ಹಾಲಾಡಿ ಸ್ಪರ್ಧೆಯಿಂದ ಬೈಂದೂರಲ್ಲಿ ಬಿಜೆಪಿಗೆ ಪ್ಲಸ್: ಸುಕುಮಾರ ಶೆಟ್ಟಿ
ಉಡುಪಿ, ಏಪ್ರಿಲ್ 14: "ನನ್ನನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಜನ ತೀರ್ಮಾನಿಸುತ್ತಾರೆ. ಆದರೆ ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷೇತರನಾಗಿ ಸ್ಪರ್ಧಿಸಲಾರೆ" ಎಂದು ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆಗೆ ಬೈಂದೂರಿನ ಎಲ್ಲ ಕ್ಷೇತ್ರದ ಪರಿಚಯ ಇರಲ್ಲ. ನಾನು ಯಾವುದೇ ಅಸಮಾಧಾನ ವ್ಯಕ್ತ ಪಡಿಸಲ್ಲ. ಆದರೆ ಯಾರು ಸೂಕ್ತ ವ್ಯಕ್ತಿ ಎಂದು ಜನ ನಿರ್ಧರಿಸುತ್ತಾರೆ. ಜಯಪ್ರಕಾಶ್ ಹೆಗ್ಡೆ ಬೈಂದೂರು ಕ್ಷೇತ್ರಕ್ಕೆ ಬರಲೇ ಇಲ್ಲ ಎಂದಿರುವ ಸುಕುಮಾರ ಶೆಟ್ಟರು, ಕ್ಷೇತ್ರದ ಜನ ಬುದ್ಧಿವಂತರಿದ್ದು, ಕ್ಷೇತ್ರದ ಅಭಿವೃದ್ಧಿಗೆ ಯಾರು ಸಮರ್ಥರು ಎಂಬುದು ಅವರಿಗೆ ಗೊತ್ತಿದೆ ಎಂದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಆ ಮೂಲಕ ಬೈಂದೂರು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ದೊರೆಯುವ ಬಗ್ಗೆ ಪ್ರಬಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಎರಡನೇ ಪಟ್ಟಿಯಲ್ಲಿ ಹೆಸರು ಬಂದರೂ ತಲೆ ಬಿಸಿ ಮಾಡುವುದಿಲ್ಲ. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಶಾಸಕರು, ಮಾಜಿ ಶಾಸಕರ ಹೆಸರಿವೆ. ಆದ್ದರಿಂದ ನಾನು ಜನಪರ ಕೆಲಸ ಮಾಡಿರುವುದರಿಂದ ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿರುವ ಸುಕುಮಾರ ಶೆಟ್ಟರು, ಅವರು ಬಿಜೆಪಿ ಸೇರಿರುವುದರಿಂದ ಬೈಂದೂರು ಬಿಜೆಪಿಗೂ ಲಾಭ ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕೆಲ ಮುಖಂಡರ ರಾಜೀನಾಮೆಯಿಂದ ಬೈಂದೂರು ಕ್ಷೇತ್ರದ ಮೇಲೆ ಕಿಂಚಿತ್ ಪರಿಣಾಮ ಇಲ್ಲ. ಅವರು ಬೈಂದೂರು ಕ್ಷೇತ್ರದವರಲ್ಲ ಎಂದು ಸುಕುಮಾರ ಶೆಟ್ಟಿ ಹೇಳಿದರು.