ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮಾತಲ್ಲಿ ಸ್ಪಷ್ಟವಾದ ಬಿಜೆಪಿಯೊಳಗಿನ ಅಸಮಾಧಾನ
ಉಡುಪಿ, ಆಗಸ್ಟ್ 20: ಐದು ಬಾರಿಯ ಶಾಸಕ, ಉಡುಪಿ ಜಿಲ್ಲೆಯ ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದು ಅವರ ಬೆಂಬಲಿಗರಿಗೆ ಬೇಸರ ತಂದಿದೆ. ಮಂಗಳವಾರ ಸಂಪುಟ ರಚನೆಗೂ ಗೈರಾಗಿರುವ ಶ್ರೀನಿವಾಸ್ ಶೆಟ್ಟಿ ಅವರು ಹಾಲಾಡಿಯ ತಮ್ಮ ಕಚೇರಿಯಲ್ಲಿ ಬೆಂಬಲಿಗರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಕಳೆದ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿ, ಪಕ್ಷಕ್ಕೇ ಗುಡ್ ಬೈ ಹೇಳಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಬಳಿಕ ಯಡಿಯೂರಪ್ಪನವರು ಮನವೊಲಿಕೆ ಮಾಡಿದ್ದರಿಂದ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತ್ತೆ ಬಿಜೆಪಿಗೆ ಸೇರಿ, ಪಕ್ಷದ ಟಿಕೆಟ್ ನಲ್ಲಿ ಗೆದ್ದಿದ್ದರು.
ಸಚಿವ ಸಂಪುಟ ರಚನೆ ವೇಳೆ ಜಿಲ್ಲೆಯ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಕ್ಕಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಕೈ ತಪ್ಪಿರುವುದರಿಂದ ಬೆಂಬಲಿಗರು ತೀವ್ರ ನಿರಾಸೆಗೊಂಡಿದ್ದಾರೆ.

ಈ ಸಂಬಂಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಕುಂದಾಪುರದ ಬಂಟ ಸಮುದಾಯದ ನಾಯಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, "ಪ್ರಮಾಣವಚನಕ್ಕೆ ನನಗೆ ಆಹ್ವಾನ ಇರಲಿಲ್ಲ. ಲಾಬಿ ಮಾಡಿ ಸಚಿವ ಸ್ಥಾನ ಪಡೆಯುವುದು ಗೊತ್ತಿಲ್ಲ. ಗುಂಪುಗಾರಿಕೆ, ವಾಮಮಾರ್ಗ ಮಾಡಲ್ಲ. ಜಾತಿ ರಾಜಕಾರಣ ಮಾಡಿ ನನಗೆ ಗೊತ್ತಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
"ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸಿದ್ದೇನೆ. ಪಕ್ಷನಿಷ್ಠೆ ತೋರಿದ್ದೇನೆ. ಪಕ್ಷೇತರನಾಗಿದ್ದಾಗಲೂ ಬಿಜೆಪಿಯನ್ನು ಬೆಂಬಲಿಸಿದ್ದೇನೆ. ಸಚಿವ ಸ್ಥಾನ ಯಾಕೆ ಸಿಗಲಿಲ್ಲವೆಂದು ನನಗೆ ಗೊತ್ತಿಲ್ಲ. ಮಾಧ್ಯಮದವರು ಬಿಜೆಪಿಯ ಪ್ರಮುಖರನ್ನೇ ಕೇಳಿ" ಎಂದರು.
"ಸಚಿವ ಸ್ಥಾನ ವಂಚಿತರು ನನ್ನನ್ನು ಸಭೆಗೆ ಕರೆದಿದ್ದರು. ಬೆಂಗಳೂರಿಗೆ ಬರುವಂತೆ ನನ್ನನ್ನು ಕೇಳಿಕೊಂಡಿದ್ದರು. ನಾನು ಎಲ್ಲೂ ಹೋಗಿಲ್ಲ, ಕ್ಷೇತ್ರದಲ್ಲೇ ಇದ್ದೇನೆ" ಎಂದು ಹಾಲಾಡಿಯಲ್ಲಿ ಶಾಸಕ ಶ್ರೀನಿವಾಸ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications