ಚಾನ್ಸ್ ಸಿಗುತ್ತೆ ಅಂತ ಅದಕ್ಕೆಲ್ಲ ಓಕೆ ಅನ್ನಬೇಡಿ, ಈ ಸಿಂಪಲ್ ಕೆಲಸ ಮಾಡಿದ್ರೆ ಸಾಕು: ಯುವ ನಟಿಯರಿಗೆ ಕಾಜಲ್ ಕಿವಿಮಾತು
ಸಿನಿಮಾ ಜಗತ್ತಿನಲ್ಲಿ ನಟಿಯರ ಬ್ಯೂಟಿ ಮತ್ತು ಫಿಟ್ನೆಸ್ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ಈ ಒತ್ತಡ ಮತ್ತಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಖ್ಯಾತ ನಟಿ ಕಾಜಲ್ ಅಗರ್ವಾಲ್. ತಮ್ಮ ಸುದೀರ್ಘ ಸಿನಿಮಾ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡಿರುವ ಅವರು, ಇಂದಿನ ತಲೆಮಾರಿನ ನಟಿಯರು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಕಾಜಲ್, ತಾವು ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ನಿರ್ದೇಶಕರು ಹಾಗೂ ನಿರ್ಮಾಪಕರು ತಮ್ಮ ದೈಹಿಕ ರೂಪವನ್ನು ಹೇಗೆ ಜಡ್ಜ್ ಮಾಡುತ್ತಿದ್ದರು ಮತ್ತು ಇಂದಿನ ಕರುಣೆಯಿಲ್ಲದ ಬ್ಯೂಟಿ ರೂಲ್ಸ್ ಯುವ ನಟಿಯರನ್ನು ಹೇಗೆ ಬಾಧಿಸುತ್ತಿವೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಅಂದಿನ ದಿನಗಳೇ ಚೆನ್ನಾಗಿದ್ದವು
ಸುಮಾರು ಎರಡು ದಶಕಗಳ ಹಿಂದೆ ಚಿತ್ರರಂಗಕ್ಕೆ ಹೆಜ್ಜೆ ಇಟ್ಟ ಕಾಜಲ್, ಅಂದಿನ ಮತ್ತು ಇಂದಿನ ಪರಿಸ್ಥಿತಿಯನ್ನು ಹೋಲಿಸಿದ್ದಾರೆ. "ನಾವು ಚಿತ್ರರಂಗಕ್ಕೆ ಬಂದಾಗ ಸೋಶಿಯಲ್ ಮೀಡಿಯಾ ಇರಲಿಲ್ಲ. ಹಾಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ನಮ್ಮನ್ನು ಅತಿಯಾಗಿ ಜಡ್ಜ್ ಮಾಡುವ ಹೊರಗಿನವರ ಕಾಟವಿರಲಿಲ್ಲ. ಅಷ್ಟೇ ಅಲ್ಲ ಇಂದಿನಂತೆ 'ಏರ್ಪೋರ್ಟ್ ಲುಕ್'ಗಳನ್ನು ಮ್ಯಾನೇಜ್ ಮಾಡಬೇಕಾದ ತಲೆನೋವು ನಮಗಿರಲಿಲ್ಲ. ನಾವು ನಾವಾಗಿಯೇ ಇರಬಹುದಿತ್ತು. ವಿಶೇಷವಾಗಿ ಸುದೀರ್ಘ ಪ್ರಯಾಣದ ವೇಳೆ ಸಂಪೂರ್ಣ ಮೇಕಪ್ ಮಾಡಿಕೊಂಡು ಕಂಫರ್ಟ್ ಇಲ್ಲದೆ ಓಡಾಡುವುದು ಸುಲಭವಲ್ಲ. ಕನಿಷ್ಠಪಕ್ಷ ನಮಗೆ ಅಂತಹ ಕಾಟ ಇರಲಿಲ್ಲ" ಎಂದು ಅವರು ಖುಷಿಪಟ್ಟಿದ್ದಾರೆ.

