ಆಕ್ಲೆಂಡ್ ಗಣೇಶೋತ್ಸವದಲ್ಲಿ ಗಾನ ನಾಟ್ಯ ರಸಧಾರೆ

ಆಕ್ಲೆಂಡ್ನ ಮೌಂಟ್ ಈಡನ್ ಸಮರ ಸ್ಮಾರಕ ಭವನದಲ್ಲಿ ನಡೆದ ಗಣೇಶೋತ್ಸವದಲ್ಲಿ ಮೊದಲಿಗೆ ಪೂಜೆ, ಪ್ರಾರ್ಥನೆಗಳು ನಡೆದ ನಂತರ ಕೂಟದ ಅಧ್ಯಕ್ಷ ರವಿಶಂಕರ್ ರಾವ್ ಎಲ್ಲರಿಗೂ ಸ್ವಾಗತ ಕೋರಿದರು. ಕಾರ್ಯಕ್ರಮದ ನಿರೂಪಕಿಯರಾದ ಪರಿಮಳಾ ವಾಸುದೇವ್ ಮತ್ತು ಪದ್ಮ ರವಿ ಅವರು ಹಸಿರು ನಿಶಾನೆ ತೋರಿಸಿದ ಕೂಡಲೆ ಮಕ್ಕಳ ಸೈನ್ಯ ವೇದಿಕೆಯನ್ನಾವರಿಸಿಕೊಂಡಿತು.
ಚಿಕ್ಕ ವಯಸ್ಸಿಗೆ ಪ್ರಸಿದ್ಧ ಗಾಯಕಿಯಾಗಿ ಹೆಸರು ಪಡೆದಿರುವ ಅಖಿಲಾ ಪುತ್ತಿಗೆ 'ನಮ್ಮಮ್ಮ ಶಾರದೆ' ಕೃತಿಯನ್ನಾರಿಸಿಕೊಂಡರೆ, ಪುಟಾಣಿ ಸಂಜನಾ ಕಟ್ಟೆ 'ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ' ಎಂದು ಹಿರಿಯರು ಕಿರಿಯರು ಎಲ್ಲರಿಗೂ ಮೆಚ್ಚುಗೆಯಾಗುವಂತೆ ಹಾಡಿದರು. ಕರ್ನಾಟಕದ ಅರಣ್ಯ ಸಂಪತ್ತನ್ನು ನೆನಪು ತರಿಸುವಂತೆ ಅಲಂಕರಿಸಿದ್ದ ವೇದಿಕೆಯ ಮೇಲೆ 'ಪುಟಾಣಿ ಎಜೆಂಟ್ 123' ಚಿತ್ರದ ಗೀತೆಗೆ ಪ್ರಾಣಿಗಳ ವೇಷಧಾರಿಗಳಾದ ಮಕ್ಕಳ ನೃತ್ಯನಾಟಕ ಮನಮೋಹಕವಾಗಿ ಮೂಡಿಬಂದಿತು. ಇದರ ನಂತರ ಒಂದಾದ ಮೇಲೊಂದು ಜನಪ್ರಿಯ ಕನ್ನಡ ಚಿತ್ರಗೀತೆಗಳಿಗೆ ನರ್ತಿಸಿದ ಗುಂಪುಗಳ ಅತ್ಯುತ್ತಮ ಪ್ರದರ್ಶನಕ್ಕೆ ಕಾರಣರಾದ ನೆರವಾದ ಕವಿತಾ ವೆಂಕಟ್, ಸುಜಾತಾ ಮತ್ತು ಅನೂಶ್ಕಾ ಬಿರಾದರ್, ನಿಧಿರಾಘವನ್, ನಿರೂಪಣೆ ಮಾಡಿದ ಲತಾ ಹೆಗ್ಡೆ ಅವರುಗಳು ಪ್ರೇಕ್ಷಕರ ಮೆಚ್ಚುಗೆಗಳಿಸಿದರು. ಬ್ರಹ್ಮಣ್ಯಪತಿ ಶಾಸ್ತ್ರಿ ಅವರ ಕನ್ನಡ ಹಾಸ್ಯನಟರ ಮಿಮಿಕ್ರಿ ಹಾಗೂ ಮಂಗಳಾ ಪ್ರಭಾಕರ್ ದಂಪತಿಗಳ ನಮ್ಮೂರ ಸಂತೆಲೀ ನೃತ್ಯಗಳು ವೈವಿಧ್ಯವನ್ನೊದಗಿಸಿದವು.
ಕನ್ನಡ ಕೂಟ ನಡೆಸಿದ ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರನ್ನು ಹಿರಿಯ ಸದಸ್ಯರುಗಳಾದ ಶ್ರೀನಿವಾಸ ನಾಡಿಗ್, ಸುದರ್ಶನ ರಾವ್, ಹೊ.ನಾ.ರಾಮಚಂದ್ರ ಮತ್ತು ಸತ್ಯನಾರಾಯಣ ಅವರುಗಳು ಬಹುಮಾನ ನೀಡಿ ಪುರಸ್ಕರಿಸಿದರು. ಇದೇ ಸಂದರ್ಭದಲ್ಲಿ ಕೂಟದ ದ್ವೈವಾರ್ಶಿಕ ಚುನಾವಣೆ ಮತ್ತು ಸರ್ವಸದಸ್ಯರ ಸಭೆ ನಡೆಯಿತು. ಕಳೆದ ಎರಡು ವರ್ಷದ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ರವಿಶಂಕರ್ ರಾವ್, ಪ್ರಕಾಶ್ ಬಿರಾದರ್, ವಸಂತ್ ಕೆಂಚಪ್ಪ ಅವರ ನೇತೃತ್ವದ ಕಾರ್ಯಕಾರಿ ಸಮಿತಿ ಅಭಿನಂದನೆಗೆ ಭಾಜನವಾಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಗೀತೆ, ಭಾರತ ಮತ್ತು ನ್ಯೂಜಿಲೆಂಡ್ ರಾಷ್ಟ್ರಗೀತೆಗಳನ್ನು ಹಾಡುವುದರೊಂದಿಗೆ ಮುಕ್ತಾಯಗೊಳಿಸಲಾಯಿತು. ಕೂಟದ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ವಂದನಾರ್ಪಣೆ ಮಾಡಿದರು.











Click it and Unblock the Notifications