ಉಡುಪಿ ಶಿರೂರು ಸ್ವಾಮೀಜಿಯ ಅಧಿಕೃತ ರಾಜಕೀಯ 'ಪುರಪ್ರವೇಶ'
ಅಷ್ಠಮಠದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಠಾಧೀಶರೊಬ್ಬರು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಬಂಡಾಯ ಸ್ವಭಾವದ, ಸಾಂಸ್ಕೃತಿಕವಾಗಿ ಸದಾ ಕ್ರಿಯಾಶೀಲರಾಗಿರುವ ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.ಈ ಕುರಿತ ಒಂದು ವಿಶ್ಲೇಷಣಾತ್ಮಕ ವರದಿ ಇಲ್ಲಿದೆ.
ಕೃಷ್ಣನಗರಿಯಲ್ಲೀಗ ಚುನಾವಣೆ ರಂಗು ಪಡೆಯುತ್ತಿದೆ. ಬೇಸಿಗೆಯ ಝಳದ ನಡುವೆಯೂ ಜನ ವಿಧಾನಸಭೆ ಚುನಾವಣೆಗೆ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ. ಇನ್ನೊಂದೆಡೆ ರಾಜಕೀಯ ಪಕ್ಷಗಳೂ ಗೆಲ್ಲುವ ತಂತ್ರಗಾರಿಕೆಯಲ್ಲಿ ತೊಡಗಿದೆ.
ಉಡುಪಿಗೆ ಸಂಬಂಧಿಸಿ ಹೇಳೋದಾದರೆ, ಈ ಬಾರಿಯ ಆಕರ್ಷಣೆ ಮಠಾಧೀಶರ ಚುನಾವಣಾ ರಂಗಪ್ರವೇಶ. ಹೌದು, ಇದೇ ಮೊದಲ ಬಾರಿಗೆ ಅಷ್ಠಮಠಾಧೀಶರೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದು, ಸಾಕಷ್ಟು ಚರ್ಚೆಯನ್ನ ಹುಟ್ಟು ಹಾಕಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ತಿಂಗಳ ಹಿಂದೆ ಶಿರೂರು ಸ್ವಾಮೀಜಿ ತಮ್ಮ ನಿರ್ಧಾರವನ್ನು ಪ್ರಕಟಿಸಿದಾಗ ಅದರಲ್ಲಿ ಸ್ಪಷ್ಟತೆ ಇರಲಿಲ್ಲ, ಬದಲಾಗಿ ಗೊಂದಲವಿತ್ತು. ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ, ಸ್ಥಳೀಯ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ಜನರ ಕೆಲಸಗಳು ನಿರೀಕ್ಷಿತ ರೀತಿಯಲ್ಲಿ ಆಗುತ್ತಿಲ್ಲ. ಹೀಗಾಗಿ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂಬುದು ಶ್ರೀಗಳು ನೀಡಿದ್ದ ಕಾರಣ.
ಇದೇ ವೇಳೆ ,ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತೇನೆ. ಆದರೆ, ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡೋದಿಲ್ಲ. ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲೋದು ಖಚಿತ, ಇದು ಶೀರೂರು ಶ್ರೀಗಳ ಮಾತು. ಅವರ ಮಾತಲ್ಲಿ ಗೊಂದಲ ಇದೆ ಅನ್ನೋದು ಎಂಥವರಿಗೂ ಅರ್ಥವಾಗುತ್ತದೆ. ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ರನ್ನು ಶ್ರೀಗಳು ಹೊಗಳುತ್ತಾರೆ, ಬಿಜೆಪಿ ಬಗ್ಗೆ ಅಸಮಾಧಾನ ಹೊರ ಹಾಕುತ್ತಾರೆ, ಮರುಕ್ಷಣವೇ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಸ್ಪರ್ಧಿಸುತ್ತೇನೆ ಅಂತಾರೆ. ಮುಂದೆ ಓದಿ..

ಸಾಂಸ್ಕೃತಿಕ ಚಟುವಟಿಕೆಗಳಿಗೆ ಶ್ರೀಗಳ ಸದಾ ಪ್ರೋತ್ಸಾಹ
ಉಡುಪಿಯಲ್ಲಿ ಶಿರೂರು ಶ್ರೀಗಳು ಜನರಿಗೆ ಹತ್ತಿರವಿರುವ ಸ್ವಾಮೀಜಿ ಎಂಬುದು ಎಲ್ಲರಿಗೂ ತಿಳಿದದ್ದೇ. ಕ್ರೀಡಾ ಚಟುವಟಕೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಶ್ರೀಗಳು ಸದಾ ಪ್ರೋತ್ಸಾಹ ನೀಡುತ್ತಾ ಬಂದವರು. ಸ್ವತಃ ಡ್ರಮ್ಮರ್ ಆಗಿರುವ ಶ್ರೀಗಳು, ಸಂಗೀತದ ಬಗ್ಗೆಯೂ ಒಲವುಳ್ಳವರು. ಹೀಗಿರುವಾಗ ಶಿರೂರು ಸ್ವಾಮೀಜಿ ರಾಜಕೀಯಕ್ಕೆ ಇಳಿದಾಗ ಉಡುಪಿಯ ಜನತೆಗೆ ಅಂತಹ ಆಶ್ಚರ್ಯ ತರಲಿಲ್ಲ, ಬದಲಾಗಿ ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿರಬಹುದೇ ಎಂಬ ಅನುಮಾನ ಜನರಲ್ಲಿ ಮೂಡತೊಡಗಿತು.

