ದಟ್ಟವಾಗುತ್ತಿವೆ ಅನುಮಾನಗಳು:ನಾಪತ್ತೆಯಾದ ಮೀನುಗಾರರು ಅಪಾಯಕ್ಕೆ ಸಿಲುಕಿರಬಹುದೇ?
ಉಡುಪಿ, ಡಿಸೆಂಬರ್ 20: 35 ದಿನಗಳಿಂದ ನಾಪತ್ತೆಯಾಗಿರುವ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೀಡಾಗಿದೆಯೇ? ಬೋಟ್ ನಲ್ಲಿದ್ದ ಮೀನುಗಾರರು ಅಪಾಯಕ್ಕೆ ಸಿಲುಕಿರಬಹುದೇ? ಎಂಬ ಅನುಮಾನಗಳು ಈಗ ದಟ್ಟವಾಗತೊಡಗಿವೆ.
ನೌಕಾಪಡೆ ಸಮುದ್ರದ ಆಳದಲ್ಲಿ ಸೋನಾರ್ ಉಪಕರಣ ಬಳಸಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಕಳೆದ ತಿಂಗಳಿನಿಂದ ಕರಾವಳಿಯಲ್ಲಿ ನಾಪತ್ತೆಯಾದ ಮೀನುಗಾರರದ್ದೇ ಸುದ್ದಿ. ಇವರೆಲ್ಲಾ ಎಲ್ಲಿಗೆ ಹೋದರು? ಇವರಿದ್ದ ಬೋಟ್ ಗೆ ಏನಾಯ್ತು? ಯಾಕೆ ತಿಂಗಳು ಕಳೆದರೂ ಸಣ್ಣ ಕುರುಹು ಸಿಗುತ್ತಿಲ್ಲ?
ಡಿ.13ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ, ಡಿ.15ರ ರಾತ್ರಿಯಿಂದ ಸಂಪರ್ಕ ಕಡಿದುಕೊಂಡು ಕಣ್ಮರೆಯಾದ ಸುವರ್ಣ ತ್ರಿಭುಜ ಬೋಟ್ ನಲ್ಲಿ ಏಳು ಮಂದಿ ಮೀನುಗಾರರಿದ್ದರು. ಬೋಟ್ ಸಹಿತ ಮೀನುಗಾರರ ಅಪಹರಣ ಅಥವಾ ಸಮುದ್ರ ಮಧ್ಯೆ ಬೋಟು ಅವಘಡಕ್ಕೀಡಾಗಿರುವ ಕುರಿತು ಪೊಲೀಸರು ತನಿಖೆ ನಡೆಸಿದ್ದರು.
ಅಪಹರಣದ ತನಿಖೆಗಾಗಿ ಒಟ್ಟು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳಕ್ಕೆ ತೆರಳಿ ಅಲ್ಲಿ ಹುಡುಕಾಟ ಹಾಗೂ ತನಿಖೆಯನ್ನು ನಡೆಸಿದ್ದವು. ಈ ಕುರಿತು ಕೊಚ್ಚಿಯಿಂದ ಗುಜರಾತ್ ವರೆಗೆ ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಲಾಗಿತ್ತು.
ಪ್ರತಿ ಪೊಲೀಸ್ ತಂಡದಲ್ಲೂ ಇಬ್ಬರು-ಮೂವರು ಮೀನುಗಾರರನ್ನು ಸೇರಿಸಿಕೊಂಡು ತನಿಖೆ ನಡೆಸಲಾಗಿತ್ತು. ಮೀನುಗಾರರು ಸಂಶಯ ವ್ಯಕ್ತಪಡಿಸಿದ ಎಲ್ಲಾ ಸ್ಥಳಗಳಲ್ಲೂ ತಂಡ ಬೋಟಿಗಾಗಿ ಶೋಧ ನಡೆಸಿತ್ತು. ಆದರೆ ಈವರೆಗೆ ಈ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಪೊಲೀಸ್ ತಂಡಗಳು ವಾಪಾಸ್ಸಾಗಿವೆ ಎಂಬುದು ಸದ್ಯದ ಮಾಹಿತಿ. ಮುಂದೆ ಓದಿ...

ಪ್ಲಾಸ್ಟಿಕ್ ಬಾಕ್ಸ್ ಗಳು ದೊರೆತಿದ್ದವು
ಈ ಮಧ್ಯೆ ಡಿ.15ರಂದು ಮಹಾರಾಷ್ಟ್ರದಿಂದ ಕಾರವಾರಕ್ಕೆ ಆಗಮಿಸಿರುವ ನೌಕಾಪಡೆಯ ಹಡಗಿನ ತಳಭಾಗಕ್ಕೆ ಹಾನಿಯಾಗಿರುವುದನ್ನು ನೌಕಾಪಡೆ ಕಂಡುಕೊಂಡಿತ್ತು. ಇದು ಸಮುದ್ರದಲ್ಲಿ ಮುಳುಗಿರುವ ಬೋಟಿನ ಇಂಜಿನ್ ಅಥವಾ ಇತರ ಭಾಗಗಳು ತಾಗಿ ಉಂಟಾಗಿರುವ ಹಾನಿಯಂತೆ ಕಂಡುಬಂದಿದ್ದು, ಈ ಸಂಬಂಧ ನೌಕಾಪಡೆಯ ಅಧಿಕಾರಿಗಳು ಸಮುದ್ರ ಮಧ್ಯೆ ಬೋಟು ಅವಘಡ ಸಂಭವಿಸಿರುವ ಕುರಿತು ಮಹಾರಾಷ್ಟ್ರ ಕರಾವಳಿಗೆ ಸಂದೇಶ ಕಳುಹಿಸಿ ಮಾಹಿತಿ ಕೇಳಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಜ.15ರಂದು ಮಹಾರಾಷ್ಟ್ರದ ಮೀನುಗಾರರಿಗೆ ಸಮುದ್ರ ಮಧ್ಯೆ ತೇಲುತ್ತಿದ್ದ ಎಸ್.ಟಿ. (ಸುವರ್ಣ ತ್ರಿಭುಜ) ಎಂದು ಬರೆಯಲಾದ ಎರಡು ಮೀನು ಹಾಕುವ ಪ್ಲಾಸ್ಟಿಕ್ ಬಾಕ್ಸ್ ಗಳು ದೊರೆತಿದ್ದವು.

