ಮುಸ್ಲಿಂ ಸಮುದಾಯವಲ್ಲ, ಭಾರತವನ್ನು ಪ್ರತಿನಿಧಿಸುತ್ತೇನೆ: ಬಾಕ್ಸರ್ ನಿಖತ್ ಜರೀನ್
ಹೈದರಾಬಾದ್, ಜೂನ್ 14: ಮೇರಿ ಕೋಮ್ ನಂತರ ಭಾರತದ ಮಹಿಳಾ ಬಾಕ್ಸಿಂಗ್ ದಂತಕಥೆಯಾಗುವ ಎಲ್ಲಾ ಲಕ್ಷಣಗಳನ್ನು ತೋರುತ್ತಿರುವ ನಿಖತ್ ಜರೀನ್ ಇದೀಗ ತಮ್ಮ ಅಪ್ಪಟ ದೇಶಪ್ರೇಮದಿಂದ ಜನರ ಹೃದಯ ಗೆದ್ದಿದ್ದಾರೆ. ದೇಶದಲ್ಲಿ ಹೊಗೆಯಾಡುತ್ತಿರುವ ಹಿಂದೂ ಮುಸ್ಲಿಮ್ ದ್ವೇಷ ಭಾವನೆಯ ವಿಚಾರಕ್ಕೆ ಈ ಮಹಿಳಾ ಬಾಕ್ಸರ್ ತೃಣಮಾತ್ರವೂ ಬೆಲೆ ನೀಡಿಲ್ಲ. ತನಗೆ ಸಮುದಾಯವನ್ನು ಪ್ರತಿನಿಧಿಸುವುದಕ್ಕಿಂತ ಭಾರತ ದೇಶವನ್ನು ಪ್ರತಿನಿಧಿಸುವುದೇ ಹೆಚ್ಚು ಖುಷಿ ಎಂದು ನಿಖತ್ ಹೇಳಿಕೊಂಡಿದ್ದಾರೆ.
ತೆಲಂಗಾಣ ರಾಜ್ಯದ ನಿಖತ್ ಜರೀನ್, ಟರ್ಕಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಫ್ಲೈವೈಟ್ ಕೆಟಗರಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಬಾಕ್ಸಿಂಗ್ ವಿಶ್ವಚಾಂಪಿಯನ್ ಆದ ಐದನೇ ಭಾರತೀಯ ಮಹಿಳೆ ಅವರಾಗಿದ್ದಾರೆ. ಮುಂದಿನ ತಿಂಗಳು ಜುಲೈ 28ರಂದು ಇಂಗ್ಲೆಂಡ್ನ ಬರ್ಮಿಂಗ್ಹ್ಯಾಂನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. 25 ವರ್ಷದ ನಿಖತ್ಗೆ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಹಂಬಲವೇ ಹೆಚ್ಚಾಗಿದೆ. ಹಾಗೆಯೇ, ಭಾರತೀಯ ಬಾಕ್ಸರ್ಗಳಿಗೆ ಮಾನಸಿಕ ಒತ್ತಡ ಎದುರಿಸುವ ಬಗೆ ಹೇಗೆಂದು ತರಬೇತಿ ಕೊಡುವ ಅಗತ್ಯತೆಯನ್ನು ಅವರು ಪ್ರಸ್ತಾಪಿಸಿದ್ದಾರೆ.
ಕೋಚ್ ಮೇಲೆ ಕಿರುಕುಳ ಆರೋಪ ಹೊರೆಸಿದ ಮಹಿಳಾ Sailor
ಒತ್ತಡ ನಿಭಾಯಿಸುವ ತಂತ್ರ
"ನಮ್ಮ ಭಾರತೀಯ ಬಾಕ್ಸರ್ಗಳು ಪ್ರತಿಭೆಯಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ. ನಮಗೆ ಶಕ್ತಿ, ವೇಗ ಮತ್ತು ಸಾಮರ್ಥ್ಯ ಎಲ್ಲಾ ಇದೆ... ಆದರೆ, ನೀವು ಒಂದು ಹಂತ ತಲುಪಿದಾಗ ಮಾನಸಿಕ ಒತ್ತಡವನ್ನು ನಿಭಾಯಿಸಲು ತರಬೇತಿ ಪಡೆಯುವ ಅಗತ್ಯತೆ ಇರುತ್ತದೆ" ಎಂದು ನಿಖತ್ ಜರೀನ್ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್ ಸಂಸ್ಥೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಿಖತ್ ಜರೀನ್ ಈ ವಿಚಾರ ಪ್ರಸ್ತಾಪಿಸಿದರು. "ದೊಡ್ಡ ಮಟ್ಟಕ್ಕೆ ಏರಿದಾಗ ಬಹಳಷ್ಟು ಅಥ್ಲೀಟ್ಗಳು ಆತಂಕಗೊಳ್ಳುತ್ತಾರೆ. ಇದರಿಂದ ನಿರೀಕ್ಷೆಗೆ ತಕ್ಕಂತೆ ಸಾಧಿಸಲು ಆಗುವುದಿಲ್ಲ" ಎಂದಿದ್ದಾರೆ.
