ಶಬರಿಮಲೆ ಗಲಾಟೆ ಅಜೆಂಡಾದ ಭಾಗ ಎಂದ ಬಿಜೆಪಿ: ವಿಡಿಯೋದಲ್ಲಿ ಬಹಿರಂಗ
ತಿರುವನಂತಪುರಂ, ನವೆಂಬರ್ 5: ಶಬರಿಮಲೆ ವಿವಾದ ಬೆನ್ನಲ್ಲೇ ನಡೆಯುತ್ತಿರುವ ಪ್ರತಿಭಟನೆಗಳು, ಗೊಂದಲಗಳು ಕೇರಳದ ಬಿಜೆಪಿಯ ಕೊರಳಿಗೆ ಸುತ್ತಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ಶಬರಿಮಲೆ ದೇವಸ್ಥಾನದ ಪ್ರತಿಭಟನೆಗಳಿಗೆ ತಾವು ಹೇಗೆ ಉತ್ತೇಜನ ನೀಡುತ್ತಿದ್ದೇವೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿಕೊಳ್ಳುತ್ತಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ.
ಅಲ್ಲದೆ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸದಂತೆ ತಡೆಯುವ ಸಲುವಾಗಿ ದೇವಸ್ಥಾನದ ಅರ್ಚಕರೊಬ್ಬರು ತಮ್ಮನ್ನು ಹೇಗೆ ಸಂಪರ್ಕಿಸಿದ್ದರು ಎಂದು ವಿವರಿಸುತ್ತಿರುವುದು ಸಹ ದಾಖಲಾಗಿದೆ.
ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಬಿಜೆಪಿಯ ಕೇರಳ ಘಟಕದ ಅಧ್ಯಕ್ಷ ಶ್ರೀಧರನ್ ಪಿಳ್ಳೈ, ಶಬರಿಮಲೆಯ ತಂತ್ರಿಗಳು ತಮಗೆ ಕರೆ ಮಾಡಿದ್ದು, ಮತ್ತು ಮಹಿಳೆಯರು ದೇವಸ್ಥಾನ ಪ್ರವೇಶಿಸಿದರೆ ಅದನ್ನು ಮುಚ್ಚುವುದರ ಬಗ್ಗೆ ಹಾಗೂ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿದರೆ ಯಾವ ಪರಿಣಾಮಗಳನ್ನು ಎದುರಿಸಬಹುದು ಎಂಬುದರ ಕುರಿತು ಆತಂಕ ವ್ಯಕ್ತಪಡಿದ್ದರು ಎಂದು ಪಕ್ಷದ ಕಾರ್ಯಕರ್ತರಿಗೆ ವಿವರಿಸಿದ್ದರು.

ಹತ್ತು ಸಾವಿರ ಜನರಿದ್ದಾರೆ
ಒಂದು ವೇಳೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದರೆ, ನೀವು ಒಂಟಿಯಲ್ಲ. ಹತ್ತು ಸಾವಿರ ಜನರು ನಿಮ್ಮೊಂದಿಗೆ ಇರುತ್ತಾರೆ ಎಂದು ಅರ್ಚಕರಿಗೆ ಪಿಳ್ಳೈ ಭರವಸೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
'ನೀವು ಒಂಟಿಯಲ್ಲ ಎಂದು ಹೇಳಿದೆ. ಇದು ನ್ಯಾಯಾಂಗ ನಿಂದನೆಯಾಗುವುದಿಲ್ಲ. ಒಂದು ವೇಳೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದರೂ ಅದು ನಮ್ಮ ವಿರುದ್ಧವೇ ಆಗುತ್ತದೆ. ನಿಮ್ಮೊಂದಿಗೆ ಹತ್ತು ಸಾವಿರ ಜನರು ಇರಲಿದ್ದಾರೆ ಎಂದೆ.
ನಿಮ್ಮನ್ನು ಒಂಟಿಯಾಗಿ ಬಿಡುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಅದೊಂದು ಮಾತು ತಮಗೆ ಸಾಕು ಎಂದು ಪ್ರತಿಕ್ರಿಯಿಸಿದರು. ಅಂದು ಅವರು ಕಠಿಣ ನಿರ್ಧಾರ ತೆಗೆದುಕೊಂಡರು. ಆ ನಿರ್ಧಾರದಿಂದ ರಾಜ್ಯ ಸರ್ಕಾರ ಮತ್ತು ಪೊಲೀಸರನ್ನು ಹಿಮ್ಮೆಟ್ಟಿಸಿತು ಎಂದು ಪಕ್ಷದ ಸದಸ್ಯರ ಬಳಿ ಅವರು ಹೇಳಿಕೊಂಡಿದ್ದಾರೆ.

