R Ashwin: ಈ ತಪ್ಪು ಮಾಡದಿದ್ರೆ ಆರ್ಸಿಬಿ ಟ್ರೋಫಿ ಗೆಲ್ಲೋದು ಗ್ಯಾರಂಟಿ: ಆರ್. ಅಶ್ವಿನ್ ಭವಿಷ್ಯ
R Ashwin: ಅಹಮದಾಬಾದ್ನಲ್ಲಿ ಭಾನುವಾರ (ಮೇ 31) ನಡೆಯಲಿರುವ ಐಪಿಎಲ್ 2026ರ ರೋಚಕ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗೂಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಹೈ ವೋಲ್ಟೇಜ್ ಕದನಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಅವರು ಆರ್ಸಿಬಿ ತಂಡವೇ ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದು ಭವಿಷ್ಯ ನುಡಿದು ಗಮನ ಸೆಳೆದಿದ್ದಾರೆ.
ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ವಿರಾಟ್ ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಉದಾಹರಣೆಗಳಿವೆ. ಆದರೆ ಇದೀಗ ಆರ್ಸಿಬಿ ಟ್ರೋಫಿ ಎತ್ತಲಿದೆ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಆರ್.ಅಶ್ವಿನ್ ಹೇಳಿದ್ದೇನು?
ಜಿಯೋ ಹಾಟ್ಸ್ಟಾರ್ ಜೊತೆ ಮಾತನಾಡಿದ ಆರ್.ಅಶ್ವಿನ್ ಅವರು, ಐಪಿಎಲ್ 2025ರ ಚಾಂಪಿಯನ್ ಆಗಿರುವ ಬೆಂಗಳೂರು ತಂಡವೇ ಈ ಬಾರಿಯೂ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. 'ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಲಿ ಅಥವಾ ಬೌಲಿಂಗ್ ಮಾಡಲಿ, ಅದು ಮುಖ್ಯವಲ್ಲ. ಫೈನಲ್ ಪಂದ್ಯದಲ್ಲಿ ಆರ್ಸಿಬಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಒಂದು ವೇಳೆ ಸೋತರೆ ಅದು ತಂಡ ಮಾಡುವ ತಪ್ಪುಗಳಿಂದ ಮಾತ್ರ ಸಾಧ್ಯ. ಇಡೀ ಸೀಸನ್ನಲ್ಲಿ ಪ್ರದರ್ಶಿಸಿದ ಆಕ್ರಮಣಕಾರಿ ಆಟವನ್ನು ಫೈನಲ್ನಲ್ಲೂ ಮುಂದುವರಿಸಬೇಕು,' ಎಂದು ಹೇಳಿದ್ದಾರೆ.
ಆರ್ಸಿಬಿಗೆ ಗೆಲುವು
'ಐಪಿಎಲ್ 2026ರಲ್ಲಿ ಆರ್ಸಿಬಿಯು ಅಸಾಧಾರಣ ಪ್ರದರ್ಶನ ನೀಡಿದೆ. ಲೀಗ್ ಹಂತದಲ್ಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಬೆಂಗಳೂರು ಕ್ವಾಲಿಫೈಯರ್ 1 ಪಂದ್ಯದಲ್ಲಿ ಇದೇ ಗುಜರಾತ್ ಟೈಟಾನ್ಸ್ ತಂಡವನ್ನು 92 ರನ್ಗಳ ಅಂತರದಿಂದ ಮಣಿಸಿ ನೇರವಾಗಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಹಾಗೆಯೇ ಫೈನಲ್ನಲ್ಲೂ ಕೂಡ ಜಯ ಸಾಧಿಸಲಿದೆ ಎನ್ನುವ ನಂಬಿಕೆಯಿದೆ,' ಎಂದು ಹೇಳಿದ್ದಾರೆ.
ಗುಜರಾತ್ ಭದ್ರಕೋಟೆಯಲ್ಲಿ ಆರ್ಸಿಬಿ ಆರ್ಭಟಕ್ಕೆ ಸಜ್ಜು
ಮತ್ತೊಂದೆಡೆ ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು ಕ್ವಾಲಿಫೈಯರ್ 1ರಲ್ಲಿ ಸೋತರೂ ಎದೆಗುಂದದೆ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಫೈನಲ್ ತಲುಪಿದೆ. ಪ್ರಸಕ್ತ ಸೀಸನ್ನಲ್ಲಿ ಜಿಟಿ ತಂಡವು ಅಹಮದಾಬಾದ್ನ ತಮ್ಮ ಹೋಮ್ ಗ್ರೌಂಡ್ ಅನ್ನು ಭದ್ರ ಕೋಟೆಯನ್ನಾಗಿ ಮಾಡಿಕೊಂಡಿದೆ.
'ಆರ್ಸಿಬಿ ಮಣಿಸುವುದು ಅಷ್ಟು ಸುಲಭದ ಮಾತಲ್ಲ'
'ಗುಜರಾತ್ ಟೈಟಾನ್ಸ್ ತಂಡಕ್ಕೆ ತಮ್ಮದೇ ತವರು ಮೈದಾನದಲ್ಲಿ ಆಡುವ ಲಾಭವಿದೆ ನಿಜ. ಆದರೆ ಇಡೀ ಟೂರ್ನಮೆಂಟ್ನಲ್ಲಿ ಆರ್ಸಿಬಿ ತೋರಿರುವ ಉತ್ತಮ ಪ್ರದರ್ಶನವನ್ನು ನೋಡಿದರೆ ಅವರನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಆರ್ಸಿಬಿಯೇ ಬಲಿಷ್ಠ ತಂಡವಾಗಿದೆ,' ಎಂದು ಹೇಳಿದ್ದಾರೆ.
ಎರಡೂ ತಂಡಗಳ ಆಟದ ಶೈಲಿಯನ್ನು ಹೋಲಿಸಿ ಮಾತನಾಡಿದ ಅಶ್ವಿನ್, ಆರ್ಸಿಬಿಯ ಆಕ್ರಮಣಕಾರಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಮನೋಭಾವವನ್ನು ಶ್ಲಾಘಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ಅವರಂತಹ ಅನುಭವಿ ಆಟಗಾರರಿದ್ದು, ಅವರು ಒತ್ತಡದ ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
'ಜಿಟಿಯ ತವರಿನ ಮೈದಾನ ಮತ್ತು ಆ ಪರಿಸ್ಥಿತಿಗಳೊಂದಿಗೆ ಅವರಿಗಿರುವ ಹೊಂದಾಣಿಕೆಯು ಆರ್ಸಿಬಿ ಮತ್ತು ಅವರ ಎರಡನೇ ಪ್ರಶಸ್ತಿಯ ನಡುವೆ ನಿಂತಿರುವ ಕೊನೆಯ ಸವಾಲಾಗಿದೆ.' ಎಂದು ಹೇಳಿದ್ದಾರೆ. ಇಂದು ಆರ್ಸಿಬಿ ಗೆದ್ದರೆ ಐಪಿಎಲ್ ಇತಿಹಾಸದಲ್ಲೇ ಯಶಸ್ವಿಯಾಗಿ ಪ್ರಶಸ್ತಿಯನ್ನು ರಕ್ಷಿಸಿಕೊಂಡ ಕೇವಲ 3ನೇ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡವು 2ನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಲು ತವರಿನ ಪ್ರೇಕ್ಷಕರ ಭರ್ಜರಿ ಬೆಂಬಲದೊಂದಿಗೆ ಕಣಕ್ಕಿಳಿಯುತ್ತಿದೆ.












Click it and Unblock the Notifications