ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿವೀಗಳ ನಾಡಿನಲ್ಲಿ ಕನ್ನಡದ ಮರಿ ಕೋಗಿಲೆಗೆ ಗಾನ ಕಿರೀಟ

By Staff
|
Google Oneindia Kannada News

Akhila Puttige
ನ್ಯೂಜಿಲಂಡ್‌ನ ಆಕ್ಲಂಡ್‌ನಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಸಂಗೀತವನ್ನು ಗಂಭೀರವಾಗಿ ಅಭ್ಯಾಸ ಮಾಡದ ಹನ್ನೆರಡು ವರ್ಷದ ಕನ್ನಡತಿ ಅಖಿಲಾ ಪ್ರಥಮ ಬಹುಮಾನ ಗಳಿಸಿದ್ದಾರೆ.

* ಪ್ರಕಾಶ್ ರಾಜಾರಾವ್, ಅಕ್ಲೆಂಡ್, ನ್ಯೂಜಿಲೆಂಡ್

ನ್ಯೂಜಿಲಂಡ್‌ನ ಆಕ್ಲೆಂಡ್ ನಗರದ ಬೃಹತ್ ಸಾಂಸ್ಕ್ರತಿಕ ಕೇಂದ್ರ ಬ್ಯೂಮಾಂಟ್ ಸೆಂಟರ್‌ನಲ್ಲಿ ಆಗಸ್ಟ್ ನಾಲ್ಕರ ಸಂಜೆ ಸುಮಾರು ಎರಡೂವರೆ ಸಾವಿರ ಸಂಗೀತಾಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಖ್ಯಾತ ಸಂಗೀತಗಾರ ಡಾಬೂ ಮಲ್ಲಿಕ್ ನೇತೃತ್ವದಲ್ಲಿ ಸ್ಥಳೀಯ ಮಿರ್ಚಿ ಇಂಡಿಯನ್ ಟಿವಿ ಆಯೋಜಿಸಿದ್ದ ಬಾಲಿವುಡ್ ಮೆಲೊಡಿ ಚಾಂಪ್ಸ್ ಗಾಯನ ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿತ್ತು.

ಮುನ್ನೂರು ಪ್ರತಿಭಾವಂತ ಗಾಯಕ ಗಾಯಕಿಯರು ಭಾಗವಹಿಸಿದ್ದ ಈ ಪ್ರತಿಸ್ಪರ್ಧೆಯಲ್ಲಿ, ಅದರಲ್ಲೂ ಒಂಬತ್ತರಿಂದ ಹದಿಮೂರು ವರ್ಷದವರ ವಿಭಾಗದಲ್ಲಿ ತೀವ್ರ ಪೈಪೋಟಿ ಉಂಟಾಗಿತ್ತು. ಅಷ್ಟು ಚಿಕ್ಕ ವಯಸ್ಸಿನ ಗಾಯಕರು ಅಂತಹ ಭಾರಿ ಸಂಖ್ಯೆಯ ಪ್ರೇಕ್ಷಕರ ಮುಂದೆ ಹಾಡುವುದೇ ಒಂದು ದೊಡ್ಡ ಸಾಧನೆ.

ಅಂತಿಮ ಸುತ್ತಿನಲಿ ಪ್ರೇಕ್ಷಕರ ಆಯ್ಕೆಯ ಒಂದು ಹಾಡು ಹಾಗೂ ತಮ್ಮ ಸ್ವಂತ ಆಯ್ಕೆಯ ಯಾವುದಾದರೂ ಇನ್ನೊಂದು, ಹೀಗೆ ಎರಡು ಹಾಡುಗಳನ್ನು ಹಾಡಬೇಕಾಗಿದ್ದು, ಮೊದಲೇ ಪೂರ್ಣ ಪ್ರಮಾಣದ ತಯಾರಿ ಮಾಡಿಕೊಳ್ಳಲು ಗಾಯಕರಿಗೆ ಅವಕಾಶವೇ ಇರಲಿಲ್ಲ. ಅತ್ಯಂತ ಸುಮಧುರವಾಗಿ ಹಾಡಿದ ಚಿಣ್ಣರು ತೀರ್ಪುಗಾರರಿಗೇ ಸವಾಲಾಗಿ ಪರಿಣಮಿಸಿದರು.

