ಹೈದರ್ಪೋರಾ ಎನ್ಕೌಂಟರ್: ಮೃತ ದೇಹ ನೀಡುವಂತೆ ಮಾಜಿ ಸಿಎಂ ಧರಣಿ
ಶ್ರೀನಗರ ನವೆಂಬರ್ 18: ಕಾಶ್ಮೀರದ ಹೈದರ್ಪೋರಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರಿಸುವಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ. ಮೂರು ದಿನ ಕಳೆದರೂ ಮೃತದೇಹಗಳನ್ನು ಅಂತಿಮ ಸಂಸ್ಕಾರಕ್ಕೆ ನೀಡದಿದ್ದಕ್ಕೆ ಆಕ್ರೋಶಗೊಂಡ ಅಬ್ದುಲ್ಲಾ ಶ್ರೀನಗರದಲ್ಲಿ ಧರಣಿ ಕುಳಿತಿದ್ದಾರೆ. ಎನ್ಕೌಂಟರ್ನ ಸತ್ಯಾಸತ್ಯತೆಗಾಗಿ ಸರ್ಕಾರವು ನಡೆಸುತ್ತಿರುವ ತನಿಖೆಯನ್ನು ಮುಂದುವರೆಸಲಿ. ಆದರೆ ಕನಿಷ್ಠ ಪಕ್ಷ ಮೃತ ದೇಹವನ್ನಾದರೂ ಸಂಬಂಧಿಕರಿಗೆ ನೀಡಿ ಅಂತ್ಯಸಂಸ್ಕಾರ ಮಾಡುವಂತಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
''ಇಂದು ನನ್ನ ಕೋಪ ಮತ್ತು ಅಸಹಾಯಕತೆಯನ್ನು ವ್ಯಕ್ತಪಡಿಸಲು ನಾನು ಪ್ರತಿಭಟನೆ ನಡೆಸುತ್ತಿದ್ದೇನೆ. ಹೈದರ್ಪೋರಾ ಎನ್ಕೌಂಟರ್ನಲ್ಲಿ ಸತ್ತವರ ಶವಗಳನ್ನು ಕುಟುಂಬಗಳಿಗೆ ಹಿಂತಿರುಗಿಸುತ್ತಿಲ್ಲ, ಪ್ರತಿಭಟನೆ ಮಾಡಲು ಸಹ ಅವರಿಗೆ ಅವಕಾಶವಿಲ್ಲ,'' ಎಂದು ಅಬ್ದುಲ್ಲಾ ಅವರು ಹೇಳಿದ್ದಾರೆ.
ಶ್ರೀನಗರ ಎನ್ಕೌಂಟರ್ನಲ್ಲಿ ಹತ್ಯೆಯಾದವನು ನನ್ನ ಮಗ ಭಯೋತ್ಪಾದಕನಲ್ಲ: ಉಗ್ರರ ವಿರೋಧಿ ಹೋರಾಟಗಾರ
ಇಂದು ಕುಟುಂಬ ಸದಸ್ಯರಿಗೆ ಎಸ್ಪಿ ಮತ್ತು ನಿಯಂತ್ರಣ ಕೊಠಡಿಯಿಂದ ಕರೆ ಬಂದಿದೆ. ಕುಟುಂಬಸ್ಥರು ಶವವನ್ನು ತೆಗೆದುಕೊಳ್ಳುವ ನಿರೀಕ್ಷೆಯಲ್ಲಿದ್ದರು. ಆದರೆ 2-3 ದಿನಗಳ ನಂತರ ಅವರನ್ನು ಹಿಂತಿರುಗಿ ಬರುವಂತೆ ಕೇಳಿ ಕಳುಹಿಸಲಾಗಿದೆ. ನಾನು ಯಾವುದೇ ತನಿಖೆ ಮತ್ತು ಶಿಕ್ಷೆಯ ಬಗ್ಗೆ ಮಾತನಾಡುವುದಿಲ್ಲ. ಕನಿಷ್ಠ ನಾಗರಿಕರ ಮೃತ ದೇಹವನ್ನಾದರೂ ಅವರ ಕುಟುಂಬಗಳಿಗೆ ಹಸ್ತಾಂತರಿಸಬೇಕು. ಇದರಿಂದ ಕುಟುಂಬಸ್ಥರು ಮೃತರನ್ನು ಗೌರವದಿಂದ ಅಂತಿಮ ಸಂಸ್ಕಾರವನ್ನು ಮಾಡಬಹುದು ಎಂದು ಅಬ್ದುಲ್ಲಾ ಹೇಳಿದರು.