ಉಳಿಪೆಟ್ಟು ತಿಂದ ಶಿಲೆ
ಉಳಿಪೆಟ್ಟು ತಿಂದು ಶಿಲೆ ಒಂದು ಸುಂದರ ಮೂರ್ತಿಯಾದಂತೆ ಇಂದು ನಿಖತ್ ಜರೀನ್ ಈ ಮಟ್ಟಕ್ಕೆ ಬೆಳೆಯಲು ಮೇರಿ ಕೋಂ ಕೂಡ ಪ್ರಮುಖ ಕಾರಣರು. ಇವರಿಬ್ಬರದ್ದು ಗುರು ಶಿಷ್ಯರ ಸಂಬಂಧವಲ್ಲ, ಬದಲಾಗಿ ಒಬ್ಬರಿಗೊಬ್ಬರು ಸೆಣಸಾಡುವ ಸ್ಪರ್ಧಾಳುಗಳ ಸಂಬಂಧ.
ನಿಖತ್ ಜರೀನ್ ಮತ್ತು ಮೇರಿಕೋಂ ಬಾಕ್ಸಿಂಗ್ನಲ್ಲಿ ಒಂದೇ ತೂಕದ ವಿಭಾಗದವರು. ಫ್ಲೈವೈಟ್ ಕೆಟಗರಿಯಲ್ಲಿ ಆಡುವವರು. ಭಾರತದ ಅತ್ಯಂತ ಅನುಭವಿ ಮಹಿಳಾ ಬಾಕ್ಸರ್ ಎನಿಸಿರುವ ಮೇರಿಕೋಮ್ಗೆ ಭಾರತದಲ್ಲಿ ಯಾರೂ ಸರಿಸಾಟಿ ಎನ್ನುವಂತಿರಲಿಲ್ಲ. ಇವರ ವಿರುದ್ಧ ಸ್ಪರ್ಧಿಸಿ ಸ್ಪರ್ಧಿಸಿ ನಿಖತ್ ಜರೀನ್ ಇಂದು ಪರಿಪಕ್ವ ಬಾಕ್ಸಿಂಗ್ ಆಗಿ ರೂಪುಗೊಂಡಿರುವುದು ಹೌದು.
ಬಡತನದಲ್ಲಿ ಅರಳಿದ ಹೂವು: ಚಿನ್ನದ ಪದಕಕ್ಕೆ ಮುತ್ತಿಟ್ಟ ದಾವಣಗೆರೆಯ ಉಮೇಶ್
ನಿಮ್ಮ ಸಾಮರ್ಥ್ಯ ಸಾಬೀತುಪಡಿಸಿ
ಮೇರಿಕೋಮ್ ಇದ್ದ ಕಾರಣ ಫ್ಲೈ ವೈಟ್ ಕೆಟಗಿರಿಯಲ್ಲಿ ನಿಖತ್ ಸೇರಿದಂತೆ ಹಲವು ಬಾಕ್ಸರ್ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಬಹಳ ಕಾಲ ಕಾಯಬೇಕಾಯಿತು. ನಿಖತ್ ಪ್ರಕಾರ ಇದು ಸಹಜ. ಕಠಿಣ ಪರಿಶ್ರಮ ಇಲ್ಲದೇ ಯಾರು ಕೂಡ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ನಿಖತ್ ಜರೀನ್.
"ಆ ವಿಭಾಗದಲ್ಲಿ ನಾವು ಮಾತ್ರವಲ್ಲ ಬೇರೆ ಬಾಕ್ಸರ್ಗಳು ಅವಕಾಶಕ್ಕೆ ಕಾದಿದ್ದರು. ನೀವು ಅದಕ್ಕೆ ಅರ್ಹರಿದ್ದೀರಿ ಎಂಬುದನ್ನು ಸಾಬೀತು ಮಾಡಬೇಕು. ನಾನು ವಿಶ್ವಚಾಂಪಿಯನ್ ಆಗುವ ಮೂಲಕ ಅದನ್ನು ಮಾಡಿದ್ಧೇನೆ.
