ಬೆಂಗಳೂರಲ್ಲಿ ಗೇಲ್ ಗ್ಯಾಸ್ ಯೋಜನೆಗೆ ವೇಗ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳಿದ್ದೇನು
ಬೆಂಗಳೂರಲ್ಲಿ ಗೇಲ್ ಗ್ಯಾಸ್ ಯೋಜನೆಗೆ ವೇಗ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಹತ್ವದ ಅಪ್ಡೇಟ್ಸ್ ನೀಡಲಾಗಿದೆ. ಇನ್ನು ಬಾಕಿ ಬಿಲ್ಲುಗಳ ಪಾವತಿ ಹಾಗೂ ಸ್ಥಿತಿಗತಿಗಳ ಕುರಿತು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ವತಿಯಿಂದ ಪಾವತಿಸಬೇಕಾದ ಬಾಕಿ ಬಿಲ್ಲುಗಳ ಪಾವತಿ ಹಾಗೂ ಅವುಗಳ ಸ್ಥಿತಿಗತಿಗಳನ್ನು ಪರಿಶೀಲಿಸಲು ಬುಧವಾರ ಮಾರ್ಚ್ 18ರಂದು ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ವಿವಿಧ ವಿಭಾಗಗಳ ಅಧಿಕಾರಿಗಳು ತಮ್ಮ ವಿಭಾಗಕ್ಕೆ ಸಂಬಂಧಿಸಿದ ಬಾಕಿ ಬಿಲ್ಲುಗಳ ವಿವರಗಳನ್ನು ಮಂಡಿಸಿದರು. ಬಾಕಿ ಇರುವ ಬಿಲ್ಲುಗಳನ್ನು ತ್ವರಿತವಾಗಿ ಪಾವತಿಸಲು ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಬಳ, ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ಗಳು ಹಾಗೂ ಇತರ ವಿವಿಧ ಹಂತಗಳ ಬಿಲ್ಲುಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಯಿತು. ಬಾಕಿ ಇರುವ ಬಿಲ್ಲುಗಳನ್ನು ಆದ್ಯತೆಯ ಆಧಾರದಲ್ಲಿ ಪಾವತಿಸಲು ಸೂಚಿಸಲಾಯಿತು. ಇನ್ನು ಬಿಲ್ಲುಗಳನ್ನು ವಿಳಂಬ ಮಾಡದೇ ನಿಗದಿತ ಸಮಯದಲ್ಲಿ ಪಾವತಿಸುವುದರಿಂದ ಗುತ್ತಿಗೆದಾರರು, ಏಜೆನ್ಸಿಗಳು, ಪೂರೈಕೆದಾರರು ಹಾಗೂ ಪಾಲಿಕೆಯ ನಡುವೆ ಉತ್ತಮ ಸಹಕಾರ ಮತ್ತು ನಂಬಿಕೆ ಮೂಡುತ್ತದೆ ಎಂದು ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.
ಗೇಲ್ ಗ್ಯಾಸ್ ಅರ್ಜಿಗಳ ಕುರಿತು ತ್ವರಿತ ಕ್ರಮಕ್ಕೆ ಸೂಚನೆ
ಇನ್ನು ರಸ್ತೆ ಅಗೆತ ಹಾಗೂ ಸಂಬಂಧಿತ ಕಾಮಗಾರಿಗಳ ಕುರಿತು ಗೇಲ್ ಗ್ಯಾಸ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಗೇಲ್ ಗ್ಯಾಸ್ ವತಿಯಿಂದ ಒಟ್ಟು 58 ಅರ್ಜಿಗಳು ಸಲ್ಲಿಸಲ್ಪಟ್ಟಿರುವುದು ಗಮನಕ್ಕೆ ಬಂದಿದ್ದು, ಅದರಲ್ಲಿ ಒಂದು ವರ್ಷದ ಒಳಗಿನ ಹಾಗೂ ಹೊಸದಾಗಿ ನಿರ್ಮಿತ ರಸ್ತೆಗಳನ್ನು ಪೂರ್ಣಗೊಳಿಸಿರುವ ದಿನಾಂಕವನ್ನು ನಮೂದಿಸಿ, ರಸ್ತೆ ಅಗೆತಕ್ಕೆ ಅನುಮತಿ ನೀಡುವುದು ಮತ್ತು ವೈಟ್ ಟಾಪಿಂಗ್ ರಸ್ತೆಗಳಿಗೆ ಅನುಮತಿ ನೀಡುವುದಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಈ ಸಭೆಯಲ್ಲಿ ಹೆಚ್ಚುವರಿ ಆಯುಕ್ತರು(ಅಭಿವೃದ್ಧಿ)ಲತಾ, ಜಂಟಿ ಆಯುಕ್ತರುಗಳಾದ ಮೊಹಮ್ಮದ್ ನಯೀಮ್ ಮೊಮಿನ್ ಮತ್ತು ಪಲ್ಲವಿ, ಮುಖ್ಯ ಎಂಜಿನಿಯರರಾದ ರಾಘವೇಂದ್ರ ಪ್ರಸಾದ್ ಮತ್ತು ಯಮುನಾ, ಹಣಕಾಸು ವಿಭಾಗದ ಉಪ ನಿಯಂತ್ರಕರು ಹಾಗೂ ಸಹಾಯಕ ನಿಯಂತ್ರಕರು, ನಗರ ಪಾಲಿಕೆಯ ಎಲ್ಲಾ ವಿಭಾಗಗಳ ಕಾರ್ಯಪಾಲಕ ಎಂಜಿನಿಯರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.