ನಿರ್ಮಾಪಕರಿಂದ ಬರುತ್ತಿದ್ದ ಒತ್ತಡ
ಅಂದು ಸೋಶಿಯಲ್ ಮೀಡಿಯಾ ಇಲ್ಲದಿದ್ದರೂ, ಚಿತ್ರರಂಗದ ಒಳಗಿನಿಂದಲೇ ನಟಿಯರ ಮೇಲೆ ಒತ್ತಡವಿರುತ್ತಿತ್ತು ಎಂಬುದನ್ನು ಕಾಜಲ್ ಒಪ್ಪಿಕೊಂಡಿದ್ದಾರೆ. "ಆ ಸಮಯದಲ್ಲಿ ನಿರ್ದೇಶಕರು-ನಿರ್ಮಾಪಕರಿಂದ ಜಡ್ಜ್ಮೆಂಟ್ಗಳು ಬರುತ್ತಿದ್ದವು. ಕೆಲವು ಸಿನಿಮಾಗಳಿಗಾಗಿ ನನ್ನನ್ನು 'ಇನ್ನೂ ದಪ್ಪಗಾಗು' ಅಥವಾ 'ಇನ್ನೂ ತೆಳ್ಳಗಾಗು' ಎಂದು ಕೇಳುತ್ತಿದ್ದರು. ಏನೇ ಇದ್ದರೂ ಅಂದಿನ ದಿನಗಳು ಇಂದಿನಷ್ಟು ಕ್ರೂರವಾಗಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ತೀರಾ ಕರುಣೆಯಿಲ್ಲದಂತಾಗಿದೆ. ಹೀಗಾಗಿ ಈಗಿನ ಯುವ ನಟಿಯರನ್ನು ನೋಡಿದರೆ ನನಗೆ ಬೇಸರವಾಗುತ್ತದೆ. ಅವರೆಲ್ಲರೂ ಈ ಕಠಿಣ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಲಿ ಎಂದು ನಾನು ಹಾರೈಸುತ್ತೇನೆ" ಎಂದು ಕಾಜಲ್ ಕಳಕಳಿ ವ್ಯಕ್ತಪಡಿಸಿದ್ದಾರೆ.
'ನೋ' ಅನ್ನೋದು ತುಂಬಾ ಮುಖ್ಯ
ಸಿನಿಮಾ ಅವಕಾಶಗಳಿಗಾಗಿ ತಾವು ಎಂದಿಗೂ ತಮಗೆ ಇಷ್ಟವಿಲ್ಲದ ವಿಷಯಗಳಿಗೆ ಒಪ್ಪಿಗೆ ನೀಡುತ್ತಿರಲಿಲ್ಲ ಎಂದು ಕಾಜಲ್ ಸ್ಪಷ್ಟಪಡಿಸಿದ್ದಾರೆ. "ನನಗೆ ಕಂಫರ್ಟ್ ಅನಿಸದ ಜಾಗ ಅಥವಾ ಪರಿಸ್ಥಿತಿಯಿಂದ ಹೊರನಡೆಯುವ ಆತ್ಮವಿಶ್ವಾಸ ನನಗ ಮೊದಲಿನಿಂದಲೂ ಇತ್ತು. ಕೇವಲ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಎಲ್ಲದಕ್ಕೂ 'ಹೂಂ' ಅನ್ನಬೇಕಾಗಿಲ್ಲ. ಎಲ್ಲದಕ್ಕೂ ಒಪ್ಪುವುದಕ್ಕಿಂತ ನಮಗೆ ಬೇಡವಾದ ವಿಷಯಕ್ಕೆ ಇಲ್ಲ (NO) ಎಂದು ಹೇಳುವುದನ್ನು ಕಲಿಯುವುದು ವೃತ್ತಿಜೀವನದಲ್ಲಿ ಅತ್ಯಂತ ಮುಖ್ಯ. ಒಂದು ಪ್ರಾಜೆಕ್ಟ್ ನಮಗೆ ಒದಗಿ ಬಂದರೆ ಸಂತೋಷ, ಇಲ್ಲದಿದ್ದರೆ ಮುಂದಕ್ಕೆ ಸಾಗಲು ಸದಾ ಸಿದ್ಧರಿರಬೇಕು" ಎಂದು ಯುವ ನಟಿಯರಿಗೆ ಕಿವಿಮಾತು ಹೇಳಿದ್ದಾರೆ.
ಬಿಡುಗಡೆಗೆ ಸಜ್ಜಾದ ಕಾಜಲ್ ಹೊಸ ಸಿನಿಮಾ
ಇನ್ನು ಕಾಜಲ್ ಅಗರ್ವಾಲ್ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ, ಸದ್ಯ ಅವರು ತಮ್ಮ ಮುಂಬರುವ ಚಿತ್ರ 'ದಿ ಇಂಡಿಯಾ ಸ್ಟೋರಿ' (The India Story) ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಚೇತನ್ ಡಿಕೆ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೇಯಸ್ ತಲ್ಪಾಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ಮತ್ತು ಅದರಿಂದ ಸಮಾಜದ ಮೇಲಾಗುವ ಭೀಕರ ಪರಿಣಾಮಗಳ ಸುತ್ತ ಈ ಚಿತ್ರದ ಕಥೆ ಸಾಗಲಿದ್ದು, ನಾಯಕ-ನಾಯಕಿ ಇದರ ವಿರುದ್ಧ ಹೇಗೆ ಹೋರಾಡುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಚಿತ್ರವು ಜುಲೈ 24ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.













Click it and Unblock the Notifications