ಚೀನಿ ಕಮ್ ಚಿತ್ರದ ಶೀರ್ಷಿಕೆಯ ಹಾಡು ಹಾಗೂ ಲತಾ ಮಂಗೇಶ್ಕರ್ ಅವರು ಅಮರಗೊಳಿಸಿದ ಮನ್ ಮೌಜಿ ಚಿತ್ರದ ಮೈ ತೊ ತುಮ್ ಸಂಗ್ ನೈನ್ ಮಿಲಾಕೆ ಹಾರ್ ಗಯೀ ಸಜನಾ ಹಾಡುಗಳನ್ನು ಹಾಡಿ ಸುದೀರ್ಘ ಕರತಾಡನಕ್ಕೆ ಕಾರಣರಾದ ಕನ್ನಡದ ಮರಿ ಕೋಗಿಲೆ ಹನ್ನೆರಡರ ಕಿಶೋರಿ ಕು. ಅಖಿಲಾ ಪುತ್ತಿಗೆ ಜಯಶಾಲಿಯಾಗಿ ಪ್ರಥಮ ಬಹುಮಾನಗಳಿಸಿದರು.

ಉಡುಪಿಜಿಲ್ಲೆಯ ಕೊಟಾದ(ಕಾರಂತಜ್ಜನ ಊರಿನ ಹೆಸರು ಕೇಳದವರಾರು?) ಸತೀಶ್ ಪುತ್ತಿಗೆ ಮತ್ತು ಅನ್ನಪೂರ್ಣ ಪುತ್ತಿಗೆಯವರ ಹಿರಿಯ ಪುತ್ರಿ ಅಖಿಲಾ ಜನಿಸಿದ್ದು ಸ್ವೀಡನ್‌ನಲ್ಲಿ. ನಂತರ ಮೂರು ವರ್ಷ ಅಮೆರಿಕಾದಲ್ಲಿ ಬೆಳೆದು ಈಗ ಏಳು ವರ್ಷಗಳಿಂದ ನ್ಯೂಜಿಲೆಂಡಿನಲ್ಲಿರುವ ಈ ಗಾನ ಕೋಗಿಲೆ ಗಾಯನವನ್ನು ಗಂಭೀರವಾಗಿ ಅಭ್ಯಾಸ ಮಾಡಿದವಳೇ ಅಲ್ಲ. ತನ್ನ ತಾಯಿಯ ನೆರವು ಮತ್ತು ಪ್ರೋತ್ಸಾಹಗಳಿಂದ ಹಾಡಲು ಕಲಿತಿರುವ ಅಖಿಲಾ ಬಹಳವಾಗಿ ಮೆಚ್ಚುವುದು ಮತ್ತು ಸೊಗಸಾಗಿ ಹಾಡುವುದು ಪಿ.ಸುಶೀಲಾ, ಎಸ್.ಜಾನಕಿ ಮುಂತಾದವರು ಹಾಡಿರುವ ಹಳೆಯ ಕನ್ನಡ ಚಲನಚಿತ್ರದ ಗೀತೆಗಳನ್ನು. ಡಾ.ರಾಜ್ ಅಭಿನಯದ ಚಿತ್ರಗಳೆಂದರೆ ಸಹ ಅಷ್ಟೆ ಪ್ರಿಯ.

ನೃತ್ಯದಲ್ಲೂ ಪರಿಣತಿಯಿರುವ ಅಖಿಲಾ ನ್ಯೂಜಿಲೆಂಡ್ ಕನ್ನಡ ಕೂಟದ ಸಮಾರಂಭಗಳಲ್ಲಿ ಚಿಗರೆಯಂತೆ ಅರೆರೆರೆ ಗಿಳಿ ರಾಮ, ನಿನ್ನಂತ ಅಪ್ಪ ಯಾರೂ ಇಲ್ಲಾ ಗೀತೆಗಳಿಗೆ ನರ್ತಿಸಿ ಎಲ್ಲರ ಮನಸೂರೆಗೊಂಡಿದನ್ನು ಇಲ್ಲಿ ಉಲ್ಲೇಖಿಸಬಹುದು.

ತನ್ನ ಸಾಧನೆಯ ಬಗ್ಗೆ ನಮ್ರತೆಯಿರುವ ಅಖಿಲಾ ತೀರ್ಪುಗಾರರ ಪ್ರೋತ್ಸಾಹ ನನಗೆ ಬಹಳ ನೆರವಾಯಿತು ಎಂದು ಹೇಳಿದ್ದಾಳೆ. ಇನ್ನು ಮುಂದೆ ತಕ್ಕ ಗುರುಗಳಿಂದ ಸಂಗೀತಾಭ್ಯಾಸ ಮಾಡಲು ನಿರ್ಧರಿಸಿದ್ದಾಳೆ. ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶ ಸಿಕ್ಕಲ್ಲಿ ಈ ಬಾಲ ಪ್ರತಿಭೆ ಪೂರ್ಣವಾಗಿ ಅರಳಿ ಹೆಸರಾಂತ ಗಾಯಕಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X