ಮೋದಿ ಗುರುವಾಯೂರಿಗೆ ಬಂದು ಹೋದ ಮೇಲೆ ಕೇರಳದಲ್ಲಿ ಪ್ರವಾಹ!
ತಿರುವನಂತಪುರಂ, ಆಗಸ್ಟ್ 30: ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದತಿ ವಿಚಾರದಲ್ಲಿ ವಿವಾದಕಾರಿ ಹೇಳಿಕೆಯನ್ನು ನೀಡಿ, ಭಾರೀ ಟೀಕೆಗೆ ಗುರಿಯಾಗಿದ್ದ ಸಂಸದ ರಾಹುಲ್ ಗಾಂಧಿ, ಕೇರಳದ ಪ್ರವಾಹದ ವಿಚಾರದಲ್ಲಿ ಮತ್ತೊಂದು ಬೇಕಾಬಿಟ್ಟಿ ಹೇಳಿಕೆಯನ್ನು ನೀಡಿದ್ದಾರೆ.
ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ, ಅಲ್ಲಿನ ಪ್ರವಾಹದ ಬಗ್ಗೆ ಟ್ವೀಟ್ ಮಾಡುತ್ತಾ, ಕೇರಳದಲ್ಲಿನ ಪ್ರವಾಹಕ್ಕೆ "ಮೋದಿ ಬಂದು ಹೋಗಿದ್ದೇ ಕಾರಣ" ಎಂದಿದ್ದಾರೆ.
" ಡಿಯರ್ ಮಿಸ್ಟರ್ ಮೋದಿ, ಗುರುವಾಯೂರು ದೇವಸ್ಥಾನಕ್ಕೆ ನೀವು ಬಂದು ಹೋದ ಮೇಲೆ ಕೇರಳ ಪ್ರವಾಹಕ್ಕೆ ತುತ್ತಾಯಿತು. ನೂರಾರು ಜನರು ಸಾವನ್ನಪ್ಪಿದ್ದರು ಮತ್ತು ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಯಿತು" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಮುಂದುವರಿಯುತ್ತಾ, " ಈ ಸಮಯದಲ್ಲಿ ನೀವು ಇಲ್ಲಿಗೆ ಭೇಟಿ ನೀಡಬೇಕು. ಪ್ರವಾಹ ಪೀಡಿತ ಇತರ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದಂತೆ, ಕೇರಳ ರಾಜ್ಯ ಕೂಡಾ ಕೇಂದ್ರ ಸರಕಾರದ ಪರಿಹಾರಕ್ಕೆ ಕಾಯುತ್ತಿದೆ. ಇದು ಅನ್ಯಾಯ" ಎಂದು ರಾಹುಲ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಎರಡನೇ ಅವಧಿಗೆ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ, ಪ್ರಧಾನಿ ನರೇಂದ್ರ ಮೋದಿ ಗುರುವಾಯೂರು ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದ ಭೇಟಿಯ ನಂತರ, " ವೈಯಕ್ತಿಕವಾಗಿ ಕೇರಳ ನನಗೆ ತುಂಬಾ ಸ್ಪೆಷಲ್. ಕೇರಳಕ್ಕೆ ಭೇಟಿ ನೀಡುವ ತುಂಬಾ ಅವಕಾಶವಿತ್ತು"

" ಜನರು ಮತ್ತೆ ದೊಡ್ಡ ಜವಾಬ್ದಾರಿಯೊಂದಿಗೆ ನನ್ನನ್ನು ಆಶೀರ್ವದಿಸಿದ ನಂತರ ನಾನು ಮಾಡಿದ ಮೊದಲ ಕೆಲಸವೆಂದರೆ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುವುದು " ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಪ್ರಧಾನಿಯವರ ಈ ಟ್ವೀಟಿಗೆ ರಾಹುಲ್ ಗಾಂಧಿ ಈ ಮೇಲಿನ ಪ್ರತಿಕ್ರಿಯೆಯನ್ನು ನೀಡಿದ್ದಾರೆ.












Click it and Unblock the Notifications