ಅಮರನಾಥ: ರಕ್ಷಣಾ ಕಾರ್ಯಕ್ಕೆ 8 ಹೆಲಿಕಾಪ್ಟರ್ ನಿಯೋಜಿಸಿದ ವಾಯಯಪಡೆ
ಶ್ರೀನಗರ, ಜುಲೈ 10: ಅಮರನಾಥ ಗುಹೆ ದೇಗುಲದ ಬಳಿ ಸಂಭವಿಸಿದ ಮೇಘಸ್ಫೋಟದ ನಂತರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ಭಾಗವಾಗಿ ಎಂಟು ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ ಶನಿವಾರ ತಿಳಿಸಿದೆ. ಭಕ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಭಾರತೀಯ ವಾಯುಪಡೆಯ ನಾಲ್ಕೆ ಎಂಐ-17ವಿ5 (Mi-17V5) ಮತ್ತು ನಾಲ್ಕು ಚೀಟಲ್ ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ.
ಅಮರನಾಥ ದೇಗುಲದ ಬಳಿ ಸಂಭವಿಸಿದ ಮೇಘ ಸ್ಫೋಟದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಡಿಜಿ ಅತುಲ್ ಕರ್ವಾಲ್ ಮಾಹಿತಿ ನೀಡಿದ್ದರು.
ಚೀಟಲ್ ಹೆಲಿಕಾಪ್ಟರ್ಗಳು 45 ಬಾರಿ ಹಾರಾಟ ನಡೆಸಿ ಐವರು ಎನ್ಡಿಆರ್ಎಫ್ ಮತ್ತು ಸೇನಾ ಸಿಬ್ಬಂದಿ ಮತ್ತು 3.5 ಟನ್ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಸಾಗಿಸಿವೆ. 45 ಯಾತ್ರಾರ್ಥಿಗಳನ್ನು ಅಮರನಾಥ ಗುಹೆಯಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಎಂಐ-17ವಿ5 ಹೆಲಿಕಾಪ್ಟರ್ಗಳು 20 ಬಾರಿ ಹಾರಾಟ ನಡೆಸಿ, 9.5 ಟನ್ಗಳ ಪರಿಹಾರ ಸಾಮಗ್ರಿಗಳನ್ನು ವಿತರಿಸಿದವು, ನಾಲ್ಕು ರಕ್ಷಣಾ ಸಿಬ್ಬಂದಿ ಸೇರಿ, 64 ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದವು. ಜೊತೆಯಲ್ಲಿ 7 ಮೃತದೇಹಗಳನ್ನು ಸಹ ಸಾಗಿಸಲಾಗಿದೆ.
ಇಂಫಾಲ್ನಿಂದ ಶ್ರೀನಗರಕ್ಕೆ ಹ್ಯಾಂಡ್ಹೆಲ್ಡ್ ರಾಡಾರ್ ಉಪಕರಣಗಳನ್ನು ಏರ್ಲಿಫ್ಟ್ ಮಾಡಲು ಐಎಎಫ್ನ ಆನ್-32 ಮತ್ತು ಡಾರ್ನಿಯರ್ ಸಾರಿಗೆ ವಿಮಾನವನ್ನು ಬಳಸಿಕೊಳ್ಳಲಾಗುತ್ತಿದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಲ್ಲಿನ ಎಲ್ಲಾ ಪ್ರಮುಖ ವಾಯುನೆಲೆಗಳಲ್ಲಿ ವಿಮಾನಗಳನ್ನು ಸ್ಟ್ಯಾಂಡ್ಬೈನಲ್ಲಿ ಇರಿಸಲಾಗಿದೆ.
ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ; ಮೇಘಸ್ಫೋಟದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರಿಕರು ಇನ್ನೂ ಬಾಲ್ಟಾಲ್ ಬೇಸ್ ಕ್ಯಾಂಪ್ನಲ್ಲಿ ಯಾತ್ರೆ ಪುನರಾರಂಭಿಸಲು ಕಾಯುತ್ತಿದ್ದಾರೆ. ಅಮರನಾಥಕ್ಕೆ ತೆರಳುವ ಮಾರ್ಗ ಹಾಳಾಗಿದ್ದು, ದುರಸ್ತಿ ಕಾರ್ಯ ಇನ್ನೂ ನಡೆಯುತ್ತಿರುವುದರಿಂದ ಯಾತ್ರೆ ಪುನರಾರಂಭಿಸಲು ಸ್ವಲ್ಪ ಸಮಯ ಹಿಡಿಯಲಿದೆ.

"ನಾವು ಶಿಬಿರದಲ್ಲಿ ಕಳೆದ ಎರಡು ದಿನಗಳಿಂದ ಇಲ್ಲಿ ಕಾಯುತ್ತಿದ್ದೇವೆ. ಮೇಘಸ್ಫೋಟದ ಕಾರಣ ಯಾತ್ರೆಯನ್ನು ನಿಲ್ಲಿಸಲಾಗಿದೆ. ಇದು ಅತ್ಯಂತ ದುರದೃಷ್ಟಕರ ಘಟನೆ ಆದರೆ ಯಾತ್ರೆ ಪುನರಾರಂಭವಾಗುತ್ತದೆ ಎಂದುಕೊಂಡಿದ್ದೇನೆ. ಯಾತ್ರೆ ಪುನರಾರಂಭವಾಗುವವರೆಗೆ ನಾವು ಇಲ್ಲಿ ಕಾಯುತ್ತೇವೆ. ಅಮರನಾಥನ ದರ್ಶನ ಪಡೆದ ನಂತರವೇ ಹಿಂತಿರುಗುತ್ತೇವೆ." ಎಂದು ಬೇಸ್ ಕ್ಯಾಂಪ್ನಲ್ಲಿರುವ ಯಾತ್ರಾರ್ಥಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್-ಗವರ್ನರ್ ಮನೋಜ್ ಸಿನ್ಹಾ ಅವರು ಅಮರನಾಥ ಗುಹೆಯಲ್ಲಿ ನಡೆಯುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲನೆಗಾಗಿ ಉನ್ನತ ಮಟ್ಟದ ಸಭೆ ನಡೆಸಿದರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಎರಡು ನಿಮಿಷ ಮೌನಾಚರಣೆ ನಡೆಸಿ, ಘಟನೆಯಲ್ಲಿ ಹುತಾತ್ಮರಾದ ಭಕ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಮರನಾಥ ಮೇಘ ಸ್ಫೋಟದ ಘಟನೆಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.











Click it and Unblock the Notifications