Tea: ಟೀ ವಿಚಾರಕ್ಕೆ ಅತ್ತೆ - ಸೊಸೆ ಜಗಳ: ಸಣ್ಣ ಮಕ್ಕಳ ಮುಂದೆಯೇ ಸೊಸೆ ಕೊಂದ ಅತ್ತೆ
Tea: ಅತ್ತೆ - ಸೊಸೆಯಂದಿರುವ ನಡುವೆ ಸಣ್ಣ ಮುನಿಸು, ಜಗಳ ಎನ್ನುವುದು ಸಹಜವೇ. ಆದರೆ ಅದು ವಿಪರೀತವಾಗುವುದು ಕೊಲೆಯಲ್ಲಿ ಅಂತ್ಯವಾಗುವುದು ವಿರಳ. ಸೊಸೆ ಚಹಾ ಕೊಡುವುದು ತಡ ಮಾಡಿದ್ದಾಳೆ ಎಂದು ಅತ್ತೆಯೊಬ್ಬರು ಆಕೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ನೆರೆಯ ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಕ್ಷಣಿಕ ಕೋಪಕ್ಕೆ ಅತ್ತೆ ಮಾಡಿದ ಎಡವಟ್ಟಿನಿಂದ ಸೊಸೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಕೇರಳಂನ ಮಲಪ್ಪುರಂ ಜಿಲ್ಲೆಯಲ್ಲಿ ಚಹಾ ತಯಾರಿಸುವ ವಿಷಯದಲ್ಲಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಅತ್ತೆಯಿಂದ ಹಲ್ಲೆಗೆ ಒಳಗಾದ ಸೊಸೆ (28) ಸಾವನ್ನಪ್ಪಿದ್ದು, ಆಕೆಗೆ ಇಬ್ಬರು ಚಿಕ್ಕ ಹೆಣ್ಣುಮಕ್ಕಳಿದ್ದಾರೆ. ಇಲ್ಲಿನ ನೀಲಂಬೂರು ಬಳಿಯ ಕೂಟ್ಟಂಪಾರದಲ್ಲಿ ಘಟನೆ ಸಂಭವಿಸಿದೆ. ರಜಿಲಾ ಎನ್ನುವವರು ಮೃತ ದುರ್ದೈವಿ. ಸುನಿಲ್ ಬಾಬು ಎನ್ನುವವರ ಪತ್ನಿ ರಜಿಲಾ ಹಾಗೂ ಅವರ ಅತ್ತೆ ಶಾಂತಾ ಎನ್ನುವವರು ನಡುವೆ ಜಗಳ ನಡೆದಿತ್ತು. ಈ ಜಗಳವು ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಶಾಂತಾ ಅವರು ಮಾಡಿದ್ದ ಚಹಾವನ್ನು ರಜಿಲಾ ಎನ್ನುವವರು ಎಸೆದಿದ್ದರಿಂದ ಜಗಳ ಶುರುವಾಗಿದೆ. ವಾಗ್ವಾದ ಜೋರಾಗಿದ್ದು, ಸೊಸೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಶಾಂತಾ ಅವರು ತಮ್ಮ ಸೊಸೆಯನ್ನು ಕೊಲ್ಲಲು ಮಚ್ಚನ್ನು ಬಳಸಿದ್ದಾಳೆ ಎಂದು ಆರೋಪಿಸಲಾಗಿದೆ. ರಜಿಲಾ ಅವರಿಗೆ ಗಂಭೀರ ಗಾಯಗಳಾಗಿದ್ದರಿಂದ ಅವರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ರಜಿಲಾ ಎನ್ನುವವರಿಗೆ 10 ಮತ್ತು ನಾಲ್ಕು ವರ್ಷ ವಯಸ್ಸಿನ ಇಬ್ಬರು ಸಣ್ಣ ಹೆಣ್ಣುಮಕ್ಕಳಿದ್ದಾರೆ. ಮಕ್ಕಳು ಸಹ ಗಲಾಟೆಯನ್ನು ಬಿಡಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ಹಲ್ಲೆ ತಡೆಯಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಘಟನೆ ನಡೆದಾಗ ಆಟೋರಿಕ್ಷಾ ಚಾಲಕ ಸುನಿಲ್ ಬಾಬು ಅವರು ಕೆಲಸಕ್ಕೆ ಹೋಗಿದ್ದರು ಎಂದು ಹೇಳಲಾಗಿದೆ.
Tea: ಮಕ್ಕಳ ಕಿರುಚಾಟದಿಂದ ಓಡಿ ಬಂದ ಜನ
ಮನೆಯಲ್ಲಿ ಅಮ್ಮ ಮತ್ತು ಅಜ್ಜಿ ಜೋರು ಜೋರಾಗಿ ಜಗಳವಾಡಿದ್ದು, ಇದನ್ನು ನೋಡಿದ ಮಕ್ಕಳು ಜೋರಾಗಿ ಅತ್ತಿದ್ದಾರೆ. ಅಲ್ಲದೆ ಕಿರುಚಾಡಿದ್ದು, ಇದರಿಂದ ನೆರೆ ಹೊರೆಯ ಮನೆಯಲ್ಲಿ ಇರುವವರು ಓಡಿ ಬಂದಿದ್ದಾರೆ. ಮಲಗುವ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಜಿಲಾಳನ್ನು ಮತ್ತು ಮಕ್ಕಳು ಹತ್ತಿರದಲ್ಲಿ ಅಳುತ್ತಿರುವುದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಸಮಯದಲ್ಲಿ ಶಾಂತಾ ತನ್ನ ಕೈಗಳಿಂದ ರಕ್ತ ತೊಳೆಯುತ್ತಿದ್ದರು. ಏನಾಯಿತು ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯರು ಕೂಡಲೇ ರಜಿಲಾಳನ್ನು ನಿಲಂಬೂರ್ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಗಂಭೀರವಾಗಿ ಗಾಯಗೊಂಡಿದ್ದು, ಭಾರೀ ರಕ್ತಸ್ರಾವ ಸಂಭವಿಸಿದ್ದರಿಂದ ಆಸ್ಪತ್ರೆ ತಲುಪುವ ಮೊದಲೇ ಅವರು ಸಾವನ್ನಪ್ಪಿದ್ದಾರೆ. ನಂತರ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಜೇರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಸಂಜೆಯ ವೇಳೆಗೆ ಕೊಯಿಲಮುಂಡದಲ್ಲಿರುವ ಸಂಬಂಧಿಕರ ಮನೆಗೆ ತರಲಾಗಿದೆ.












Click it and Unblock the Notifications