ಶೀರೂರು ಶ್ರೀಗಳಿಗೆ ಸ್ಪರ್ಧಿಸದಂತೆ ಹೇಳಿದ್ದು ಕೋಲದ ದೈವ !
ಉಡುಪಿ, ಏಪ್ರಿಲ್ 18: ಚುನಾವಣಾ ಕಣಕ್ಕೆ ಇಳಿಯುವ ಮೂಲಕ ಕರಾವಳಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳು ಶುಕ್ರವಾರ ನಾಮಪತ್ರ ಹಿಂದೆಗೆದು ಮತ್ತೆ ಸುದ್ದಿ ಮಾಡಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಶ್ರೀಗಳು, ಟಿಕೆಟ್ ಸಿಗದ ಕಾರಣ ಕಳೆದ ಮಂಗಳವಾರದಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಉಡುಪಿಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ಸಿಕ್ಕಿದೆ.
ಶೀರೂರು ಶ್ರೀಗಳು ನಾಮಪತ್ರ ಹಿಂತೆಗೆದುಕೊಳ್ಳಲು ಕಾರಣವೇನು ಗೊತ್ತಾ?
ನಾಮಪತ್ರ ಹಿಂತೆಗೆತಕ್ಕೆ ಕಾರಣ ನೀಡಿದ್ದ ಶ್ರೀಗಳು, ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರನ್ನು ಬೆಂಬಲಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಲ್ಲದೆ, ಮೇ ಒಂದರಂದು ಪ್ರಧಾನಿಯವರು ಉಡುಪಿಗೆ ಬರುತ್ತಿದ್ದಾರೆ. ಅವರು ನಮ್ಮ ಊರಿಗೆ ಬಂದಾಗ ಅವರ ಧ್ಯೇಯ ಮತ್ತು ಚಿಂತನೆಗಳಿಗೆ ತೊಡಕು ಉಂಟು ಮಾಡಬಾರದು ಎಂಬ ಉದ್ದೇಶದಿಂದ ನಾಮಪತ್ರ ಹಿಂದೆಗೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಆದರೆ, ಶೀರೂರು ಶ್ರೀಗಳು ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳುವುದರ ಹಿಂದೆ ಸ್ವಾರಸ್ಯಕರ ಕಾರಣವೊಂದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದು ದೈವದ ನುಡಿ.
ಹೌದು. ಶಿರೂರು ಶ್ರೀಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಅವರು ನಂಬುವ ದೈವಗಳೂ ಕೂಡ ಬೇಡ ಎಂದಿದ್ದವು ಎಂಬ ಕುತೂಹಲಕಾರಿ ಅಂಶ ಈಗ ಬೆಳಕಿಗೆ ಬಂದಿದೆ. ಶೀರೂರು ಶ್ರೀಗಳು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ ನಂತರ ತಮ್ಮ ಮಠದಲ್ಲಿ 3 ದಿನಗಳ ದೈವಗಳ ಕೋಲವನ್ನು ಆಯೋಜಿಸಿದ್ದರು.
ಇಬ್ಬರು ಅಭ್ಯರ್ಥಿಗಳು ಗೆಲುವಿಗಾಗಿ ಒಂದೇ ದೈವದ ಆಶೀರ್ವಾದ ಪಡೆದ್ರು!
ಈ ಸಂದರ್ಭದಲ್ಲಿ ಸ್ವಾಮೀಜಿ, ತಾವು ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದ್ದೇವೆ. ಗೆಲ್ಲಿಸಿಕೊಡುತ್ತೀರಾ ಎಂದು ದೈವಗಳನ್ನು ಕೇಳಿದ್ದರು. ಅದಕ್ಕೆ ದೈವಗಳು ನೀಡಿದ ಉತ್ತರ ಅಷ್ಟೇನೂ ಆಶಾದಾಯಕವಾಗಿರಲಿಲ್ಲ.
ಸ್ವಾಮಿಗಳೇ... ನೀವು ದೇವರಿಗಿಂತ ಒಂದು ಪಟ್ಟ ಕೆಳಗಿದ್ದೀರಿ. ಅದು ಬಹಳ ಶ್ರೇಷ್ಠವಾದ ಪಟ್ಟ. ಅದನ್ನು ಬಿಟ್ಟು ನಿಮ್ಮನ್ನು ಇನ್ನೂ ಕೆಳಗಿನ ಪಟ್ಟದಲ್ಲಿ ನೋಡುವುದಕ್ಕೆ ನಾವು ಇಷ್ಟಪಡುವುದಿಲ್ಲ. ನೀವು ಈಗಿರುವ ಪಟ್ಟವನ್ನು ಬಿಟ್ಟು ಕೆಳಗಿನ ಪಟ್ಟಕ್ಕೆ ಇಳಿಯುವುದಕ್ಕೆ ಹೊರಟರೆ ನಾವು ನಿಮಗೆ ಬೆಂಬಲ ಕೊಡುವುದಿಲ್ಲ ಎಂದು ದೈವ ಹೇಳಿತ್ತು ಎಂದು ಕೋಲದ ಸಂದರ್ಭ ಉಪಸ್ಥಿತರಿದ್ದವರು ಮಾತಾಡಿಕೊಳ್ಳುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿ ಅಷ್ಠಮಠಾಧೀಶರ ವಲಯದಲ್ಲಿ ಇರಿಸುಮುರಿಸು ತಂದಿದ್ದ ಶೀರೂರು ಶ್ರೀಗಳು ಕೊನೆಗೂ ದೈವದ ಇಚ್ಛೆಯಂತೆ ಕಣದಿಂದ ಹಿಂದೆ ಸರಿದಿದ್ದಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.