ಕಾಶ್ಮೀರದ ಮುಖಂಡರಿಗೆ ಮತ್ತೆ ಸಂಕಷ್ಟ: ಒಮರ್ ಅಬ್ದುಲ್ಲಾ, ಮುಫ್ತಿ ಮೇಲೆ ಪಿಎಸ್ಎ ಕಾಯ್ದೆ ಹೇರಿಕೆ
ಶ್ರೀನಗರ, ಫೆಬ್ರವರಿ 6: ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಮೇಲೆ ಕೇಂದ್ರ ಗೃಹ ಸಚಿವಾಲಯ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು (ಪಿಎಸ್ಎ) ಹೇರಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿರುವ 370ನೇ ವಿಧಿ ರದ್ದುಗೊಳಿಸಿದ ಸಂದರ್ಭದಿಂದಲೂ ಕಳೆದ ಆರು ತಿಂಗಳಿಂದ ಇಬ್ಬರನ್ನೂ ಬಂಧನದಲ್ಲಿ ಇರಿಸಲಾಗಿದೆ. ಅವರ ಬಂಧನದ ಕಡೆಯ ದಿನ ಅಂತ್ಯಗೊಳ್ಳುವ ಕೆಲವೇ ಗಂಟೆಗಳ ಮುನ್ನ ಗುರುವಾರ ರಾತ್ರಿ ಪಿಎಸ್ಎ ಜಾರಿ ಮಾಡಲಾಗಿದೆ.
ನ್ಯಾಷನಲ್ ಕಾನ್ಫರೆನ್ಸ್ ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಗರ್, ಮಾಜಿ ಶಾಸಕ ಬಶೀರ್ ವೀರಿ ಮತ್ತು ಪಿಡಿಪಿ ಮುಖಂಡ ಸರ್ತಾಜ್ ಮದ್ನಿ (ಮೆಹಬೂಬಾ ಮುಫ್ತಿ ಅವರ ಸೋದರ ಮಾವ) ಅವರನ್ನು ಶ್ರೀನಗರದಲ್ಲಿನ ಎಂಎಲ್ಎ ಹಾಸ್ಟೆಲ್ನಿಂದ ಗುರುವಾರ ಬಿಡುಗಡೆ ಮಾಡಲಾಗಿತ್ತು. ಅದಾಗಿ ಕೆಲವೇ ಗಂಟೆಗಳಲ್ಲಿ ಅವರ ಮೇಲೆಯೂ ಪಿಎಸ್ಎ ಹೇರಲಾಗಿದೆ.

ಕೇಂದ್ರ ಸರ್ಕಾರವು ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ 370ನೇ ವಿಧಿಯನ್ನು ರದ್ದುಗೊಳಿಸಿದ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ನಿರ್ಧಾರ ತೆಗೆದುಕೊಂಡಾಗಲೇ ಒಮರ್ ಅಬ್ದುಲ್ಲಾ (49) ಮತ್ತು ಮೆಹಬೂಬಾ ಮುಫ್ತಿ (60) ಅವರನ್ನು ಬಂಧಿಸಿತ್ತು.
ನಾವು ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ಬಾಂಡ್ಗೆ ಸಹಿಮಾಡಿಕೊಟ್ಟ ಬಳಿಕ ಅನೇಕ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗಿತ್ತು. ಹತ್ತಕ್ಕೂ ಹೆಚ್ಚು ಮುಖಂಡರು ಇನ್ನೂ ಬಂಧನದಲ್ಲಿದ್ದಾರೆ.
ಒಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು 370ನೇ ವಿಧಿ ರದ್ದತಿಗೂ ಮುನ್ನ ಪ್ರಚೋದನಾಕಾರಿ ಮಾತುಗಳನ್ನಾಡಿದ್ದರು ಎಂದು ಪ್ರಧಾನಿ ಮೋದಿ ಅವರು, ಗುರುವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಈ ಮೂವರ ಮೇಲೀ ಪಿಎಸ್ಎ ಕಾಯ್ದೆ ಜಾರಿ ಮಾಡಲಾಗಿದೆ.
ಪಿಎಸ್ಎ ಕಾಯ್ದೆ ಪ್ರಕಾರ, ಇದರ ಅಡಿ ಬಂಧಿಸಲಾದ ವ್ಯಕ್ತಿಗಳನ್ನು ಯಾವುದೇ ವಿಚಾರಣೆ ಇಲ್ಲದೆ, ಕನಿಷ್ಠ ಆರು ತಿಂಗಳಿನಿಂದ ಗರಿಷ್ಠ ಎರಡು ವರ್ಷದವರೆಗೂ ಬಂಧಿಸಿಡಲು ಅವಕಾಶವಿದೆ.












Click it and Unblock the Notifications