ಕಾಶ್ಮೀರದ ಹೈದರ್ಪೋರಾದಲ್ಲಿ ನವೆಂಬರ್ 15 ರಂದು ನಡೆದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ನಾಲ್ವರಲ್ಲಿ ಅಲ್ತಾಫ್ ಭಟ್ ಮತ್ತು ಮುದಾಸಿರ್ ಗುಲ್ ಎಂಬ ಇಬ್ಬರು ಸೇರಿದ್ದಾರೆ. ಅಲ್ತಾಫ್ ಮತ್ತು ಮುದಾಸಿರ್ ಭಯೋತ್ಪಾದಕರ ಸಹಾಯಕರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸಂಬಂಧಿಕರು ಮತ್ತು ಸುತ್ತಮುತ್ತಲಿನ ಜನರು ಅವರು ಸಾಮಾನ್ಯ ನಾಗರಿಕರೆಂದು ಹೇಳಿಕೊಳ್ಳುತ್ತಾರೆ. ಜೊತೆಗೆ ಕೊಲ್ಲಲ್ಪಟ್ಟ ಪುರುಷರ ಸಂಬಂಧಿಕರು ಅವರನ್ನು ಉದ್ದೇಶಪೂರ್ವಕವಾಗಿ ಕೊಲ್ಲಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ಇನ್ನೂ ಮೃತದೇಹಗಳನ್ನು ಸಂಬಂಧಿಕರಿಗೆ ನೀಡಿಲ್ಲ, ಮೃತದೇಹಗಳ ಬೇಡಿಕೆಗಾಗಿ ಸಂಬಂಧಿಕರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸೂಕ್ತ ತನಿಖೆಗೆ ಒತ್ತಾಯ
ಜಮ್ಮು ಮತ್ತು ಕಾಶ್ಮೀರದ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಮೊಹಮ್ಮದ್ ಯೂಸುಫ್ ತರಿಗಾಮಿ ಮುಂತಾದ ನಾಯಕರು ಈ ವಿಷಯದಲ್ಲಿ ನ್ಯಾಯಯುತ ತನಿಖೆಗೆ ಒತ್ತಾಯಿಸಿದ್ದಾರೆ. ಇದರ ನಂತರ ಗುರುವಾರವೇ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹೈದರ್ಪೋರಾ ಎನ್ಕೌಂಟರ್ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಎಡಿಎಂ ಶ್ರೇಣಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿದ್ದಾರೆ.
ಮೃತರಲ್ಲಿ ಓರ್ವ ಉಗ್ರರ ವಿರೋಧಿ ಹೋರಾಟಗಾರನ ಮಗ
Recommended Video
ಶ್ರೀನಗರದಲ್ಲಿ ನಡೆದ ವಿವಾದಾತ್ಮಕ ಎನ್ಕೌಂಟರ್ನಲ್ಲಿ ಪೊಲೀಸರಿಂದ ಹತ್ಯೆಗೀಡಾದ ಮತ್ತು ಭಯೋತ್ಪಾದಕರು ಎಂದು ಹೆಸರಿಸಲ್ಪಟ್ಟ ನಾಲ್ವರಲ್ಲಿ ಒಬ್ಬ ತನ್ನ ಮಗ ಎಂದು ಭಯೋತ್ಪಾದನಾ ವಿರೋಧಿ ಹೋರಾಟಗಾರ ಅಬ್ದುಲ್ ಲತೀಫ್ ಮ್ಯಾಗ್ರೆ ಹೇಳಿದ್ದಾರೆ. 2005ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಭಯೋತ್ಪಾದಕನನ್ನು ಕಲ್ಲಿನಿಂದ ಹೊಡೆದು ಕೊಂದು ಹೆಸರಾಗಿದ್ದ ಅಬ್ದುಲ್ ಲತೀಫ್ ಮ್ಯಾಗ್ರೆ (Abdul Latief Magray) ಈ ಹೇಳಿಕೆಯನ್ನು ನೀಡಿದ್ದಾರೆ. 2005 ರಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸಿದ ಅಬ್ದುಲ್ ಲತೀಫ್ ಮ್ಯಾಗ್ರೆ ಸೈನ್ಯದಿಂದ ಮೆಚ್ಚುಗೆ ಪತ್ರವನ್ನು ಪಡೆದಿದ್ದಾರೆ. ಸೋಮವಾರ ತಡರಾತ್ರಿ ಶ್ರೀನಗರದ ವಾಣಿಜ್ಯ ಸಂಕೀರ್ಣದೊಳಗೆ ನಡೆದ ಎನ್ಕೌಂಟರ್ನಲ್ಲಿ ಅಬ್ದುಲ್ ಲತೀಫ್ ಮ್ಯಾಗ್ರೆ ಅವರ ಪುತ್ರ 24 ವರ್ಷದ ಅಮೀರ್ ಮ್ಯಾಗ್ರೆ ಭಯೋತ್ಪಾದಕ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಅಮೀರ್ ಮ್ಯಾಗ್ರೆ ಭಯೋತ್ಪಾದಕನಲ್ಲ, ಆತನನ್ನು ಭಯೋತ್ಪಾದಕನೆಂದು ಪೊಲೀಸರು ಸುಳ್ಳು ಹೇಳುತ್ತಿದ್ದಾರೆಂದು ಅಬ್ದುಲ್ ಲತೀಫ್ ಮ್ಯಾಗ್ರೆ ಆರೋಪಿಸಿದ್ದಾರೆ. ಜೊತೆಗೆ ಮಗನ ಮೃತ ದೇಹ ನೀಡುವಂತೆ ಒತ್ತಾಯಿಸಿದ್ದಾರೆ.