ನ್ಯೂಜೆರ್ಸಿಯ ಬೃಂದಾವನದಲ್ಲಿ ವಿಶಿಷ್ಟ ವಿಹಾರ
ಸ್ಫೂರ್ತಿ ತಂಡ ಆಗಸ್ಟ್ 2ರಂದು ನಡೆಸಿಕೊಟ್ಟ ಬೃಂದಾವನ ವಿಹಾರ ಬಹುದಿನಗಳವರೆಗೆ ನೆನಪಿನಲ್ಲಿ ಉಳಿಯುವಂಥದ್ದು. ಮಳೆಯ ಆರ್ಭಟವನ್ನೂ ಲೆಕ್ಕಿಸದೆ ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ನಿಂದ ಆಗಮಿಸಿದ 200 ಕನ್ನಡಿಗರ ಸಮ್ಮಿಲನ ನಿಜಕ್ಕೂ ಮಧುರ. ಕನ್ನಡಿಗರೆಲ್ಲರು ಸೇರಿ ಆಡಿದ ಆಟ, ಊಟ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು, ಜಡ್ಡುಗಟ್ಟಿದ ಮನಕ್ಕೆ ಮತ್ತಷ್ಟು ಹುಮ್ಮಸ್ಸನ್ನು ತುಂಬಿತು.
ಮಾಲಿನಿ ಹಾಗು ರಘು ಮೂರ್ತಿ ದಂಪತಿಗಳು ಒಟ್ಟಿಗೆ ಸೇರಿ ಹಾಕಿದ ಜಾತ್ರೆಯ ಟೆಂಟು ಎಲ್ಲರ ಗಮನ ಸೆಳೆಯಿತು. ಈ ಟೆಂಟ್ನಲ್ಲಿ ಗೂಟ ಹೊಡೆದುಕೊಂಡು ಕುಳಿತ ಸಿಂಹಾದ್ರಿ ಸಂತೆಬೆನ್ನುರ್ ಹಾಗು ಸೀಮಾ ಮೂರ್ತಿ ಬಂದವರೆನ್ನೆಲ್ಲ ಆತ್ಮೀಯವಾಗಿ ಬರಮಾಡಿಕೊಂಡು ಜಾತ್ರೆಗೆ ನೊಂದಾಯಿಸಿಕೊಂಡರು. ಈ ಟೆಂಟಿನ ಒಂದು ಕಡೆಗೆ, Cary, ನಾರ್ತ್ ಕೆರೊಲಿನ ನಿವಾಸಿಗಳಾದ ಸವಿತ ಹಾಗು ರವಿಶಂಕರ್ ದಂಪತಿಗಳು ಸ್ಫೂರ್ತಿ ತಂಡದಿಂದ ಸ್ಫೂರ್ತಿಗೊಂಡು ಮೈಸೂರಿಂದ ತಂಗಿ ಸುನೀತಳ ಮೂಲಕ ಮೂರೇ ದಿನಗಳಲ್ಲಿ ತರಿಸಿಕೊಂಡಿದ್ದ ಯಕ್ಷಗಾನ ಕಲಾವಿದರ ಬೃಹತ್ ಚಿತ್ರಪಟ ಪ್ರದರ್ಶನಕ್ಕಿಟ್ಟಿದ್ದರು. ಯಕ್ಷಗಾನದ ಗಂಡು ಹೆಣ್ಣಿನ ಚಿತ್ರಪಟದಲ್ಲಿ ತಮ್ಮ ಮುಖ ವಿರಿಸಿ ಬಂದವರೆಲ್ಲ ಫೋಟೊ ತೆಗಿಸಿದ್ದು ಜಾತ್ರೆಯ ಸಂಭ್ರಮಕ್ಕೆ ಕಳೆ ತಂದುಕೊಟ್ಟಿತು. ಹಿರಿಯರೆಲ್ಲ ಪುಟ್ಟ ಪುಟ್ಟ ಮಕ್ಕಳಿಗೆ ಫೇಸ್ ಪೈಂಟಿಂಗ್ ಮಾಡಿದ್ದು ನಮ್ಮ ಹಳ್ಳಿ ಜಾತ್ರೆಯಲ್ಲಿನ ಸಿಂಗಾರಿ ಬಂಗಾರಿ ಹಾಗು ಹುಲಿವೇಷವನ್ನು ನೆನೆಪಿಗೆ ತರುವಂತಿತ್ತು.
