ಶಿವಮೊಗ್ಗ: ಬಿಜೆಪಿಯಿಂದ ನಾವು ಸುರಕ್ಷಿತ; ರಾಜ್ಯದಲ್ಲಿ ಬಿಜೆಪಿ ಗೆಲ್ಲಿಸೋಣ; ಮೃತ ಹರ್ಷನ ಸಹೋದರಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ಅದೃಷ್ಟ ಪರೀಕ್ಷೆಗಿಳಿದಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಗೆಲುವಿಗಾಗಿ ಉರಿ ಬಿಸಿಲಿನಲ್ಲಿಯೂ ಮತಬೇಟೆ ಶುರುವಿಟ್ಟುಕೊಂಡಿದ್ದಾರೆ.
ಇನ್ನು ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಈ ಬಾರಿ ಕೆ.ಎಸ್. ಈಶ್ವರಪ್ಪ ಬದಲಾಗಿ ಅವರ ಆಪ್ತ ಚನ್ನಬಸಪ್ಪಗೆ ನೀಡಲಾಗಿದೆ. ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕೆ.ಎಸ್. ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿದ್ದರು.

ಇನ್ನು ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರು ನಾಮಪತ್ರ ಸಲ್ಲಿಸಿದ ಬಳಿಕ ಮನೆಮನೆ ಪ್ರಚಾರ ಕೈಗೊಂಡಿದ್ದಾರೆ. ಇದೇ ವೇಳೆ 2022ರಲ್ಲಿ ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಭಜರಂಗ ದಳ ಕಾರ್ಯಕರ್ತ ಹರ್ಷನ ಮನೆಗೂ ಭೇಟಿ ನೀಡಿದ್ದರು. ಈ ಕುರಿತು ಮೃತ ಹರ್ಷನ ಅಕ್ಕ ಅಶ್ವಿನಿ ಮಾತನಾಡಿ, ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
"ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಚನ್ನಬಸಪ್ಪ ಅಪ್ಪಾಜಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿರುವುದು ನಮಗೆ ಖುಷಿ ತಂದಿದೆ. ಏಕೆಂದರೆ, ಬಿಜೆಪಿ ಹೈಕಮಾಂಡ್ ತೀರ್ಮಾನ ಯಾವಾಗಲೂ ಈ ದೇಶಕ್ಕೆ ಮತ್ತು ರಾಜ್ಯಕ್ಕೆ ಸಂತೋಷವನ್ನು ನೀಡುತ್ತದೆ," ಎಂದು ಮೃತ ಹರ್ಷನ ಅಕ್ಕ ಅಶ್ವಿನಿ ತಿಳಿಸಿದರು.
"ರಾಜ್ಯದಲ್ಲಿ 72 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಎಲ್ಲ ಅಚ್ಚರಿ ಮುಖಗಳನ್ನು ಮುನ್ನೆಲೆಗೆ ತರಲಾಗಿದೆ. ಕರ್ನಾಟಕದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ಭದ್ರಕೋಟೆ ಮಾಡಿಟ್ಟಿದ್ದು, ಅದೇ ರೀತಿ ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಿರುವುದಕ್ಕೆ ನಾವೆಲ್ಲರೂ ಸಾಥ್ ನೀಡಬೇಕು," ಎಂದು ಅಶ್ವಿನಿ ಮನವಿ ಮಾಡಿದರು.
"ಇಡೀ ಕರ್ನಾಟಕದ ಜನತೆ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಬಿಜೆಪಿ ಬಂದರೆ ನಾವೆಲ್ಲರೂ ಸುರಕ್ಷಿತವಾಗಿರುತ್ತೇವೆ. ಬಿಜೆಪಿಯನ್ನು ಗೆಲ್ಲಿಸಿ, ಇದು ಹರ್ಷನ ಕುಟುಂಬದಿಂದ ಎಲ್ಲಾ ಕಾರ್ಯಕರ್ತರು ಮತ್ತು ಜನರಿಗೆ ಮಾಡುತ್ತಿರುವ ಮನವಿ," ಎಂದರು.
"ಪ್ರಧಾನಿ ನರೇಂದ್ರ ಮೋದಿಜಿಯವರು ನಮ್ಮ ಕುಟುಂಬದಲ್ಲಿ ಒಬ್ಬರಿಂದಂತೆ. ಬಿಜೆಪಿ ಕುಟುಂಬಕ್ಕೆ ನಾನೂ ಒಬ್ಬಳು ಸೇರಿದ್ದೇನೆ. ನಾವೆಲ್ಲರೂ ಸೇರಿ ಬಿಜೆಪಿ ಕುಟುಂಬವನ್ನು ಗೆಲ್ಲಿಸೋಣ ಅಂತಾ ಕೇಳಿಕೊಳ್ಳುತ್ತೇನೆ. ಬಿಜೆಪಿಯಲ್ಲಿ ನನಗೆ ಸ್ಥಾನ ಕೊಟ್ಟಿದ್ದಕ್ಕೆ ಧನ್ಯವಾದಗಳು," ಎಂದು ಶಿವಮೊಗ್ಗದಲ್ಲಿ ಮೃತ ಹರ್ಷನ ಸಹೋದರಿ ಅಶ್ವಿನಿ ತಿಳಿಸಿದರು.
ಭಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆ
2022ರ ಫೆಬ್ರವರಿಯಲ್ಲಿ ಭಜರಂಗ ದಳದ ಕಾರ್ಯಕರ್ತ ಹರ್ಷನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಇದು ದೇಶಾದ್ಯಂತ ಭಾರೀ ಸಂಚಲನವನ್ನು ಉಂಟು ಮಾಡಿತ್ತು.
ಹಿಂದೂಪರ ಸಂಘಟನೆಯಲ್ಲಿ ಕಾರ್ಯನಿರತನಾಗಿದ್ದ ಹರ್ಷನನ್ನು ಕೆಲವು ಮುಸ್ಲಿಂ ಕಿಡಿಗೇಡಿಗಳು ಹಳೆಯ ದ್ವೇಷ ಇಟ್ಟುಕೊಂಡು ಮಚ್ಚಿನಿಂದ ಕೊಲೆ ಮಾಡಿದ್ದರು. ನಂತರ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ ಮಾಡೋದು ಉದ್ದೇಶ ಆಗಿತ್ತು ಎಂದು ತನಿಖೆಯಿಂದ ತಿಳಿದಬಂದಿತ್ತು.
ನಂತರ ಈ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು. ಆರೋಪಿಗಳು ಪ್ಲಾನ್ ಮಾಡಿಕೊಂಡು ಹದಿನೈದು ದಿನಗಳಿಂದ ಹರ್ಷನ ಹತ್ಯೆಗೆ ಕಾದು ಕುಳಿತುಕೊಂಡಿದ್ದರು. ಹಿಂದೂ ಸಂಘಟನೆಯಲ್ಲಿ ಆಕ್ಟೀವ್ ಇದ್ದ ಹರ್ಷನ ಕೊಲೆಗೆ, ಆರೋಪಿ ನಂ.1 ಆಯ್ಕೆ ಮಾಡಿದ್ದ.
ಇದಲ್ಲದೆ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದು ತಮಗೆ ವಿರೋಧಿಯಾಗಿರೋ ಹರ್ಷ ಕೊಲೆ ಮಾಡುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಭಯ ಹುಟ್ಟಿಸುವುದು ಆರೋಪಿಗಳ ಉದ್ದೇಶವಾಗಿತ್ತು ಎಂಬುದು ಎನ್ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು.












Click it and Unblock the Notifications