ಸಿಡ್ನಿಯಲ್ಲಿ ಎಂಎಸ್ ಶೀಲಾ ಅಮೋಘ ಗಾಯನ
ಸುಮಾರು ನೂರು ನಿಮಿಷಗಳ ಕಚೇರಿ, ಜನ ಅತ್ತ ಇತ್ತ ನೋಡದೆ ಆಲಿಸಿದರು. ಭಗವಂತನನ್ನು ಕಳಕಳಿಯಿಂದ ಕೇಳಿಕೊಂಡಂಥ "ಓರಜೂಪು ಚೂಚೇದಿ ನ್ಯಾಯಮಾ" ಸಭಿಕರು ತಲೆದೂಗುವಂತೆ ಮಾಡಿತು. ಅವರು ನಿರೂಪಿಸಿದ "ಹಿಮಾದ್ರಿ ಸುತೆ" (ಕಲ್ಯಾಣಿ) ಮತ್ತು "ಪಕ್ಕಲನಿಲಬಡಿ" (ಖರಹರಪ್ರಿಯ) ನೆರುವಲ್ ಮತ್ತು ಸ್ವರಪ್ರಸ್ತಾರಗಳ ಮೂಲಕ ಸುಂದರವಾಗಿ ಮೂಡಿಬಂದವು.
ಮನಮುಟ್ಟುವ ನೇರ ಸಂಗೀತ ಅವರದ್ದು. ಅವರು "ಜಗದೋದ್ಧಾರನಾ" ಹಾಡಿದ್ದು ಎಂಎಸ್ ಸುಬ್ಬಲಕ್ಷ್ಮಿ ಅವರ ನೆನಪನ್ನು ತಂದುಕೊಟ್ಟಿತು. ನಂತರ ಅವರ "ರಂಗ ಬಾರೋ" ಜನರನ್ನು ಮತ್ತಾವುದೋ ನೆಲೆಗೆ ಕೊಂಡೊಯ್ಯಿತು. ಆಗ ಜನರ ಕಣ್ಣಲ್ಲಿ ಮೂಡಿದ ಕಣ್ಣೀರೇ ಕಚೇರಿಯ ಸಾರ್ಥಕತೆಗೆ ಸಾಕ್ಷಿ ಆಯಿತು. ಶೀಲಾ ಅವರು ಕರ್ನಾಟಕ ಸಂಗಿತದ ಮುಂಚೂಣಿ ಪ್ರದೇಶದಲ್ಲಿದ್ದಾರೆ ಎಂಬುದಕ್ಕೆ ಅವರ ಸಂಗೀತವೇ ಸಾಕ್ಷಿ.
ಇಂತಹ ಕಚೇರಿ ಕೇಳಿ ಕುಣಿದಾಡಿದವರು ಯಾರೆಂದು ನನ್ನನ್ನು ಕೇಳಬೇಡಿ. ಹತ್ತು ಹನ್ನೆರಡು ಜನ ಕನ್ನಡಿಗರನ್ನು ಬಿಟ್ಟರೆ ಮಿಕ್ಕವರೆಲ್ಲಾ ಕನ್ನಡೇತರರು. ಓರ್ವ ದೊಡ್ದ ಕಲಾವಿದರು ಬಂದು ಇಲ್ಲೇ ಒಂದು ವಾರವಿದ್ದರೂ ನಾವು (ಕನ್ನಡಿಗರು) ಗಮನಿಸದೇ ಹೋಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ; ಅದು ಸ್ವಾಭಾವಿಕ.