ಪ್ರತ್ಯೇಕತಾವಾದಿಗಳಿಗೆ ಹಣಕಾಸಿನ ನೆರವು; ಕಾಶ್ಮೀರಿ ಉದ್ಯಮಿಯಿಂದ 6 ಕೋಟಿ ಆಸ್ತಿ ವಶ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಏಪ್ರಿಲ್ 16: ಜಾರಿ ನಿರ್ದೇಶನಾಲಯವು ಕಾಶ್ಮೀರಿ ಉದ್ಯಮಿ ಝಹೂರ್ ಅಹ್ಮದ್ ಷಾ ವತಾಲಿಯ ಆರು ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ. ಲಷ್ಕರ್-ಇ-ತೈಬಾ ಉಗ್ರ ಸಂಘಟನೆ ಹಾಗೂ ಜಮಾತ್-ಉದ್-ದವಾದ ಸ್ಥಾಪಕ ಹಫೀಜ್ ಸಯೀದ್ ಗೆ ಹಣಕಾಸು ನೆರವು ನೀಡಿದ ಕುರಿತಾಗಿ ತನಿಖೆಗೆ ಸಂಬಂಧಿಸಿದಂತೆ ಈ ಕ್ರಮ ತೆಗೆದುಕೊಂಡಿದೆ.
ಹುರಿಯತ್ ನಾಯಕರಿಗೆ ಹಣಕಾಸು ಸರಬರಾಜು ಮಾಡಲು ಸಂಗ್ರಹಿಸಿದ್ದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಒದಗಿಸಿದ ಹಿನ್ನೆಲೆಯಲ್ಲಿ ಆರು ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲು ಆದೇಶ ಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ತನಿಖೆ ವೇಳೆ ಗೊತ್ತಾಗಿರುವುದು ಏನೆಂದರೆ, ಪಾಕಿಸ್ತಾನ ಹೈಕಮಿಷನ್ ನಿಂದ ಕೂಡ ನೇರವಾಗಿ ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಹಣಕಾಸಿನ ನೆರವು ಬಂದಿದೆ.
ವತಾಲಿಯ ಕ್ಯಾಷಿಯರ್ ಗುಲಾಮ್ ಮೊಹಮದ್ ಮನೆಯಲ್ಲಿ ಶೋಧ ನಡೆಸುವ ವೇಳೆ ವಶಪಡಿಕೊಂಡ ದಾಖಲೆಯ ಪ್ರಕಾರ, ಆ ಉದ್ಯಮಿಯು ಹಫೀಜ್ ಸಯೀದ್ ನಿಂದ, ಐಎಸ್ ಐನಿಂದ, ಪಾಕಿಸ್ತಾನ ಹೈಕಮಿಷನ್ ನಿಂದ ನವದೆಹಲಿಯಲ್ಲಿ ಹಾಗೂ ದುಬೈ ಮೂಲದಿಂದ ಹಣ ಪಡೆದಿರುವುದು ಸ್ಪಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆ ಹಣವನ್ನು ಝಹೂರ್ ಷಾ ವತಾಲಿಯು ಹುರಿಯತ್ ನಾಯಕರಿಗೆ, ಪ್ರತ್ಯೇಕತಾವಾದಿಗಳಿಗೆ ಹಾಗೂ ಕಾಶ್ಮೀರ ಕಣಿವೆಯಲ್ಲಿ ಕಲ್ಲೆಸೆಯುವವರಿಗೆ ವರ್ಗಾವಣೆ ಮಾಡುತ್ತಿದ್ದ ಎಂದು ದಾಖಲೆಯಲ್ಲಿ ಇದ್ದು, ಅದಕ್ಕೆ ವತಾಲಿ ಸಹಿ ಮಾಡಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಆರೋಪ ಪಟ್ಟಿ ಸಲ್ಲಿಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ.
ವತಾಲಿ, ಹಫೀಜ್ ಸಯೀದ್ ಸೇರಿ ಇತರರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಉಗ್ರಗಾಮಿಗಳಿಗೆ ಹಣಕಾಸು ನೆರವು ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವತಾಲಿ ಸೇರಿ ಒಂಬತ್ತು ಮಂದಿ ಆರೋಪಿಗಳು ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.












Click it and Unblock the Notifications