ಮರ್ಲಿನ್ ಹಾಗು ಮಾರ್ಕ್ ಮೆಂಡೊಂಜಾ ದಂಪತಿಗಳು ಅಖಿಲಾ ಮಂಜುನಾಥ್ ಜೊತೆ ಸೇರಿ ಮಕ್ಕಳಿಗೆ ವಿಧವಿಧವಾದ ಆಟಗಳನ್ನು ಆಡಿಸಿದರೆ, ವಸಂತಾ ಶಶಿ ಹಿರಿಯರಿಗೆ ಚೌಕ ಬಾರ, ಪಗಡೆ ಆಟಗಳನ್ನು ಆಡಿಸಿದರು. ದೊಡ್ಡವರ ರನ್ನಿಂಗ್ ರೇಸ್, ವಾಲಿಬಾಲ್, ಥ್ರೊ ಬಾಲ್, ಕ್ರಿಕೆಟ್ ನಲ್ಲಿ ಬಿದ್ದವರು ಕೆಲವು ಮಂದಿ ಎದ್ದವರು ಹಲವು ಮಂದಿ. ಆದರೆ ಬಿದ್ದವರನ್ನು ನೋಡಿದವರು ಮಾತ್ರ ಸುಮಾರು ಮಂದಿ. ಡಾ. ರಾಮ್ ಬೆಂಗಳೂರ್ ತಮ್ಮ ಡಾಕ್ಟರ್ ಆಫೀಸನ್ನು ಬೇಗ ಮುಚ್ಚಿ ತಮ್ಮ ಎಲ್ಲಾ ಸಹೋದ್ಯೊಗಿಗಳನ್ನು ಜಾತ್ರೆಗೆ ಕರೆತಂದದ್ದು ಈ ಬಾರಿಯ ವಿಶೇಷ. ಲಗೋರಿ ಆಟ ಗೊತ್ತಿಲ್ಲದಿದ್ದರೂ, ಆ ಕ್ಷಣದಲ್ಲಿಯೇ ಆಟ ಕಲಿತು ಆಡಿದ ಇಂದಿನ ಇಲ್ಲಿನ ಗಂಡುಮಕ್ಕಳು, ಆಟ ಚೆನ್ನಾಗಿ ಗೊತ್ತಿದ್ದ ಅಪ್ಪಂದಿರನ್ನು ಏಳು ಕಲ್ಲುಗಳನ್ನು ಜೋಡಿಸಿ ಲಗೋರಿ ಅಂತ ಜೋರಾಗಿ ಕೂಗಿ ಒಂದೇ ಒಂದು ಅಂಕದ ಅಂತರದಲ್ಲಿ ಸೋಲಿಸಿದಾಗ ಅವರೆಲ್ಲರ ಆನಂದಕ್ಕೆ ಮಿತಿಯೇ ಇರಲಿಲ್ಲ. ಟಗ್ ಆಫ್ ವಾರ್ನಲ್ಲಿ ಅಮ್ಮಂದಿರು ಹಾಗು ಗಂಡು ಮಕ್ಕಳು ಟೀಮ್ ಎದುರಾಳಿಗಳಾದ ಅಪ್ಪಂದಿರು ಹಾಗು ಹೆಣ್ಣು ಮಕ್ಕಳ ಟೀಮ್ ಅನ್ನು ಅನಾಯಾಸವಾಗಿ ಸೋಲಿಸಿದರು. ಕೊನೆಯಲ್ಲಿ 60ಕ್ಕೂ ಹೆಚ್ಚು ಜೋಡಿಗಳು ಆಡಿದ ನೀರಿನ ಬೆಲೂನ್ ಎಸೆದಾಟದಲ್ಲಿ ಹಿಡಿದದ್ದಕಿಂತ ಒಡೆದದ್ದೆ ಹೆಚ್ಚಾಗಿದ್ದರಿಂದ ನೀರಿನ ಸಿಂಚನ ಹಿತ ನೀಡಿತು. ವಿಜಯ್ ಮೂರ್ತಿಯವರ ಹಾಸ್ಯಭರಿತ ಕನ್ನಡದ ಕಾಮೆಂಟರಿ ಎಲ್ಲ ಆಟಗಳನ್ನು ನೋಡುಗರಿಗೆ ಇನ್ನಷ್ಟು ರೋಚಕವಾಗುವಂತೆ ಮಾರ್ಪಡಿಸಿತು.
