ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜೆಯನ್ನು ಸುಂದರವಾಗಿಸಿದ ದಿವ್ಯಾ ಕಥಕ್ ನೃತ್ಯ

|
Google Oneindia Kannada News

Divya Patil Kathak dance program
ಸೆಪ್ಟೆಂಬರ್ 12ರ ದಿವ್ಯ ಸಂಜೆಯಲ್ಲಿ ಹಲವು ಮೊದಲು'ಗಳು ಜರುಗಿದವು. ಅರಂಗೇಟ್ರ ಅಥವ ರಂಗಪ್ರವೇಶ ಎಂದಾಗ ಭರತನಾಟ್ಯ ಮನಸ್ಸಿನಲ್ಲಿ ಮೂಡಿಬರುವುದು ಮಾಮೂಲಿ. ಭಾರತದ ಇತರ ಅನೇಕ ಪ್ರಕಾರದ ನೃತ್ಯ ಪರಂಪರೆಗಳಲ್ಲಿ ಅರಂಗೇಟ್ರದ ಕಲ್ಪನೆಯೆ ಇಲ್ಲ. ಇಂಥ ಕಲ್ಪನೆಯ ರಂಗನ್ನು ಆ ಸುಂದರ ಸಂಜೆಗೆ ತನ್ನ 'ನೃತ್ಯ ದರ್ಶನ"ದಿಂದ ಮೊದಲು ಏರಿಸಿದವಳು ದಿವ್ಯಾ.

ಸರ್ವಮಂಗಳ ಮತ್ತು ದಾದಾ ಪಾಟೀಲರ ಮೊದಲ ಮಗಳು ದಿವ್ಯಾ. ದಕ್ಷಿಣ ಕ್ಯಾಲಿಫೋರ್ನಿಯಾದ ಅನಹೈಮ್ ಹಿಲ್ಸ್ ಪ್ರದೇಶದಲ್ಲಿ ಕನ್ನಡ ಕಲಿ ತರಗತಿಗಳನ್ನು ಪ್ರಾರಂಭಿಸಿದವರು ಸರ್ವಮಂಗಳ. ದಿವ್ಯಳಿಗೆ ಅಮ್ಮ ಮೊದಲು ಕಲಿಸಿದ್ದು ಕನ್ನಡ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸುಂದರ ಕಲಾ ಕೇಂದ್ರವನ್ನು ಸ್ಥಾಪಿಸಿ ಕಥಕ್ ಅನ್ನು ಜನಪ್ರಿಯಗೊಳಿಸಿದ ಪ್ರಸಿದ್ಧ ನರ್ತಕಿ ಗುರು ಅಂಜನಿ ಅಂಬೆಗಾಂವಕರ ಅವರಿಂದ ಕಥಕ್ ತರಬೇತಿ. ಸತತ ಹತ್ತು ವರ್ಷಗಳ ಸಾಧನೆ. ಕಥಕ್ ನೃತ್ಯದಲ್ಲಿ, ಭರತನಾಟ್ಯ ಬಿಟ್ಟು ಬೇರೆಯದರಲ್ಲಿ, ಔಪಚಾರಿಕವಾಗಿ ಅರಂಗೇಟ್ರ ನೋಡಿದ್ದೆ ಇಲ್ಲ; ಬಹುಶಃ ಮಾಡಿದ್ದೇ ಇಲ್ಲ. ಶಿಷ್ಯೆಯ ಜೊತೆ ಗುರುವಿಗೂ ಇದು ಮೊದಲ ಅನುಭವ!

ನೆರೆದ ಸುಮಾರು ನಾಲ್ಕು ನೂರು ಕಲಾಭಿಮಾನಿಗಳನ್ನು ಹಂತ ಹಂತವಾಗಿ ರಸೋತ್ತುಂಗಕ್ಕೆ ಕರೆದೊಯ್ದವಳು ದಿವ್ಯಾ. ದೃಶ್ಯ, ಶ್ರಾವ್ಯ, ಭಕ್ತಿ, ಭಾವಗಳೊಂದಿಗೆ ಭಾಗ್ಯದ ಲಕ್ಷ್ಮಿ ಬಾರಮ್ಮ' ಎಂದು ಕರೆದಾಗ ಯಾವ ಲಕ್ಷ್ಮಿಗೆ ಬರದಿರಲು ಸಾಧ್ಯ? ಕಥಕ್ ಸಂಪ್ರದಾಯದಲ್ಲಿ ನರ್ತಕಿಯೆ ಬೋಲ್ ಹೇಳುತ್ತಾಳೆ. ಕಥಕ್‌ನಲ್ಲಿ ಸಾಂಪ್ರದಾಯಿಕವಾಗಿ ಎಲ್ಲವೂ ತೀನ್ ತಾಳ್. ಆದರೆ ಕಲೆಯ ಸೃಜನಶೀಲತೆಗೆ ಕೊರತೆಯಿಲ್ಲ. ಇದು ಸಂಗೀತ ಮತ್ತು ನೃತ್ಯ ಎರಡಕ್ಕೂ ಸಂಕೀರ್ಣತೆಯನ್ನು ತಂದು ಎಂಥ ನರ್ತಕಿಯರನ್ನೂ ಚಾಲೇಂಜ್ ಮಾಡಬಲ್ಲುದು.