ಇದೇ ನಮ್ಮ ತಂತ್ರ
ಸೋಮವಾರ ದೇವಸ್ಥಾನದ ಬಾಗಿಲು ತೆರೆಯಬೇಕಾಗಿರುವುದರಿಂದ ಇವತ್ತು ಕೂಡ ಅವರು ಏನಾದರೂ ಮಾಡುತ್ತಾರೆ ಎಂಬ ಆಶಯವಿದೆ.
ತಾವು ಮತ್ತು ಅರ್ಚಕ ಇಬ್ಬರೂ ನ್ಯಾಯಾಂಗ ನಿಂದನೆ ಅರ್ಜಿಯ ಭಾಗವಾಗುವುದು ವಿಧಿಬರಹ. ನಮ್ಮ ಮೇಲಿನ ನಂಬಿಕೆಯೇ ಅವರಿಗೆ ಧೈರ್ಯ ನೀಡುತ್ತಿದೆ. ಇದು ನಮ್ಮ ತಂತ್ರ. ಇದು ಹೇಗೆ ಬೆಳೆಯುತ್ತದೆ ಎಂಬುದನ್ನು ನೋಡಿ, ನಮ್ಮವರೆಲ್ಲರೂ ನಮ್ಮ ಪರವಾಗಿ ಬರುತ್ತಾರೆ ಎಂದು ಹೇಳಿದ್ದಾರೆ.
|
ಪಿಣರಾಯಿ ವಿಜಯನ್ ಆರೋಪ
ಈ ಹೇಳಿಕೆ ತೀವ್ರ ವಿವಾದ ಕೆರಳಿಸಿದೆ. ಶಬರಿಮಲೆಯಲ್ಲಿ ಗಲಭೆಗಳಿಗೆ ಬಿಜೆಪಿಯೇ ಕಾರಣ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಬಿಜೆಪಿಯ ಹೀನ ರಾಜಕೀಯ ಮತ್ತು ಕುತಂತ್ರದ ನಿಲುವುಗಳು ಬಹಿರಂಗವಾಗಿವೆ. ಶಬರಿಮಲೆಯಲ್ಲಿ ತೊಂದರೆಗಳನ್ನು ಸೃಷ್ಟಿಸಲು ರಾಜ್ಯದ ಬಿಜೆಪಿ ಮುಖಂಡರು ತಯಾರಿ ನಡೆಸುತ್ತಿರುವುದಕ್ಕೆ ಪುರಾವೆ ಸಿಕ್ಕಿದೆ. ಈ ಸಂಘರ್ಷದಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರೇ ಭಾಗಿಯಾಗಿರುವುದು ಕಾಣಿಸುತ್ತದೆ. ಇದು ಅತ್ಯಂತ ಖಂಡನಾರ್ಹ ಎಂದು ಅವರು ಟ್ವೀಟ್ ಮಾಡಿದ್ದಾರೆ.
| Array |
ಬಿಜೆಪಿ ಸಮರ್ಥನೆ
ಆದರೆ, ಬಿಜೆಪಿ ತಮ್ಮ ಅಧ್ಯಕ್ಷ ಪಿಳ್ಳಯ ಅವರನ್ನು ಸಮರ್ಥಿಸಿಕೊಂಡಿದೆ. ಪಿಳ್ಳೈ ಅವರು ಅರ್ಚಕರ ಕಾನೂನು ಸಲಹೆಗಾರರಾಗಿದ್ದಾರೆ. ಅವರಿಗೆ ಅವರ ಪಾತ್ರದ ಬಗ್ಗೆ ಸಲಹೆ ನೀಡಿದ್ದಾರೆ. ಇದರ ಹಿಂದೆ ಯಾವ ರಾಜಕೀಯ ಕಾರ್ಯಸೂಚಿಯೂ ಇಲ್ಲ. ಅವರಿಗೆ ಉತ್ತೇಜನ ನೀಡುವಂತೆ ಯುವ ಮೋರ್ಚಾದ ಕಾರ್ಯಕರ್ತರಿಗೆ ಅವರು ಹೇಳುತ್ತಿದ್ದರು ಎಂದು ಪಕ್ಷದ ಕೃಷ್ಣ ದಾಸ್ ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications