ನಗಿಸಿ ಸುಸ್ತಾಗಿಸಿದ ನಾಟಕ ನಂಗ್ಯಾಕೋ ಡೌಟು
ಲಕ್ಷ್ಮಣರಾವ್ ಅವರ ಈ ನಾಟಕದ ವಸ್ತು ಹೊಸದಲ್ಲ. ನಾಟಕದ ಪ್ರತಿಯೊಂದು ದೃಶ್ಯದಲ್ಲೂ ನಡೆಯುವ ಸಂಭಾಷಣೆಗಳು ಮುಂದೇನಾಗುತ್ತದೆ ಎನ್ನುವುದನ್ನು ಪರೋಕ್ಷವಾಗಿ, ಒಮ್ಮೊಮ್ಮೆ ನೇರವಾಗಿಯೂ ಸಹ ಸೂಚಿಸುತ್ತವೆ. "ಮುಂದೇನು?" ಎನ್ನುವ ಕುತೂಹಲವನ್ನಾಗಲೀ, ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಿ ಏನೋ ನಡೆಯಲಿದೆ ಎನ್ನುವ ಸಸ್ಪೆನ್ಸ್ ಆಗಲೀ ಕೆರಳಿಸುವುದಿಲ್ಲ. ಅದೇ ಸನ್ನಿವೇಶಗಳು, ಪಾತ್ರಗಳು, ಎಲ್ಲವನ್ನೂ ಹಲವಾರು ಸಿನಿಮಾಗಳಲ್ಲಿ, ಟೀವಿಯಲ್ಲಿ ನೋಡಿದ್ದೇವೆ ಎನಿಸುತ್ತದೆ.
ಹೀಗಿರುವಾಗ, ಇಂತಹ ನಾಟಕ ನಮ್ಮನ್ನು ನಗಿಸಿದ್ದು ಹೇಗೆ ಎನ್ನುತ್ತೀರಾ? ನಾಟಕದ ಸ್ವಾರಸ್ಯ ಇರುವುದೇ ಇಲ್ಲಿ. ಪ್ರತಿಯೊಬ್ಬ ಪಾತ್ರಧಾರಿಯೂ ನೈಜವಾದ ಅಭಿನಯದಿಂದ, ಹಾವಭಾವಗಳಿಂದ, ಸಮಯಕ್ಕೆ ಸರಿಯಾಗಿ "ಪಂಚ್ ಲೈನ್" ಡೆಲಿವರಿ ಮಾಡಿದ್ದರಿಂದ ನಾವು ನಕ್ಕೂ ನಕ್ಕೂ ಸುಸ್ತಾದೆವು. ನಗೆನಾಟಕಗಳಿಗೆ, ಜೋಕುಗಳಿಗೆ ಈ ರೀತಿಯ ಟೈಮಿಂಗ್, ಡೆಲಿವರಿ ಇಲ್ಲದಲ್ಲಿ ನಗೆಯೂ ಇಲ್ಲ, ನಲಿವೂ ಇಲ್ಲವಾಗುತ್ತದೆ.
ಆದರೆ ನಮ್ಮೂರಿನ ಕಲಾವಿದರು ಘಟಾನುಘಟಿಗಳು. ಸಂಶಯ ಪೀಡಿತ ದಂಪತಿಗಳಾಗಿ ಕೋಪ, ತಾಪ, ಶೋಕ, ಅಸಹಾಯಕತೆ ಎಲ್ಲವನ್ನೂ ಸಮರ್ಪಕವಾಗಿ ಪ್ರದರ್ಶಿಸಿದ ಶರ್ಮಿಳಾ ವಿದ್ಯಾಧರ (ಅರುಂಧತಿ) ಮತ್ತು ಅಶೋಕ್ ಉಪಾಧ್ಯಾಯ (ಡಾಕ್ಟರ್ ಅರವಿಂದ್), ಬೇಕಾದಾಗ ಮುಗ್ಧತೆ, ಬೇಕಿಲ್ಲದಾಗ ಅತೀ ಬುದ್ಧಿವಂತಿಕೆ ತೋರಿಸುತ್ತ ಪುಟ್ಟಗೌರಿ ಪಾತ್ರದಲ್ಲಿ ಜ್ಯೋತಿ ಶೇಖರ್, ಅಚಾನಕವಾಗಿ ದಂಪತಿಗಳ ಪ್ರಸಂಗದಲ್ಲಿ ಸಿಕ್ಕಿಹಾಕಿಕೊಂಡು ತೊಳಲಾಡಿದ ಪ್ರೇಮಿಗಳಾಗಿ ಶಶಿಕಲಾ ಪಾತ್ರದಲ್ಲಿ ಅರ್ಚನಾ ಉಪಾಧ್ಯಾಯ ಮತ್ತು ಆಕಾಶ್ ಪಾತ್ರಧಾರಿ ಕಿರಣ್ ಮೋಹನ್, ಕವಿ-ಸ್ನೇಹಿತ-ರಹಸ್ಯವನ್ನು ಬಗೆಹರಿಸಿದ ಆಪತ್ಕಾಲ ಬಂಧು ಆನಂದನಾಗಿ ಪ್ರಶಾಂತ್ ಪಡುಬಿದ್ರಿ, ಡಾಕ್ಟರ ಸಹಾಯಕ ಮಂಜುನಾಥನಾಗಿ ರಾಜ್ ಜೋಶಿ, ಎಲ್ಲರೂ ಮಿಂಚಿದರು. ಇದೇ ಕಲಾವಿದರು ನಮ್ಮೂರಿನಲ್ಲಿ ನಡೆದ ಬೇರೆ ನಾಟಕಗಳಲ್ಲೂ ಮಿಂಚಿದ್ದಾರೆ. ಹಾಗಾಗಿ, ಅವರ ಪ್ರತಿಭೆಯ ಬಗ್ಗೆ ಸಂದೇಹವೇ ಇಲ್ಲ. ನಮಗೆ ಮನರಂಜನೆಯೊಂದಿಗೆ ತೃಪ್ತಿಯೂ ಆಯಿತು ಎನ್ನುವುದು ನಿಜ. [ಕಂಬಾರರ ಸಾಂಬಶಿವ ಪ್ರಹಸನ ಪ್ರದರ್ಶನ]