ಪ್ರತಿ ಬುಧವಾರ ಬಿಲ್ಲು ಪರಿಶೀಲನಾ ಸಭೆ
ಇನ್ನು ಬೆಂಗಳೂರು ಉತ್ತರ ನಗರ ಪಾಲಿಕೆಗೆ ಸಂಬಂಧಿಸಿದಂತೆ ಬಾಕಿ ಬಿಲ್ಲುಗಳ ಪಾವತಿ ಮತ್ತು ಸ್ಥಿತಿಗತಿಗಳ ಪರಿಶೀಲನೆಗಾಗಿ ಪ್ರತಿ ಬುಧವಾರ ಆಯುಕ್ತರ ಅಧ್ಯಕ್ಷತೆಯಲ್ಲಿ ನಿಯಮಿತ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಕೆರೆಗಳ ಸಮಗ್ರ ಅಭಿವೃದ್ಧಿ: ಮಹೇಶ್ವರ್ ರಾವ್
ಇನ್ನು ಬೆಂಗಳೂರಿನ ಹೆಬ್ಬಾಳ ಹಾಗೂ ನಾಗವಾರ ಕೆರೆಗಳ ಸಮಗ್ರ ಅಭಿವೃದ್ಧಿಯಿಂದ ಆ ಭಾಗದ ಹೊರ ವರ್ತುಲ ರಸ್ತೆಯಲ್ಲಿ ಉಂಟಾಗುತ್ತಿದ್ದ ಜಲಾವೃತ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಗವಾರ ಮತ್ತು ಹೆಬ್ಬಾಳ ಕೆರೆಗಳ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು, ಬುಧವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದ್ದು, ಮಳೆಗಾಲದ ವೇಳೆ ಹೊರ ವರ್ತುಲ ರಸ್ತೆಯಲ್ಲಿ ಜಲಾವೃತದಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಗವಾರ ಮತ್ತು ಹೆಬ್ಬಾಳ ಕೆರೆಗಳಲ್ಲಿ ತಲಾ 16 ಎಕರೆ ಪ್ರದೇಶದಲ್ಲಿ ವೆಟ್ಲ್ಯಾಂಡ್ಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದಾರೆ.
ಎರಡೂ ಕೆರೆಗಳಲ್ಲಿ ವಿನೂತನ ಮಾದರಿಯಲ್ಲಿ ವೆಟ್ಲ್ಯಾಂಡ್ಗಳನ್ನು ನಿರ್ಮಿಸಲಾಗುತ್ತಿದ್ದು, ಸುಮಾರು 1.5 ಮೀಟರ್ ಮಟ್ಟದವರೆಗೆ ನೀರು ಸಂಗ್ರಹವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಹೂಳು ಮತ್ತು ತ್ಯಾಜ್ಯ ವೆಟ್ಲ್ಯಾಂಡ್ ಪ್ರದೇಶದಲ್ಲೇ ಸಂಗ್ರಹವಾಗಲಿದೆ. ಅದನ್ನು ಕಾಲಕಾಲಕ್ಕೆ ತೆರವುಗೊಳಿಸುವ ಮೂಲಕ ಕೆರೆಯ ನೀರನ್ನು ಶುದ್ಧವಾಗಿರಿಸಲು ಸಾಧ್ಯವಾಗುತ್ತದೆ.
ಹೆಬ್ಬಾಳ ಕೆರೆಯಲ್ಲಿ ಇನ್ಲೆಟ್ ಹಾಗೂ ವೆಟ್ಲ್ಯಾಂಡ್ ನಿರ್ಮಾಣದಿಂದ ಭದ್ರಪ್ಪ ಬಡಾವಣೆ ಮತ್ತು ಹೊರ ವರ್ತುಲ ರಸ್ತೆ ಭಾಗಗಳಲ್ಲಿ ಉಂಟಾಗುತ್ತಿದ್ದ ಜಲಾವೃತ ಸಮಸ್ಯೆ ಬಹುತೇಕ ಕಡಿಮೆಯಾಗಲಿದೆ. ಅದೇ ರೀತಿ ನಾಗವಾರ ಕೆರೆಯಲ್ಲಿ ವೆಟ್ಲ್ಯಾಂಡ್ ನಿರ್ಮಾಣದಿಂದ ವೀರಣ್ಣಪಾಳ್ಯ ಜಂಕ್ಷನ್ ಹಾಗೂ ಹೊರ ವರ್ತುಲ ರಸ್ತೆ ಪ್ರದೇಶದ ಜಲಾವೃತ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.












Click it and Unblock the Notifications