"ನಾನು ಪರಿಶ್ರಮ ಪಡದೇ ಇದ್ದಿದ್ದರೆ, ಮತ್ತು ಮೇರಿ ಕೋಮ್ ನನ್ನ ವಿಭಾಗದಲ್ಲಿ ಇಲ್ದಿದ್ದರೆ ನಾನು ಇಷ್ಟು ಪರಿಶ್ರಮ ಹಾಕುತ್ತಿರಲಿಲ್ಲ. ಇವತ್ತಿನಂತೆ ನಾನು ವಿಶ್ವ ಚಾಂಪಿಯನ್ ಆಗುತ್ತಿರಲಿಲ್ಲ" ಎಂದು ನಿಖತ್ ಜರೀನ್ ತಿಳಿಸಿದ್ದಾರೆ.
ಮೇರಿ ಕೋಮ್ ಆಲಿಂಗಿಸಿಕೊಳ್ಳದೇ ಹೋದದ್ದು
ಟೋಕಿಯೋ ಒಲಿಂಪಿಕ್ಸ್ಗೆ ಮೇರಿ ಕೋಮ್ ಅರ್ಹತೆ ಪಡೆದಾಗ ನಿಖತ್ ಜರೀನ್ ಒಂದು ಸವಾಲು ಹಾಕಿದ್ದು ನೆನಪಿರಬಹುದು. ಟೋಕಿಯೋದಲ್ಲಿ ಫ್ಲೈವೈಟ್ ಕೆಟಗರಿಯಲ್ಲಿ ಯಾರು ಭಾರತವನ್ನು ಪ್ರತಿನಿಧಿಸಬೇಕು ಎಂಬುದನ್ನು ನಿರ್ಧರಿಸಲು ತನ್ನ ಮತ್ತು ಮೇರಿ ಕೋಮ್ ಮಧ್ಯೆ ಪಂದ್ಯ ನಡೆಯಲಿ ಎಂದು ಇದೇ ನಿಖತ್ ಚಾಲೆಂಜ್ ಮಾಡಿದ್ದರು.
ಆ ಟ್ರಯಲ್ ಪಂದ್ಯದಲ್ಲಿ ಮೇರಿ ಕೋಮ್ 9-1ರಿಂದ ಗೆದ್ದಿದ್ದರು. ಆ ಪಂದ್ಯದ ಬಳಿಕ ನಿಖತ್ ಜರೀನ್ರನ್ನು ಅಲಂಗಿಸಲು ಮೇರಿಕೋಮ್ ನಿರಾಕರಿಸಿದ್ದರು. ಆ ಘಟನೆಯನ್ನು ಸ್ಮರಿಸಿದ ನಿಖತ್ ಝರೀನ್ ಹೇಳಿದ್ದು ಇದು:
"ನನ್ನ ರೋಲ್ ಮಾಡಲ್ ಆಗಿದ್ದ ವ್ಯಕ್ತಿ ಆ ರೀತಿ ವರ್ತಿಸಿದ್ದು ನನಗೆ ಆಗ ಬೇಸರ ತರಿಸಿತು. ಆದರೆ, ಸಾಂದರ್ಭಿಕವಾಗಿ ಅಂಥ ಘಟನೆಗಳು ನಡೆಯುವುದು ಸಹಜ. ಮೇಲಾಗಿ ಆ ಪಂದ್ಯದಲ್ಲಿ ಪೈಪೋಟಿ ತೀವ್ರವಾಗಿತ್ತು.
"ನಾನು ಅದನ್ನು ಮರೆತು ಮುಂದೆ ಸಾಗಿದೆ. ವಿಶ್ವ ಚಾಂಪಿಯನ್ಶಿಪ್ ಗೆದ್ದ ಬಳಿಕ ಅವರನ್ನು ಭೇಟಿಯಾಗಿ ಮಾತನಾಡಿದೆ. ಈಗ ಎಲ್ಲವೂ ಚೆನ್ನಾಗಿದೆ" ಎಂದು ನಿಖತ್ ಜರೀನ್ ವಿವರಿಸುತ್ತಾರೆ.
(ಒನ್ಇಂಡಿಯಾ ಸುದ್ದಿ)
Recommended Video