Breaking; ಎಎಪಿ ಸೇರಿದ ಜಮ್ಮು & ಕಾಶ್ಮೀರದ ಮಾಜಿ ಸಚಿವ
ಶ್ರೀನಗರ, ಮೇ 07; ನವದೆಹಲಿ ಮತ್ತು ಪಂಜಾಬ್ನಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ವಿವಿಧ ರಾಜ್ಯಗಳಲ್ಲಿ ಬೆಂಬಲ ಸಿಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವರೊಬ್ಬರು ಎಎಪಿ ಸೇರಿದರು.
ಶನಿವಾರ ಜಮ್ಮು ಮತ್ತು ಕಾಶ್ಮೀರದ ಮಾಜಿ ಶಿಕ್ಷಣ ಸಚಿವ, ನ್ಯಾಷನಲ್ ಪ್ಯಾಂಥರ್ಸ್ ಪಕ್ಷದ ಅಧ್ಯಕ್ಷ ಹರ್ಷದೇವ್ ಸಿಂಗ್ ಆಮ್ ಆದ್ಮಿ ಪಕ್ಷವನ್ನು ಸೇರಿದರು. ಪಕ್ಷದ ನಾಯಕ ಸಂಜಯ್ ಸಿಂಗ್ ಎಎಪಿಗೆ ಬರಮಾಡಿಕೊಂಡರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕು ಎಂದು ಆಗ್ರಹಿಸುತ್ತಿರುವ ಪಕ್ಷಗಳಲ್ಲಿ ನ್ಯಾಷನಲ್ ಪ್ಯಾಂಥರ್ಸ್ ಸಹ ಒಂದಾಗಿದೆ. ಕಣಿವೆ ರಾಜ್ಯದಲ್ಲಿ ಚುನಾವಣೆ ನಡೆಸಲು ಸಿದ್ಧತೆಗಳು ಆರಂಭವಾಗಿವೆ. ಇಂತಹ ಸಂದರ್ಭದಲ್ಲಿಯೇ ಹರ್ಷದೇವ್ ಸಿಂಗ್ ಎಎಪಿಗೆ ಸೇರಿದ್ದಾರೆ.

ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಮಾತ್ರ ಜನರ ಸಮಸ್ಯೆ ಅರ್ಥವಾಗುತ್ತದೆ. ಹೊರಗಿನಿಂದ ನೇಮಕವಾದ ಅಧಿಕಾರಿಗಳಿಗೆ ಸಮಸ್ಯೆ ತಿಳಿಯುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಲೆಫ್ಟಿನೆಂಟ್ ಗೌರ್ನರ್ ಆಡಳಿತವನ್ನು ಹರ್ಷದೇವ್ ಸಿಂಗ್ ಟೀಕಿಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿನ ಈಗಿನ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಪ್ರತಿನಿಧಿ ಆಡಳಿತ ಕೊನೆಗೊಳಿಸಿ ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆ ಮಾಡಬೇಕು ಎಂದು ಹರ್ಷದೇವ್ ಸಿಂಗ್ ಒತ್ತಾಯಿಸುತ್ತಿದ್ದಾರೆ.
ಲೆಫ್ಟಿನೆಂಟ್ ಗೌರ್ನರ್, ಕಾರ್ಯದರ್ಶಿಗಳು ಜನರ ಜೊತೆ ಸಭೆಯನ್ನು ಮಾತ್ರ ನಡೆಸುತ್ತಾರೆ. ಆದರೆ ಜನರ ಸಮಸ್ಯೆ ಪರಿಹಾರ ಮಾಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಜನಪ್ರತಿನಿಧಿಗಳ ಅಗತ್ಯವಿದೆ ಎಂದು ಹರ್ಷದೇವ್ ಸಿಂಗ್ ಹೇಳಿದ್ದಾರೆ.












Click it and Unblock the Notifications