ಉಷ ಪ್ರಸನ್ನ ಮಾಡಿದ ಗರಮಾ ಗರಮ್ ಕಡ್ಲೆಕಾಯಿ, ಪಾರ್ಕಿನಲ್ಲೆ ಸಂತೋಷ್ ಕುಮಾರ್ ರೈಸ್ ಕುಕ್ಕರ್ನಲ್ಲಿ ಬೇಯಿಸಿದ ಬಿಸಿ ಬಿಸಿ ಮುಸುಕಿನ ಜೋಳ, ವಿದ್ಯಾ ಹಾಗು ಶ್ರೀನಿಧಿ ದಂಪತಿಗಳು, ಲಕ್ಶ್ಮಿ ಭೂಪಾಳಮ್ ಜೊತೆ ಸೇರಿ ಖಾರವಾಗಿ ಮಾಡಿದ್ದ ಸೌತೆಕಾಯಿ ಹಾಗು ಚುರುಮುರಿ, ಸೀಮಾ ಮೂರ್ತಿ ಮಷಿನ್ ತಂದು ಮಾಡಿದ್ದ ಕಾಟನ್ ಕ್ಯಾಂಡಿ ನಮ್ಮ ಹಳ್ಳಿಯ ಜಾತ್ರೆಯಲ್ಲಿ ಸಿಗುವ ಬೆಂಡು, ಬತ್ತಾಸು, ಕಲ್ಯಾಣಸೇವೆಗಳನ್ನು ಮೀರಿಸುವಂತಿತ್ತು. ಇದರೊಡನೆ ಸಾಧನ ಶಂಕರ್ ಮಾಡಿದ ನಿಂಬೆಹಣ್ಣಿನ ಪಾನಕ, ಕಿತ್ತಲೆಹಣ್ಣು ಶರಬತ್ತು ಹಾಗು ರಾಮನವಮಿ ಮಜ್ಜಿಗೆ ಆಟಗಳನ್ನು ಆಡಿ ಬಂದ ಎಲ್ಲರ ಬಾಯಾರಿಕೆಯನ್ನು ನೀಗಿಸಿತು. ತಿಂಡಿ ತೀರ್ಥಗಳು ದೊಡ್ಡವರಿಗೂ ಹಾಗು ಮಕ್ಕಳೆಲ್ಲರಿಗೂ ಬೇಕೆನಿಸಿದಷ್ಟು ಧಂಡಿಯಾಗಿ ಸಿಕ್ಕಿತು. ಸುಧರ್ಮ ಅವರ ಹೋಮ್ ಮೇಡ್ ಅಡಿಗೆ ಸಖತ್ ಆಗಿದೆ ಎಂದು ಸುಮಾರು ಜನರ ಬಾಯಲ್ಲಿ ಬಂದಿತು. ಬೆನ್ ಕಾಂತರಾಜು ವಿಹಾರದ ಸ್ಪಾನ್ಸರ್ಸ್ಗಳನ್ನು ವಿಚಾರಿಸಿಕೊಂಡರೆ ಮಧು ರಂಗಯ್ಯ ಊಟದ ಸರಬರಾಜಿನ ನಿರ್ವಹಣೆ ಹೊತ್ತಿದ್ದರು. ನ್ಯೂಯಾರ್ಕ್ನಿಂದ ಬಂದಿದ್ದ ನಮ್ಮೆಲ್ಲರ ಆತ್ಮೀಯರಲ್ಲೊಬ್ಬರಾದ ಗುರು ಊಟದ ವಿತರಣೆಯನ್ನು ಅದ್ಭುತವಾಗಿ ಅಚ್ಚುಕಟ್ಟಾಗಿ ಮಾಡಿದರು.
