ಭಯೋತ್ಪಾದನೆಯ 2 ಪ್ರತ್ಯೇಕ ಕೇಸ್: ಜಮ್ಮು-ಕಾಶ್ಮೀರದ 14 ಕಡೆ ಎನ್ಐಎ ದಾಳಿ
ಶ್ರೀನಗರ, ಜುಲೈ 31: ಜಮ್ಮು ಮತ್ತು ಕಾಶ್ಮೀರದ ಒಟ್ಟು 14 ಕಡೆಗಳಲ್ಲಿ ಎರಡು ಪ್ರತ್ಯೇಕ ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್ಐಎ ಶನಿವಾರ ದಾಳಿ ನಡೆಸಿದೆ.
ಈ ಎರಡೂ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಪುಲ್ವಾಮಾ, ಶೋಪಿಯಾನ್, ಶ್ರೀನಗರ, ಅನಂತ್ ನಾಗ್, ಜಮ್ಮು ಮತ್ತು ಬನಿಹಾಲ್ ನಲ್ಲಿ ಇಂದು ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಗನ್ ಲೈಸನ್ಸ್ ಹಗರಣ: ಹಿರಿಯ ಐಎಎಸ್ ಅಧಿಕಾರಿಯ ಮನೆ ಸೇರಿ 22 ಸ್ಥಳಕ್ಕೆ ಸಿಬಿಐ ದಾಳಿ
ಬಂಧನಕ್ಕೊಳಗಾಗಿದ್ದ ಹಿದಾಯತುಲ್ಲಾ ಮಲ್ಲಿಕ್ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಚೇರಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವುದು ಸೇರಿದಂತೆ ಹಲವು ದಾಳಿಗಳ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಜಮ್ಮುವಿನ ಬಸ್ ನಿಲ್ದಾಣವೊಂದರಲ್ಲಿ ವಶಕ್ಕೆ ಪಡೆದಿದ್ದ 7 ಕೆಜಿ ಐಇಡಿ ಹಾಗೂ ಲಷ್ಕರ್-ಇ-ಮುಸ್ತಾಫಾ ಮುಖ್ಯಸ್ಥ ಹಿದಾಯತುಲ್ಲಾ ಮಲ್ಲಿಕ್ ಬಂಧನದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್ಐಎ ಇಂದು ಜಮ್ಮುವಿನ 14 ಪ್ರದೇಶಗಳಲ್ಲಿ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಐಇಡಿ ನಾಶ ಪಡಿಸಿದ ಬಾಂಬ್ ನಿಷ್ಕ್ರಿಯ ದಳ: ಈ ನಡುವೆ ರಜೌರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಧಾರಿತ ಸ್ಫೋಟಕ ವಸ್ತು ಕಂಡು ಬಂದಿದ್ದು, ಸ್ಥಳಕ್ಕೆ ದೌಡಾಯಿಸಿರುವ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಐಇಡಿಯನ್ನು ನಾಶಪಡಿಸಿದೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಉಗ್ರರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣಗಳಿಗೆ ಸಂಬಂಧಿಸಿ ಶ್ರೀನಗರ, ಅನಂತ್ನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಜುಲೈ 11ರಂದು ದಾಳಿ ನಡೆಸಿ, ಆರು ಜನರನ್ನು ಬಂಧಿಸಿತ್ತು.
ಜಮ್ಮು ಮತ್ತು ಕಾಶ್ಮೀರ ಸರ್ಕಾರ 11 ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿತ್ತು. ವಜಾಗೊಳಿಸಿದ ನೌಕರರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲ್ಲಾಹುದ್ದೀನ್ ಅವರ ಇಬ್ಬರು ಪುತ್ರರಾದ ಸೈಯದ್ ಅಹ್ಮದ್ ಶಕೀಲ್ ಮತ್ತು ಶಾಹಿದ್ ಯೂಸುಫ್ ಸೇರಿದ್ದಾರೆ.
ಎನ್ಐಎ ದಕ್ಷಿಣ ಕಾಶ್ಮೀರದ ಪುಶ್ರೂ, ಸನ್ಸೂಮಾ ಮತ್ತು ಅಚಬಲ್ ಗ್ರಾಮಗಳಲ್ಲಿ ದಾಳಿ ನಡೆಸಿ ಐದು ಜನರನ್ನು ಬಂಧಿಸಿದೆ. ಶ್ರೀನಗರದಲ್ಲಿ ಧಾರ್ಮಿಕ ಸಂಸ್ಥೆ ದಾರುಲ್ ಉಲೂಮ್ ಕಚೇರಿಯ ಮೇಲೆ ದಾಳಿ ನಡೆಸಿ ಸಂಸ್ಥೆಯ ಮುಖ್ಯಸ್ಥ ನೂರ್ ದಿನ್ ಭಟ್ ಅವರನ್ನು ಬಂಧಿಸಲಾಗಿದೆ.
