ಕಾರ್ಕಳದ ಅತ್ತೂರಿನಲ್ಲಿ ಇಂದು (ಜ.27) ಭಿಕ್ಷುಕರ ಹಬ್ಬ
ಉಡುಪಿ, ಜನವರಿ 27: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಜಾತ್ರೆಗೆ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ವಿಶೇಷವೆಂದರೆ ಇಂದು(ಜ.27) ಸಂತ ಲಾರೆನ್ಸ್ ಬೆಸಿಲಿಕಾದಲ್ಲಿ ಭಿಕ್ಷುಕರ ಹಬ್ಬ ನಡೆಯಿತು. ಜಾತ್ರೆಯ ಸಂದರ್ಭ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಭಿಕ್ಷುಕಾರಿಗಾಗಿ ದಾನ ಮಾಡಲಿಚ್ಚಿಸುವವರಿಗಾಗಿ ಪ್ರತ್ಯೇಕ ಹುಂಡಿಯ ವ್ಯವಸ್ಥೆ ಮಾಡಲಾಗಿತ್ತು.

ಜಾತ್ರೆ ಸಂದರ್ಭ ಆ ಹುಂಡಿಯಲ್ಲಿ ಸಂಗ್ರಹವಾದ ಮೊತ್ತವನ್ನು ಅರ್ಹತೆಯಾಧಾರದಲ್ಲಿ ಭಿಕ್ಷುಕರಿಗೆ ಹಂಚಲಾಗುತ್ತದೆ. ಈಗಾಗಲೇ ದೂರದೂರದ ಊರುಗಳಿಂದ ಅಸಹಾಯಕರು. ವೃದ್ಧರು ಹಾಗೂ ಭಿಕ್ಷುಕರು ಅತ್ತೂರಿಗೆ ಆಗಮಿಸಿದ್ದರು. ಇಂದಿನ ಶುಭ ದಿನದ ಅಂಗವಾಗಿ ಭಿಕ್ಷುಕರಿಗೆ ಸಂಗ್ರಹವಾದ ಹಣವನ್ನು ಹಂಚುವುದಾಗಿ ಎಂದು ಉಡುಪಿ ಧರ್ಮಾಧ್ಯಕ್ಷ ರೇ .ಡಾ. ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು.

ಕ್ರಿಸ್ತನ ಅನುಯಾಯಿಯಾಗಲು ತ್ಯಾಗ, ಸೇವಾಗುಣ ಇರಬೇಕು. ಬಡವರ ಸೇವೆ ಮಾಡಲು ಪ್ರತಿ ಕ್ಷಣವೂ ಸಿದ್ಧರಾಗಿರುವವರು, ಅವರ ಸೇವೆಯಲ್ಲಿಯೇ ಖುಷಿ ಕಾಣುವವರು ಕ್ರಿಸ್ತರ ಅನುಯಾಯಿಗಳಾಗಲು ಅರ್ಹರು ದಯೆ ಮತ್ತು ಶ್ರದ್ಧೆ ದೇವದೂತನಿಂದ ನಮಗೆ ದೊರೆತ ಬಳುವಳಿಗಳು ಎಂದು ತಿಳಿಸಿದರು.

ಜನಸಾಗರ: ಅತ್ತೂರು ಬಸಿಲಿಕಾ ಮಹೋತ್ಸವ ಕೊನೆಯ ದಿನವಾದ ಕ್ಷೇತ್ರಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಗುರುವಾರ ರಜಾ ದಿನವಾದ್ದರಿಂದ ಲಕ್ಷಾಂತರ ಜನ ಆಗಮಿಸಿ ಬಲಿಪೂಜೆ, ಪ್ರಾರ್ಥನೆ ಹಾಗೂ ಮೋಂಬತ್ತಿ ಸೇವೆ ಸಲ್ಲಿಸಿದರು. ಬಲಿಪೂಜೆಯ ವಿಶೇಷ ಪ್ರಾರ್ಥನೆಗಳ ಮೂಲಕ ಕೊನೆಯ ದಿನವೂ ಚರ್ಚ್ನಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಪೊಲೀಸ್ ಸಿಬ್ಬಂದಿ ವಾಹನಗಳ ನಿಯಂತ್ರಣಕ್ಕೆ ಹರಸಾಹಸಪಟ್ಟರು.












Click it and Unblock the Notifications