ಸಮುದ್ರದ ಆಳದಲ್ಲಿ ಬೋಟಿಗಾಗಿ ಶೋಧ
ಡಿ.18ರಂದು ಕೂಡ ಗೋವಾದ ಮಾಲ್ವನ್ ನಲ್ಲಿಯೂ ಒಂದು ಬಾಕ್ಸ್ ಪತ್ತೆಯಾಗಿತ್ತು. ಇದೀಗ ನೌಕಾಪಡೆಯ ಹಡಗಿಗೆ ಆಗಿರುವ ಹಾನಿಯು ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟು ಅವಘಡ ಸಂಭವಿಸಿ ಆಗಿರಬಹುದೆ ಎಂಬ ಸಂಶಯದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದೀಗ ನೌಕಾಪಡೆ ಅತ್ಯಾಧುನಿಕ ತಂತ್ರಜ್ಞಾನವಾದ ಸೋನಾರ್ ಬಳಸಿ ಶೋಧ ಕಾರ್ಯಾಚರಣೆ ನಡೆಸ್ತಾ ಇದೆ ಎಂಬ ಮಾಹಿತಿ ಇದೆ. ಜ.12ರಿಂದ ಸಮುದ್ರದ ಆಳದಲ್ಲಿ ಬೋಟಿಗಾಗಿ ಶೋಧ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

ಯಾವುದೇ ಮಾಹಿತಿಯನ್ನು ದೃಢಪಡಿಸುತ್ತಿಲ್ಲ
ಈ ಮಧ್ಯೆ ಸುವರ್ಣ ತ್ರಿಭುಜ ಬೋಟು ನಾಪತ್ತೆಯಾದ ಒಂದು ವಾರದ ಬಳಿಕ ಪೊಲಿಸ್ ಠಾಣೆ, ಕೋರ್ಸ್ಟ್ ಗಾರ್ಡ್ ಹಾಗೂ ನೌಕಪಡೆಗಳಿಗೆ ಮಾಹಿತಿ ದೊರೆತಿದ್ದು, ದೂರು ನೀಡಲು ಆಗಿರುವ ವಿಳಂಬ ಕೂಡ ತನಿಖೆಗೆ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಪೊಲೀಸರಾಗಲೀ ,ಜಿಲ್ಲಾಡಳಿತವಾಗಲೀ ಯಾವುದೇ ಮಾಹಿತಿಯನ್ನು ದೃಢಪಡಿಸುತ್ತಿಲ್ಲ. ಹುಡುಕಾಟ ನಡೆಯುತ್ತಿದೆ ಎಂಬ ಉತ್ತರ ಮಾತ್ರ ಎಲ್ಲ ಕಡೆಯಿಂದ ಬರುತ್ತಿದೆ.

ಆತಂಕ ದಿನಕಳೆದಂತೆ ಹೆಚ್ಚುತ್ತಲೇ ಇದೆ
ಡಿ.13ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟ ಸುವರ್ಣ ತ್ರಿಭುಜ ಬೋಟು ಸಮುದ್ರದಲ್ಲಿ ಸ್ವಲ್ಪವೇ ದೂರ ಸಾಗುತ್ತಿದ್ದಂತೆ ತಾಂತ್ರಿಕ ದೋಷದಿಂದ ಅರ್ಧದಲ್ಲೇ ಮಲ್ಪೆ ಬಂದರಿಗೆ ಮರಳಿತ್ತು. ನಂತರ ದುರಸ್ತಿ ಕಾರ್ಯ ನಡೆಸಿ ಹೊರಟ ಸುವರ್ಣ ತ್ರಿಭುಜ ಬೋಟು, ಉಳಿದ ಆರು ಬೋಟುಗಳಿಗಿಂತ ಎರಡು ಗಂಟೆ ಮುಂದೆ ಸಾಗಿತ್ತು. ಹೀಗೆ ನಿರಂತರ ಚಾಲನೆಯಿಂದ ಬೋಟಿನ ರೇಡಿಯೆಟರ್ ಬಿಸಿಯಾಗಿ ಅವಘಡ ಸಂಭವಿಸಿರಬಹುದೇ? ಎಂಬ ಶಂಕೆಗಳು ಕೂಡ ವ್ಯಕ್ತವಾಗುತ್ತಿವೆ. ಒಟ್ಟಾರೆ ನಾಪತ್ತೆಯಾದ ಮೀನುಗಾರರ ಮನೆಯವರ ಆತಂಕ ದಿನಕಳೆದಂತೆ ಹೆಚ್ಚುತ್ತಲೇ ಇದೆ.












Click it and Unblock the Notifications