವಾಗ, ನಾಟಕದ ಕರ್ತೃವಿನ ನಿಜವಾದ ಸಂದೇಶವೇನು ಎನ್ನುವುದನ್ನು ಪರಿಣಾಮಕಾರಿಯಾಗಿ ತೋರಿಸಲು ಅಭಿನಯ ಅತೀ ಮುಖ್ಯ. ಈ ನಿಟ್ಟಿನಲ್ಲಿ ಮಧು ಅವರ ಫಾರ್ಮುಲಾ ಸಿಂಪಲ್ ಬಟ್ ಜೀನಿಯಸ್ ಕಣ್ರೀ.

ಬಹುಮುಖ ಪ್ರತಿಭೆಯ ಕಲಾವಿದ ಮಧು. ನಾಟಕವನ್ನು ನಿರ್ದೇಶಿಸಿ, ಸಾಂಬ ಮತ್ತು ಬಂಗಾರಿ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅಷ್ಟೇ ಪ್ರತಿಭಾವಂತರಾದ ಶ್ರೀವತ್ಸ ದುಗ್ಲಾಪುರ (ಕಾರಭಾರಿ), ಸಂತೋಷ್ ದೀಕ್ಷಿತ್ (ಶಿವ), ಸುಭಾಷ್ ಕೋಡ್ನಾಡ್ (ಡಿಂಗ್ ಡಾಂಗ್), ಜಗನ್ ರಘುನಾಥ್ (ರಾಜ), ರಾಮಪ್ರಸಾದ್ (ಸಾಹುಕಾರ), ಪೂರ್ಣಿಮಾ ರಾಮಪ್ರಸಾದ್ (ಸಾಹುಕಾರನ ಹೆಂಡತಿ), ಶಾಂತಲಾ ಭಂಡಿ (ಗಜನಿಂಬೆ), ಇತರ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿ ನಾಟಕಕ್ಕೆ ಜೀವ ತುಂಬಿದ್ದರಿಂದ, ನಾಟಕವು ಸರಸರ ಓಡಿದ್ದೇ ಅಲ್ಲದೇ ಹೊಟ್ಟೆಹುಣ್ಣಾಗುವಷ್ಟು ನಗಿಸಿತು. ಅಂದೆಂದೋ ಬರೆದ ನಾಟಕದ ಸಂದೇಶಗಳು ಇಂದಿಗೂ ಅನ್ವಯಿಸುವಂತವೇ ಎನ್ನುವುದನ್ನು ಸಮರ್ಪಕವಾಗಿ ಅಭಿನಯಿಸಿ ತೋರಿಸಿದ್ದು ಈ ಕಲಾವಿದರ ಪ್ರತಿಭೆಗೆ ಸಾಕ್ಷಿ.

ಎರಡೂ ನಾಟಕಗಳ ಅಭಿನಯ, ನಿರ್ದೇಶನಗಳ ಗುಣಮಟ್ಟಕ್ಕೆ ರಂಗದ ಮೇಲಿನ ಕಲಾವಿದರು ಎಷ್ಟು ಕಾರಣರಾದರೋ ಅಷ್ಟೇ ಕಾರಣರಾದವರು ರಂಗಸಜ್ಜಿಕೆ, ಉಡುಪು-ತೊಡಪುಗಳು, ಹಿಮ್ಮೇಳ ಗಾಯನ, ನೆಳಲು-ಬೆಳಕಿನ ಸಂಯೋಜನೆಗಳನ್ನು ನಿರ್ವಹಿಸಿದ ತೆರೆಮರೆಯ ಪ್ರತಿಭಾವಂತರು - ಶೇಷಪ್ರಸಾದ್ ಚಿಕ್ಕತ್ತೂರ್, ಸೌಜನ್ಯ ಕೇಣಿ, ಮೋನಿಕ ವೆಂಕಟೇಶಮೂರ್ತಿ, ವೀಣಾ ಗೌಡ, ರವಿ ನೀಲಕಂಠ್, ಎಚ್.ಸಿ. ಶ್ರೀನಿವಾಸ್, ಅಶ್ವಿನಿ ಗುರುಪ್ರಸಾದ್, ಅಭಿಜಿತ್ ವಾರ್ಖೇಡಿ, ಸಂತೋಶ್ ಕರುಹಟ್ಟಿ, ಪ್ರಿಯಾ ಹೆಗ್ಡೆ, ಲಕ್ಷ್ಮೀಶ್ ಭಟ್, ಹರಿಚರಣ್ ರಾಮಚಂದ್ರ.

ಮುಂದಿನ ವರ್ಷಗಳಲ್ಲೂ ನಾಟಕಚೈತ್ರ ಹೀಗೇ ಯಶಸ್ವಿಯಾಗಲಿ ಮತ್ತು ಬೇ ಏರಿಯಾ ಕನ್ನಡಿಗರಿಗೆ ಉತ್ತಮ ನಾಟಕಗಳನ್ನು ಪ್ರದರ್ಶಿಸುವುದರೊಂದಿಗೆ, ಸೇವಾ ಸಂಸ್ಥೆಗಳಿಗೆ ಧನಸಹಾಯ ಮಾಡುವ ಸದುದ್ದೇಶವನ್ನು ಮುಂದುವರೆಸಿಕೊಂಡು ಬರಲಿ ಎಂದು ಶುಭ ಹಾರೈಕೆಗಳನ್ನು ಸಲ್ಲಿಸೋಣ. [ಚಿತ್ರಗಳು : ಗಿರೀಶ ಪುಟ್ಟಸ್ವಾಮಿ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+