ಮೂರು ತಾಳಗಳನ್ನು ನಾಲ್ಕನೆಯ (ತೀನ್) ತಾಳ ಒಂದರಲ್ಲಿ ಸಂಕೀರ್ಣವಾಗಿ ಜೋಡಿಸಿ, ಮೇಲೆ ತಿಹಾಯಿ ರಚನೆಯಲ್ಲಿ ಉಸಿರು ಬಿಡದೆ ನಿಮಿಷಗಳ ಕಾಲ ಹೇಳಿದ ದಿವ್ಯಾ ಹಲವು ತಾಂತ್ರಿಕವಾಗಿ ಕಠಿಣವಾದ ಹೆಜ್ಜೆಗಳನ್ನು ಗೆಜ್ಜೆಗಳ ನಿನಾದದೊಂದಿಗೆ ಸುಲಭವಾಗಿ ತೋರಿದಳು. ಕಥಕ್ ಎಂದರೆ ಕಥೆ ಹೇಳುವುದು. ಗೋವರ್ಧನ ಲೀಲೆ ಆ ಸಂಜೆಯ ಮುಖ್ಯ ಕತೆ. ಕತೆಯ ವಿವಿಧ ಪಾತ್ರಗಳನ್ನು ದಿವ್ಯಾ ಒಬ್ಬಳೆ ನೃತ್ಯ ರೂಪದಲ್ಲಿ ಅತ್ಯಂತ ಭಾವಪೂರ್ಣವಾಗಿ ಮತ್ತು ಕೃಷ್ಣ ಗೋವರ್ಧನ ಬೆಟ್ಟ ಕಿರು ಬೆರಳಿನಲ್ಲಿ ಎತ್ತಿ ಹಿಡಿದಷ್ಟು ಸುಲಭವಾಗಿ ಶಾಸ್ತ್ರೀಯವಾಗಿ ಅಭಿನಯಿಸಿದಳು.

ದಕ್ಷಿಣ ಕ್ಯಾಲಿಫೋರ್ನಿಯಾದ ಜನಪ್ರಿಯ ಸಂಗೀತ ಗುರುಗಳಾದ ಸಂಜೀವ ಮುನ್ಶಿ ತಮ್ಮ ಸಿರಿ ಕಂಠದಲ್ಲಿ ಹಾಡಿದರು. ಭಾಗ್ಯದ ಲಕ್ಷ್ಮಿಯನ್ನು ರಾಗ ಬಿಭಾಸದಲ್ಲಿ ಸುಶ್ರಾವ್ಯವಾಗಿ ಬಿನ್ನವಿಸಿ ಕರೆತಂದವರು ನಮ್ಮ ಕನ್ನಡದ ಹಿಂದುಸ್ತಾನಿ ಗಾಯಕಿ ಸುಷ್ಮಾ ಪವನ. ಕಥಕ್‌ಗೆ ಒಪ್ಪಿಕೊಳ್ಳುವ ಜೈಪುರ ಘರಾನದಲ್ಲಿ ನುರಿತ ರಮೇಶ ಕುಮಾರ ಅವರ ತಬಲವಾದನ ಅದ್ಭುತವಾಗಿತ್ತು. ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ಪಂಡಿತ ರಮೇಶ ಮಿಶ್ರಾ ತಮ್ಮ ಸಾರಂಗಿಯೊಂದಿಗೆ ರಂಗೇರಿಸಿದ್ದು ವಿಶೇಷವಾಗಿತ್ತು. ಈ ಸಾಧನೆಗಾಗಿ, ದಿವ್ಯಾ ಮತ್ತು ಪಾಟಿಲ ದಂಪತಿಗಳನ್ನು ನೀವೂ ಅಭಿನಂದಿಸಬಹುದು: [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X