ಸ್ಫೂರ್ತಿ ತಂಡದ ಪರವಾಗಿ ಬೃಂದಾವನದ ಅಧ್ಯಕ್ಷೆ ಉಷಾ ಪ್ರಸನ್ನಕುಮಾರ್ ಅವರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಮುಂಬರುವ ಬೃಂದಾವನದ ಎಲ್ಲ ಕಾರ್ಯಕ್ರಮಗಳಲ್ಲೂ ಇದೆ ರೀತಿ ಹೆಚ್ಚು ಸಂಖ್ಯೆಯಲ್ಲಿ ಬಂದು ತಮ್ಮ ಹಾಗು ತಮ್ಮ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ವಿನಂತಿಸಿಕೊಂಡರು ಮತ್ತು ಕಾರ್ಯಕ್ರಮದ ಯಶಸ್ಸಿಗೆ ಅದ್ಭುತವಾದ ಟೀಮ್ ವರ್ಕ್ ಕಾರಣ ಎಂದು ಪ್ರಶಂಸಿದರು. ಪ್ರತಿ ಶುಕ್ರವಾರ ಇಲ್ಲಿನ FM ರೇಡಿಯೊದಲ್ಲಿ (98.3 FM ಹಾಗು 100.7 FM) ಮತ್ತು ಅಂತರ್ಜಾಲದಲ್ಲಿ (www.dhoomfm.com) ರಾತ್ರಿ 8ರಿಂದ 10ರವರೆಗೆ ಮೂಡಿ ಬರುವ ಕನ್ನಡ ಕಸ್ತೂರಿ ಕಾರ್ಯಕ್ರಮ ನಡೆಸಿಕೊಡುವ ಪ್ರಶಾಂತ್ ಹಾಗು ಕಿಶೋರ್ ಅವರ ಉತ್ಸಾಹ ಹಾಗು ಕನ್ನಡ ನಾಡು ನುಡಿಗೆ ಸಲ್ಲಿಸುತ್ತಿರುವ ಅವರ ನಿಸ್ವಾರ್ಥ ಸೇವೆಯನ್ನು ಉಷ ಪ್ರಸನ್ನ ಮನಸಾರೆ ಶ್ಲಾಘಿಸಿದರು.
ಜಾತ್ರೆಯ ಎಲ್ಲ ಫೋಟೊಗಳನ್ನು ವೀಕ್ಷಿಸಲು ದಯವಿಟ್ಟು http://www.brindavana.orgಗೆ ಭೇಟಿಕೊಡಿ.
ಸ್ಫೂರ್ತಿ ತಂಡದ ಮುಂದಿನ ಪ್ರಸ್ತುತಿ: ಭಾನುವಾರ, ಸೆಪ್ಟೆಂಬರ್ 14ರಂದು ಮಧ್ಯಾಹ್ನ 2ರಿಂದ ರಾತ್ರಿ 8ವರೆಗೆ ಗಣೇಶೋತ್ಸವ ಕಾರ್ಯಕ್ರಮ. ವಿಳಾಸ : M H Kreps Middle School Auditorium, 5 Kent Lane, East Windsor, NJ. ಅಂದು ಸುಪ್ರಸಿದ್ಧ ನಿರ್ದೇಶಕ ಹಾಗು ನಟ ನಾಗಾಭರಣ ಮತ್ತು ತಂಡದವರಿಂದ ನಾಟಕ ಪ್ರದರ್ಶನವಾಗಲಿದೆ. ಮುಖ್ಯ ಅತಿಥಿಗಳಾಗಿ ಮುಂಗಾರು ಮಳೆ ಖ್ಯಾತಿಯ ಕವಿ ಜಯಂತ್ ಕಾಯ್ಕಿಣಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ್ ಕಪ್ಪಣ್ಣ ಭಾಗವಹಿಸುತ್ತಿದ್ದಾರೆ. ಅಷ್ಟೆ ಅಲ್ಲದೆ - ಸಾಮೂಹಿಕ ಗಣೇಶ ಪೂಜೆ, ಸಂಸ್ಥೆಯ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಕೂಡ ಇವೆ. ಹೆಚ್ಚಿನ ಮಾಹಿತಿಗಾಗಿ ದಟ್ಸ್ ಕನ್ನಡ ನೋಡುತ್ತಿರಿ, ಓದುತ್ತಿರಿ.
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications