Breaking: ಜೆಡಿಎಸ್ನಿಂದಲೂ ಮಳೆ ಸಂತ್ರಸ್ತರಿಗೆ ಪರಿಹಾರ, ಎಚ್ಡಿಕೆ
ರಾಮನಗರ, ಆಗಸ್ಟ್ 28: ಮಳೆ ಅಬ್ಬರಕ್ಕೆ ರಾಮನಗರ ಜಿಲ್ಲೆಯ ಹಲವು ಭಾಗಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಚನ್ನಪಟ್ಟಣಕ್ಕೆ ಸ್ಥಳೀಯ ಶಾಸಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಹಾನಿ ಸಂಭವಿಸಿದ್ದು, ಭಾರೀ ಮಳೆಯಿಂದಾಗಿ ನೀರು ನುಗ್ಗಿದ್ದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸರಕಾರದ ಜೊತೆಗೆ ಪಕ್ಷದಿಂದಲೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಜನರಿಗೆ ಪರಿಹಾರ ನೀಡುವ ಭರವಸೆಯನ್ನು ಅವರು ನೀಡಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ವರುಣನ ಅವಾಂತರ; ದಶಪಥ ಹೆದ್ದಾರಿ ಬಳಿ ನೀರು
ರಾಮನಗರದ ನೂತನ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳು, ರಸ್ತೆಗಳು ಹಾಗೂ ಜಮೀನುಗಳು ನೀರಿನಲ್ಲಿ ಮುಳುಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಚನ್ನಪಟ್ಟಣದಲ್ಲಿ ಸುಮಾರು 200 ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರವಾಗಿದೆ. ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸುತ್ತಿರುವ ಕಾರಣ ಹೊಲಗಳಿಗೆ ನೀರು ನುಗ್ಗಿದೆ ಎಂಬ ಆರೋಪವೂ ಇದೆ.

"ಚನ್ನಪಟ್ಟಣದಲ್ಲಿ ಸುರಿದ ಭಾರೀ ಮಳೆಯಿಂದ ನೀರು ನುಗ್ಗಿದ್ದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ವಿಸ್ತೃತವಾಗಿ ಪರಿಶೀಲನೆ ನಡೆಸಿದೆ. ಭವಿಷ್ಯದಲ್ಲಿ ಈ ಪ್ರದೇಶಗಳಿಗೆ ಮಳೆನೀರು ನುಗ್ಗದಂತೆ ತಡೆಯುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ತ್ವರಿತವಾಗಿ ಯೋಜನೆಗಳನ್ನು ಜಾರಿಗೊಳಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು" ಎಂದು ಶಾಸಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
"ಬೆಳಗ್ಗೆಯಿಂದಲೇ ಅಧಿಕಾರಿಗಳಿಂದ ಪೂರ್ಣ ಮಾಹಿತಿ ಪಡೆದು ಪರಿಶೀಲಿಸಿದ್ದೇನೆ. ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ, ಮಳೆ ಸಂತ್ರಸ್ತರಿಗೆ ತಕ್ಷಣವೇ 10,000 ರೂ. ಪರಿಹಾರ ನೀಡಲು ಸೂಚಿಸಿದ್ದೇನೆ. ಕುರಿ, ಕೋಳಿ ಕಳೆದುಕೊಂಡವರಿಗೆ & ಬೆಳೆಹಾನಿಗೂ ಸೂಕ್ತ ಪರಿಹಾರ ಕೊಡಲು ತಿಳಿಸಿದ್ದೇನೆ. ಈ ಪರಿಹಾರದ ಮೊತ್ತ ಶೀಘ್ರವೇ ಸಂತ್ರಸ್ತರ ಕೈ ಸೇರಲಿದೆ" ಎಂದು ಭರವಸೆ ನೀಡಿದ್ದಾರೆ.
"ಜೆಡಿಎಸ್ ಪಕ್ಷದಿಂದಲೂ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು. ಈಗಾಗಲೇ ಚನ್ನಪಟ್ಟಣದ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಅವರೆಲ್ಲರೂ ಈ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ರಾಜ್ಯ ಸರಕಾರದಿಂದಲೂ ಹೆಚ್ಚಿನ ಪರಿಹಾರ ಕೊಡಿಸುವ ಬಗ್ಗೆ ಚರ್ಚೆ ನಡೆಸುತ್ತೇನೆ" ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಚನ್ನಪಟ್ಟಣ ಹಾಗೂ ಕುಣಿಗಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮನ ಕೆರೆ ಹೊಡೆದಿತ್ತು. ಇದರ ಪರಿಣಾಮ, ಕೆರೆಯಿಂದ ತಗ್ಗು ಪ್ರದೇಶದಲ್ಲಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳು ನೀರು ನುಗ್ಗಿದ್ದರಿಂದ ಮಧ್ಯರಾತ್ರಿಯಿಂದ ಜನರು ಮನೆಗಳಿಂದ ಹೊರ ಬೀದಿಯಲ್ಲಿ ಕಾಲ ಕಳೆದಿದ್ದರು.
ಚನ್ನಪಟ್ಟಣದ ಎಲೇಕೇರಿ ಬಡವಾಣೆಯ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಹಾಲಿನ ಡೈರಿ ಹಾಗೂ ರಸ್ತೆ ನೀರಿನಿಂದ ಆವೃತ್ತಗೊಂಡಿದ್ದು, ಸಾರ್ವಜನಿಕರು ಓಡಾಡಲು ತೊಂದರೆ ಉಂಟಾಗಿತ್ತು. ಸುಮಾರು 4 ಅಡಿಗೂ ಹೆಚ್ಚು ನೀರು ರಸ್ತೆಯಲ್ಲಿ ನಿಂತಿದ್ದರಿಂದಾಗಿ ದೇವರಹೊಸಹಳ್ಳಿ, ರಾಂಪುರ ಕೋಮನಹಳ್ಳಿ ಸೇರಿದಂತೆ ನಾಲ್ಕಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಹಾಲಿನ ಡೈರಿ ಪೂರ್ತಿ ಮಳೆ ನೀರಿನಿಂದ ಆವೃತವಾದ ಕಾರಣ ಹಾಲು ಹಾಕುವವರಿಗೆ ದೇವಸ್ಥಾನದ ಬಳಿ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು.
ಈ ಹಿನ್ನೆಲೆ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನರ ಕಷ್ಟಗಳನ್ನು ಕೇಳಿ, ಪರಿಸ್ಥಿತಿ ಅವಲೋಕನ ಮಾಡಿ, ಪರಿಹಾರದ ಭರವಸೆ ನೀಡಿದ್ದಾರೆ.












Click it and Unblock the Notifications