ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾದ ಅನುದಾನವೆಷ್ಟು?
ಉಡುಪಿ, ಏಪ್ರಿಲ್ 10: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ ಅಷ್ಟೇ. ಮೇ 12ರಂದು ಚುನಾವಣೆಯ ನಡೆಯಲಿದ್ದು ಪ್ರತಿಯೊಬ್ಬ ಪ್ರಜೆಯೂ ತಮ್ಮ ಮತದಾನದ ಹಕ್ಕು ಚಲಾಯಿಸುವ, ಆ ಮೂಲಕ ತಮ್ಮನಾಳುವವರನ್ನು ಆಯ್ಕೆ ಮಾಡುವ ಕಾಲ ಕೂಡಿ ಬಂದಿದೆ.
ಈ ಸಂದರ್ಭದಲ್ಲಿ ಕಳೆದ 5 ವರ್ಷಗಳಲ್ಲಿ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಹಾಲಿ ಶಾಸಕರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಇದು ಸೂಕ್ತ ಸಮಯ. ಈ ಹಿನ್ನಲೆಯಲ್ಲಿ 'ಒನ್ಇಂಡಿಯಾ ಕನ್ನಡ' ಆರ್.ಟಿ.ಐ ಮೂಲಕ ಅರ್ಜಿ ಸಲ್ಲಿಸಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ಬಿಡುಗಡೆಯಾದ ಹಣದ ಮಾಹಿತಿ ಪಡೆದುಕೊಂಡಿದೆ.
ದ. ಕನ್ನಡದ ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾದ ಅನುದಾನವೆಷ್ಟು?
2013-14ರಲ್ಲಿ ಪ್ರತೀ ಕ್ಷೇತ್ರಗಳಿಗೆ ತಲಾ 195.97 ಕೋಟಿ ಹಣ ಬಿಡುಗಡೆಯಾಗಿದ್ದರೆ, 2014-15, 15-16 ಮತ್ತು 16-17ರಲ್ಲಿ ತಲಾ 200 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. 2017-18ರಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾದ ಹಣ 150 ಕೋಟಿ.
ಇದರಲ್ಲಿ ವಿಶೇಷವಾಗಿ 2013-14ರಲ್ಲಿ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಮತ್ತು ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಬಿಡುಗಡೆಯಾದ ಅನುದಾನಕ್ಕಿಂತ ಹೆಚ್ಚು ಬಳಕೆ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
2014-15ರಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ 11.52 ಕೋಟಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡದೆ ಬಿಟ್ಟಿದ್ದಾರೆ. 2015-16 ರಲ್ಲಿ ಕಾರ್ಕಳ, ಕಾಪು ಮತ್ತು ಬೈಂದೂರಿನ ಶಾಸಕರು ಸುಮಾರು ತಲಾ 30 ಕೋಟಿ ರೂಪಾಯಿಯಷ್ಟು ಹಣವನ್ನು ಖರ್ಚು ಮಾಡದೆ ಬಿಟ್ಟಿದ್ದಾರೆ. 2016-17ರಲ್ಲಂತೂ ಇದೇ ಶಾಸಕರು ತಲಾ ಸುಮಾರು 50 ಕೋಟಿ ರೂಪಾಯಿಯಷ್ಟು ಹಣವನ್ನು ಬಳಕೆ ಮಾಡದೆ ಬಿಟ್ಟಿದ್ದಾರೆ.
ಅಂದಹಾಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬಿಜೆಪಿಯ ಸುನಿಲ್ ಕುಮಾರ್ ಶಾಸಕರಾಗಿದ್ದಾರೆ. ಕುಂದಾಪುರದಲ್ಲಿ ಪಕ್ಷೇತರರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರಾಗಿದ್ದರು. ಉಳಿದ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕಾಪು ಕ್ಷೇತ್ರವನ್ನು ವಿನಯ್ ಕುಮಾರ್ ಸೊರಕೆ ಪ್ರತಿನಿಧಿಸುತ್ತಿದ್ದರೆ, ಬೈಂದೂರು ಕ್ಷೇತ್ರವನ್ನು ಗೋಪಾಲ ಪೂಜಾರಿ ಮತ್ತು ಉಡುಪಿ ಕ್ಷೇತ್ರವನ್ನು ಪ್ರಮೋದ್ ಮಧ್ವರಾಜ್ ಪ್ರತಿನಿಧಿಸುತ್ತಿದ್ದಾರೆ.
ಆರ್.ಟಿ.ಐ ಮೂಲಕ ಪಡೆದುಕೊಂಡ ಮಾಹಿತಿಯ ಇನ್ನಿತರ ಸಂಪೂರ್ಣ ವಿವರಗಳು ಈ ಚಿತ್ರದಲ್ಲಿದೆ.