ರಘುಪತಿ ಭಟ್ ಗೂ ಸ್ವಾಮೀಜಿಗಳಿಗೂ ಅಷ್ಟಕ್ಕಷ್ಟೆ
ಮುಖ್ಯವಾಗಿ ಶಿರೂರು ಶ್ರೀಗಳು ಮತ್ತು ಸಚಿವ ಪ್ರಮೋದ ಮಧ್ವರಾಜ್ ರೂ ಬಹಳ ಆತ್ಮೀಯರು. ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಗೂ ಸ್ವಾಮೀಜಿಗಳಿಗೂ ಅಷ್ಟಕ್ಕಷ್ಟೆ. ಹೀಗಿರುವಾಗ ಪ್ರಮೋದ್ ಗೆ ಪರೋಕ್ಷವಾಗಿ ನೆರವಾಗಲು ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದವು.

ಬಿಜೆಪಿ ಸಿದ್ದಾಂತ ಒಪ್ಪಿಕೊಂಡವರು
ಇನ್ನೊಂದೆಡೆ, ಸ್ವಾಮೀಜಿ ಬಿಜೆಪಿ ಬಗ್ಗೆ ಒಲವುಳ್ಳವರು ಬಿಜೆಪಿ ಸಿದ್ದಾಂತ ಒಪ್ಪಿಕೊಂಡವರು. ಹೀಗಾಗಿ ಶ್ರೀಗಳು ಸ್ಪರ್ಧೆ ಮಾಡಿದ್ರೆ ಬಿಜೆಪಿಯ ಮತಗಳು ವರ್ಗಾವಣೆಯಾಗುತ್ತವೆ ಅನ್ನೋದರಲ್ಲಿ ಎರಡು ಮಾತೇ ಇಲ್ಲ.ಆದ್ರೆ ಎಷ್ಟರ ಮಟ್ಟಿಗೆ ಮತಗಳು ಬೀಳುತ್ತವೆ ಅನ್ನೋದು ಈಗಲೇ ಹೇಳಲಾಗದು.

ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಬಿಜೆಪಿಯ ಮತಗಳ ವಿಭಜನೆ
ಇನ್ನು , ಶ್ರೀಗಳು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದಾಗ ಬಿಜೆಪಿ ವಲಯದಲ್ಲಿ ಆತಂಕ ಸೃಷ್ಟಿಯಾಗಿದ್ದು ಸುಳ್ಳಲ್ಲ. ಮಾಜಿ ಸಿಎಂ ಯಡಿಯೂರಪ್ಪ , ಸಂಸದೆ ಶೋಭಾ ಕರಂದ್ಲಾಜೆ ಮುಂತಾದವರು ಸ್ವಾಮೀಜಿಯನ್ನು ಸಂಪರ್ಕಿಸಿ ಸಮಾಲೋಚನೆಯನ್ನೂ ನಡೆಸಿದ್ದರು. ಒಂದು ವೇಳೆ ತಾವು ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಬಿಜೆಪಿಯ ಮತಗಳು ವಿಭಜನೆ ಆಗುತ್ತವೆ ಎಂಬುದನ್ನು ಬಿಜೆಪಿ ನಾಯಕರು ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದಾರೆ. ಆದರೆ, ಶ್ರೀಗಳು ಕಣದಿಂದ ಹಿಂದೆ ಸರಿಯಲು ಒಪ್ಪಲಿಲ್ಲ.

ಅಷ್ಠಮಠದಲ್ಲಿ ಬಂಡಾಯದ ಕಹಳೆ ಊದಿರುವ ಶಿರೂರು ಸ್ವಾಮೀಜಿ
ಅಷ್ಠಮಠದಲ್ಲಿ ಬಂಡಾಯದ ಕಹಳೆ ಊದಿರುವ ಶಿರೂರು ಸ್ವಾಮೀಜಿ ಈಗ ಹೊಸ ಗೆಟಪ್ ನಲ್ಲಿ ಜನರೆದುರು ನಿಂತಿದ್ದಾರೆ. ಅವರಿಗೆ ವಿಧಾನಸಭೆ ಪ್ರವೇಶಿಸುವುದಕ್ಕಿಂತ, ಚುನಾವಣೆಯಲ್ಲಿ ಸ್ಪರ್ಧಿಸೋದಷ್ಟೇ ಮುಖ್ಯ ಎಂಬ ಮಾತುಗಳೂ ಉಡುಪಿಯಲ್ಲಿ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಉಡುಪಿ ಕೃಷ್ಣಮಠದ ಇತಿಹಾಸದಲ್ಲಿ ಇದುವರೆಗೂ ಯಾರೂ ಮಾಡದ ಕೆಲಸಕ್ಕೆ ಶಿರೂರು ಶ್ರೀಗಳು ಮುಂದಾಗಿದ್ದಾರೆ, ಮತದಾರನ ಒಲವು ಮತ್ತು ಶ್ರೀಕೃಷ್ಣನ ಆಶೀರ್ವಾದ ಶ್ರೀಗಳ ಮೇಲೆ ಇರಲಿದೆಯೇ, ಕಾದು ನೋಡಬೇಕಿದೆ.












Click it and Unblock the Notifications