ಜೊತೆಗೆ ಲ್ಯಾಪ್ಟಾಪ್, ಬ್ಯಾಂಕ್ ಸ್ಟೇಟ್ಮೆಂಟ್ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಸ್ಥೆಗೆ ಸೇರಿದ ದಲಾಲ್ ಮೊಹಲ್ಲಾ, ನವಾಬ್ ಬಜಾರ್ ಮತ್ತು ಓಲ್ಡ್ ಸಿಟಿಯಲ್ಲಿ ಇರುವ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಈ ಹಿಂದೆ, ಶೆರಿ ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಿರಿಯ ಪ್ರಯೋಗಾಲಯ ತಂತ್ರಜ್ಞ ಸೈಯದ್ ಶಕೀಲ್ ಅವರನ್ನು ಭಯೋತ್ಪಾದನೆಗೆ ಹಣಕಾಸು ನೆರವು ಆರೋಪದಲ್ಲಿ ಶ್ರೀನಗರದ ರಾಂಬಾಗ್ ಪ್ರದೇಶದ ನಿವಾಸದಿಂದ 2018 ರಲ್ಲಿ ಬಂಧಿಸಲಾಗಿತ್ತು.
ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಶಾಹಿದ್ ಯೂಸುಫ್ ಅವರನ್ನು 2017 ರಲ್ಲಿ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಿಂದ ವಜಾಗೊಳಿಸಿರುವ ಇಬ್ಬರು ಕಾನ್ಸ್ಟೆಬಲ್ಗಳು ಪೊಲೀಸ್ ಇಲಾಖೆಯೊಳಗಿನಿಂದ ಉಗ್ರಗಾಳಿಗೆ ಬೆಂಬಲಿಸುತ್ತಿದ್ದರು ಮತ್ತು ಬೆಂಬಲದ ಜೊತೆಗೆ ಉಗ್ರರಿಗೆ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಡ್ರೋನ್ ದಾಳಿಯೂ ನಡೆಯುತ್ತಿದೆ: ಪೈಪ್ಬಾಂಬ್, ಕುಕ್ಕರ್ ಬಾಂಬ್, ಸುಧಾರಿತ ಸ್ಪೋಟಕಗಳನ್ನು ಬಳಸಿ ಮಾಡುತ್ತಿದ್ದ ಉಗ್ರ ದಾಳಿಗಷ್ಟೇ ಸಾಕ್ಷಿಯಾಗಿದ್ದ ಭಾರತ ಇದೇ ಮೊಟ್ಟಮೊದಲ ಬಾರಿಗೆ ಡ್ರೋನ್ ಬಳಸಿ ನಡೆಸುವ ಉಗ್ರ ದಾಳಿಗೆ ಸಾಕ್ಷಿಯಾಗಿದೆ. ಇದು ದಶಕಗಳಿಂದ ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿದ್ದ ಉಗ್ರರು ಸಾಂಪ್ರದಾಯಿಕ ವಿಧಾನಗಳ ಬದಲಾಗಿ ಮತ್ತಷ್ಟುಆಧುನಿಕತೆಗೆ ಹೊರಳಿಸುವುದರ ಸ್ಪಷ್ಟಸುಳಿವನ್ನು ನೀಡಿದೆ.
ಮತ್ತೊಂದೆಡೆ ಶತ್ರು ದೇಶಗಳ ಕ್ಷಿಪಣಿ, ಬಾಂಬ್ ಮತ್ತಿತರೆ ದೊಡ್ಡ ಮಟ್ಟದ ದಾಳಿಗಳನ್ನು ಎದುರಿಸಲಷ್ಟೇ ಸಜ್ಜಾಗಿದ್ದ ಭಾರತಕ್ಕೆ ಇದು ಹೊಸ ಅಪಾಯ ಮತ್ತು ಆತಂಕ ಎರಡನ್ನೂ ತಂದೊಡ್ಡಿದೆ. ಭಾರತ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಇವು ಹೊಸ ಆತಂಕವನ್ನು ಹುಟ್ಟಹಾಕಿವೆ.
ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು 2018ರಿಂದಲೇ ಭಾರತದ ಗಡಿಯೊಳಗೆ ಮಾದಕ ವಸ್ತು, ಶಸ್ತಾ್ರಸ್ತ್ರ, ಮದ್ದುಗುಂಡು ಪೂರೈಕೆಗೆ ಡ್ರೋನ್ಗಳನ್ನು ಬಳಸಿಕೊಳ್ಳುತ್ತಿದ್ದವಾದರೂ, ದಾಳಿಗೆಂದು ಡ್ರೋನ್ ಬಳಸಿದ್ದು ಇದೇ ಮೊದಲು. ಹೀಗಾಗಿಯೇ ಭಾನುವಾರದ ದಾಳಿ ಭಾರೀ ಆತಂಕಕ್ಕೆ ಕಾರಣವಾಗಿದೆ.