ಕೇರಳ: ಸತ್ತನೆಂದು ಹೂತಿಟ್ಟ ಮಗ 15 ದಿನಗಳ ಬಳಿಕ ಮನೆಗೆ ಬಂದ!
ತಿರುವನಂತಪುರ, ನವೆಂಬರ್ 03: ಕಳೆದು ಹೋಗಿದ್ದ ಮಗನ ಶವ ಸಿಕ್ಕಿತೆಂದು ಮಣ್ಣಲ್ಲಿ ಹೂತಿಟ್ಟು ಕಣ್ಣೀರು ಸೇರಿದ್ದ ಕುಟುಂಬಕ್ಕೆ ಭಾರಿ ಆಘಾತವೊಂದು ಕಾದಿತ್ತು. ಕ್ರಿಕಾಕರ್ಮ ಮುಗಿಸಿದ 15 ದಿನಗಳ ನಂತರ ಮಗ ಮನೆ ಬಾಗಿಲಲ್ಲಿ ಪ್ರತ್ಯಕ್ಷ!
ಹೌದು, ಕೇರಳದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ವೈನಾಡಿನ ಆಡಿಕೊಳ್ಳಿ ಎಂಬಲ್ಲಿನ ಕುಟುಂಬವೊಂದು 48 ವರ್ಷದ ಮಗ ಸಾಜಿಯ ದೇಹವನ್ನು ಚರ್ಚ್ ಬಳಿಯ ಸ್ಮಶಾನದಲ್ಲಿ ಮಣ್ಣು ಮಾಡಿತ್ತು. ಆದರೆ ಮಣ್ಣು ಮಾಡಿದ 15 ದಿನಗಳ ನಂತರ ಅದೇ ಮಗ ಮನೆಗೆ ಬಂದಿದ್ದಾನೆ.
ಸೆಪ್ಟೆಂಬರ್ 3 ರಂದು ಸಾಜಿ ಮನೆ ಬಿಟ್ಟು ಕೆಲಸಕ್ಕೆ ತೆರಳಿದ್ದ ಅಂದಿನಿಂದ ಆತ ನಾಪತ್ತೆಯಾಗಿದ್ದ ಮನೆಯವರು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಅಕ್ಟೋಬರ್ 13 ರಂದು ಕೇರಳ-ಕರ್ನಾಟಕ ಗಡಿಯಲ್ಲಿ ಅರ್ಧ ಕೊಳೆತ ದೇಹವೊಂದು ಸಿಕ್ಕಿದೆ. ಅದರ ಬಗ್ಗೆ ಕೇರಳದ ಪಲ್ಪಿಲೈ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ ಗಡಿ ಠಾಣೆಯ ಪೊಲೀಸರು.

ಶವ ನೋಡಲು ಅವಕಾಶ ಕೊಡಿ
ಕಳೆದು ಹೋಗಿದ್ದ ಸಾಜಿಯ ಸಹೋದರ ಸಹ ಪೊಲೀಸ್ ಆಗಿದ್ದು, ಆ ಮಾಹಿತಿ ಕಿವಿಗೆ ಬಿದ್ದ ಕೂಡಲೇ ನನ್ನ ತಮ್ಮ ಸಹ ಕಳೆದ ಎರಡು ವಾರದಿಂದ ಕಾಣೆಯಾಗಿದ್ದಾನೆ, ನಮ್ಮ ಕುಟುಂಬಕ್ಕೆ ಆ ಹೆಣ ನೋಡಿ ಗುರುತು ಹಿಡಿಯುವ ಅವಕಾಶ ಕೊಡಿ ಎಂದಿದ್ದಾರೆ. ಅದರಂತೆ ಸಾಜಿಯ ಕುಟುಂಬವು ಅರ್ಧ ಕೊಳೆತ ಹೆಣವನ್ನು ಗುರತುಪತ್ತೆಗೆ ಹೋಗಿದ್ದಾರೆ.

ಕಾಲ ಮೇಲೆ ಗಾಯದ ಗುರುತಿತ್ತು
ಕಳೆದು ಹೋದ ಸಾಜಿಗೆ ಕಾಲಿನ ಮೇಲೆ ಗಾಯದ ಗುರುತು ಇತ್ತೆಂದು ಕುಟುಂಬ ಸದಸ್ಯರು ಹೇಳಿ, ಆ ಅರ್ಧ ಕೊಳೆತ ಹೆಣ ಸಾಜಿಯದ್ದೇ ಎಂದು ಕೊಂಡು ತೆಗೆದುಕೊಂಡು ಬಂದು ಚರ್ಚ್ ಒಂದರ ಸಮೀಪ ಸಮಾಧಿ ಮಾಡಿದ್ದಾರೆ. ಆದರೆ ಹಾಗೆ ಸಮಾಧಿ ಮಾಡಿದ ಕೆಲವು ದಿನಗಳ ಬಳಿಕ ಸಾಜಿ ಮನೆಗೆ ಬಂದುಬಿಟ್ಟಿದ್ದಾನೆ.

ಮನೆಗೆ ಬಂದ ಸಾಜಿ
ಪಕ್ಕದ ಮನೆಯವರ ಜೊತೆ ಜಗಳ ಮಾಡಿಕೊಂಡು ಮನೆಯಿಂದ ಹೋಗಿದ್ದ ಸಾಜಿ ಕೂನೂರು ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದನಂತೆ, ಆ ನಂತರ ಅಕ್ಟೋಬರ್ 31 ರಂದು ಮರಳಿ ಮನೆಗೆ ಬಂದಿದ್ದಾನೆ. ಅಷ್ಟರಲ್ಲಾಗಲೇ ಅವನ ಫೋಟೊಗೆ ಹಾರ ಹಾಕಿ ನಡು ಮನೆಯಲ್ಲಿ ತೂಗು ಹಾಕಲಾಗಿತ್ತಂತೆ.

ಸಮಾಧಿಯಾದ ಶವ ತೆಗೆಯುವುದಿಲ್ಲ ಎಂದ ಪೊಲೀಸರು
ಸಾಜಿಯನ್ನು ಠಾಣೆಗೆ ಕರೆದುಕೊಂಡು ಆತನ ಸಹೋದರ ಪೊಲೀಸರಿಗೆ ಹೇಳಿಕೆ ಕೊಡಿಸಿದ್ದಾರೆ. ಶವ ಸಿಕ್ಕ ಠಾಣೆಗೂ ವಿಷಯ ತಿಳಿಸಿದ್ದಾರೆ. ಅರ್ಧ ಕೊಳೆತ ಶವವನ್ನು ಸಾಜಿ ಕುಟುಂಬಕ್ಕೆ ನೀಡುವ ಮೊದಲು ಅದರ ಶವಪರೀಕ್ಷೆ ಮಾಡಲಾಗಿದೆ, ಅಲ್ಲದೆ, ಅದರ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ. ಅವುಗಳನ್ನು ಎಲ್ಲ ಠಾಣೆಗಳಿಗೆ ಕಳುಹಿಸಿ ಪತ್ತೆ ಹಚ್ಚಲು ಹೇಳಲಾಗುವುದು. ಯಾರಾದರೂ ವಾರಸದಾರರು ಬಂದರಷ್ಟೆ ಶವ ಹೊರತೆಗೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications