Bidadi Land Acquisition: ಬೆಂಗಳೂರಲ್ಲಿ ಈ ಕೆಲಸ ಮಾಡಿದರೆ ಬಿಡದಿ ಟೌನ್ಶಿಪ್ ನಿರ್ಮಾಣ ಮಾಡುವ ಅವಶ್ಯಕತೆಯೇ ಇಲ್ಲ!
Bidadi Land Acquisition: ಬೆಂಗಳೂರಿನಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಈ ಸಮಸ್ಯೆಗಳನ್ನು ಹೇಗೆ ತಪ್ಪಿಸಬಹುದು ಎಂದು ನಗರ ಯೋಜನಾ ತಜ್ಞರು ವಿವರವಾಗಿ ಹೇಳಿದ್ದಾರೆ. ನಗರದಲ್ಲಿ ಜಾಗವನ್ನು ಸರಿಯಾಗಿ ಯೋಜಿಸಿ ಬಳಸಿದರೆ, ಜನಸಂಖ್ಯೆ ಹೆಚ್ಚಿದ್ದರೂ ಜನರು ಆರಾಮವಾಗಿ ವಾಸಿಸಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ DH ವರದಿ ಮಾಡಿದೆ. ಹಲವು ವಿವಿಧ ನಗರಗಳಲ್ಲಿ ಜನಸಂಖ್ಯೆ ಹೆಚ್ಚು ಇದ್ದರೂ, ಉತ್ತಮ ರಸ್ತೆ, ಪಾರ್ಕಿಂಗ್, ಉದ್ಯಾನ ಮತ್ತು ಇತರೆ ಸೌಲಭ್ಯಗಳಿರುವುದರಿಂದ ಅಲ್ಲಿ ಜೀವನ ಸುಲಭ ವಾಗಿರುತ್ತದೆ.
ಇದರಿಂದ ನಗರವನ್ನು ವಿಸ್ತರಿಸದೆ, ಈಗಿರುವ ಜಾಗವನ್ನೇ ಉತ್ತಮವಾಗಿ ಅಭಿವೃದ್ಧಿಪಡಿಸಬಹುದು ಎನ್ನುವುದು ಸರಳವಾಗಿದೆ. ಸರ್ಕಾರಗಳು ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರವನ್ನು ಹೊರಭಾಗಕ್ಕೆ ವಿಸ್ತರಿಸುವುದಕ್ಕೆ ಮುಂದಾಗುತ್ತಿದೆ.ಆದರೆ ತಜ್ಞರ ಪ್ರಕಾರ, ಮೊದಲು ಈಗಿರುವ ನಗರದ ರಸ್ತೆ, ಚರಂಡಿ, ಪಾರ್ಕಿಂಗ್ ಮತ್ತು ಇತರೆ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಬೇಕು. ನಂತರ ಅಗತ್ಯವಿದ್ದರೆ ಮಾತ್ರ ನಗರವನ್ನು ವಿಸ್ತರಿಸಬೇಕು. ಈ ರೀತಿ ಮಾಡಿದರೆ ಬಿಡದಿಯಲ್ಲಿ ಬಿಡದಿ ಟೌನ್ಶಿಪ್ ನಿರ್ಮಾಣ ಮಾಡುವ ಅವಶ್ಯಕತೆಯೇ ಇರುವುದಿಲ್ಲ ಎಂದು ಹೇಳಲಾಗಿದೆ.

ಬಿಡದಿಯಲ್ಲಿ ಟೌನ್ಶಿಪ್ ನಿರ್ಮಾಣ ಮಾಡಬೇಕು. ಬಿಡದಿಯಲ್ಲಿ ಟೌನ್ಶಿಪ್ ನಿರ್ಮಾಣ ಮಾಡುವುದಕ್ಕೆ ಭೂಸ್ವಾಧೀನ ಮಾಡಿಕೊಳ್ಳುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ನಿಜಕ್ಕೂ ಭೂಸ್ವಾಧೀನ ಮಾಡುವ ಅಗತ್ಯವಿದೆಯೇ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಹೊಸ ಪ್ರದೇಶವನ್ನು ನಗರಕ್ಕೆ ಸೇರಿಸುವುದರಿಂದ ಅಲ್ಲಿನ ಭೂಮಿಯ ಮೌಲ್ಯ ಹೆಚ್ಚಾಗಿ, ಅದರ ಲಾಭ ಈಗಿರುವ ಭೂಮಾಲೀಕರಿಗೇ ಸಿಗಬೇಕು. ಹಾಗಿದ್ದಾಗ ಅವರ ಜಮೀನುಗಳನ್ನು ಏಕೆ ಸ್ವಾಧೀನಪಡಿಸಿಕೊಳ್ಳಬೇಕು, ಅವರನ್ನು ಏಕೆ ಸ್ಥಳಾಂತರಿಸಬೇಕು ಎಂಬ ಪ್ರಶ್ನೆಯನ್ನು ನಗರದ ಹೊರವಲಯದ ಅನೇಕ ಭೂಮಾಲೀಕರು ಎತ್ತುತ್ತಿದ್ದಾರೆ.
ಭವಿಷ್ಯದ ಅಭಿವೃದ್ಧಿಯಲ್ಲಿ ಈಗಿರುವ ಭೂಮಾಲೀಕರಿಗೂ ಪಾಲು ಸಿಕ್ಕರೆ, ಅವರು ಸರ್ಕಾರದೊಂದಿಗೆ ಸಹಕರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಂಡು ಅದರ ಲಾಭವನ್ನು ಬೇರೆ ಯಾರಿಗೋ ನೀಡಲಾಗುತ್ತಿದೆ ಎಂದು ಭಾವಿಸಿದರೆ, ಅವರು ಸಹಜವಾಗಿಯೇ ಇಂತಹ ಯೋಜನೆಗಳನ್ನು ವಿರೋಧಿಸುತ್ತಾರೆ. ಇದೇ ಕಾರಣಕ್ಕೆ ಹಲವು ಯೋಜನೆಗಳು ವಿಳಂಬವಾಗಿವೆ. ಉದಾಹರಣೆಗೆ, ಪೆರಿಫೆರಲ್ ರಿಂಗ್ ರಸ್ತೆ (Peripheral Ring Road) ಯೋಜನೆ ಘೋಷಣೆಯಾಗಿ 20 ವರ್ಷಕ್ಕೂ ಹೆಚ್ಚು ಕಾಲ ಕಳೆದರೂ, ಅದು ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ.
ಮುಂದುವರಿದು, ಭೂಮಾಲೀಕರಿಗೆ ತಮ್ಮ ಜಮೀನಿನಲ್ಲಿ ಅಭಿವೃದ್ಧಿ ಮಾಡುವ ಹಕ್ಕು ಕಡಿಮೆ ಇದೆ ಎಂದು ಸರ್ಕಾರ ಹೇಳುತ್ತದೆ. ಆದರೆ ಅದೇ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡ ನಂತರ ದೊಡ್ಡ ಕಟ್ಟಡಗಳು ಮತ್ತು ಹೆಚ್ಚಿನ ಅಭಿವೃದ್ಧಿಗೆ ಅನುಮತಿ ನೀಡುತ್ತದೆ. ಇದರಿಂದ ಈ ಯೋಜೆಗಳು ಜನರ ಅಭಿವೃದ್ಧಿಗಿಂತ ಅಧಿಕಾರಿಗಳು ಮತ್ತು ರಾಜಕಾರಣಿಗಳ ಅನುಕೂಲಕ್ಕೆ ಹೆಚ್ಚು ಕೆಲಸ ಮಾಡುತ್ತಿವೆ ಎಂಬ ಟೀಕೆ ಕೇಳಿಬರುತ್ತಿದೆ.
ಬೆಂಗಳೂರು ನಗರ ತಜ್ಞರ ಪ್ರಕಾರ, ಈಗಿರುವ ಭೂಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಅಭಿವೃದ್ಧಿ ಮಾಡುವುದು ಕಡಿಮೆ ವೆಚ್ಚದಲ್ಲಿ ಮತ್ತು ವೇಗವಾಗಿ ಸಾಧ್ಯ. ಆದರೆ ಅದಕ್ಕೆ ಅಧಿಕಾರಿಗಳು ಭೂಮಾಲೀಕ ರೊಂದಿಗೆ ಮಾತುಕತೆ ನಡೆಸಬೇಕು, ಅವರ ಅಭಿಪ್ರಾಯ ಕೇಳಬೇಕು, ಹಲವು ಆಯ್ಕೆಗಳನ್ನು ಪರಿಶೀಲಿಸಬೇಕು ಮತ್ತು ಎಲ್ಲರಿಗೂ ಒಪ್ಪುವಂತಹ ಯೋಜನೆಯನ್ನು ರೂಪಿಸಬೇಕು. ಈ ಪ್ರಕ್ರಿಯೆಗೆ ಹೆಚ್ಚು ಸಮಯ ಮತ್ತು ಶ್ರಮ ಬೇಕಾಗುವುದರಿಂದ, ಸರ್ಕಾರಗಳು ಸುಲಭದ ಮಾರ್ಗವಾಗಿ ಭೂಸ್ವಾಧೀನದತ್ತ ಹೆಚ್ಚು ಒಲವು ತೋರುತ್ತವೆ ಎಂದು ವಿಶ್ಲೇಷಿಸಲಾಗಿದೆ.













Click it and Unblock the Notifications