ರಾಮನಗರ ಜಿಲ್ಲೆಯಲ್ಲಿ ವರುಣನ ಅವಾಂತರ; ದಶಪಥ ಹೆದ್ದಾರಿ ಬಳಿ ನೀರು
ರಾಮನಗರ, ಆಗಸ್ಟ್ 27: ವರುಣ ಅಬ್ಬರಕ್ಕೆ ಜಿಲ್ಲೆಯ ಹಲವು ಬಾಗಗಳಲ್ಲಿ ಅವಾಂತರವೇ ಸೃಷ್ಟಿಯಾಗಿದೆ. ನೂತನ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳು, ರಸ್ತೆಗಳು ಹಾಗೂ ಜಮೀನುಗಳು ನೀರಿನಲ್ಲಿ ಮುಳುಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಮನಗರದಲ್ಲಿ ಕಳೆದ ರಾತ್ರಿ ಭಾರಿ ಮಳೆಯಿಂದ ಹಲವು ರಸ್ತೆಗಳು ಜಲಾವೃತ ಸಂಪರ್ಕ ಕಡಿತವಾಗಿದ್ದಲ್ಲದೇ, ಮನೆಗಳಿಗೂ ನೀರು ನುಗ್ಗಿ ನಾಗರಿಕರ ಪರದಾಟ ನಡೆಸಿದ್ದಾರೆ. ನಗರದ ಟಿಪ್ಪುನಗರ ಬಡವಾಣೆಯ ಸೀರಹಳ್ಳ ತುಂಬಿ ಪಕ್ಕದಲ್ಲಿದ್ದ ಮನೆಗಳಿಗೆ ಹಾಗೂ ರೇಷ್ಮೆ ಕಾರ್ಖಾನೆಗಳಿಗೆ ಹಳ್ಳದ ನೀರು ಮನೆಯಲ್ಲಿದ್ದ ಅಗತ್ಯ ವಸ್ತುಗಳು ಹಾಗೂ ಕಾರ್ಖಾನೆಯಲ್ಲಿದ್ದ ರೇಷ್ಮೆ ನೂಲು ಮಳೆನೀರಿನಿಂದ ಹಾಳಾಗಿವೆ.
ಚಿತ್ರದುರ್ಗದಲ್ಲಿ ತುಂತುರು ಮಳೆ: ರೈತರ ಮೊಗದಲ್ಲಿ ಸಂತಸ
ಮಧ್ಯ ರಾತ್ರಿ ಮಳೆ ಹೆಚ್ಚಾದ ಹಿನ್ನಲೆಯಲ್ಲಿ ನಗರದ ಭಕ್ಷಿ ಕೆರೆ ತುಂಬಿ ಕೋಡಿ ಹರಿದ ಪರಿಣಾಮ ಟಿಪ್ಪುನಗರ ಕೆರೆಯಂತಾಗಿ ದ್ವಿಚಕ್ರ ವಾಹನಗಳು, ಕಾರುಗಳು ನೀರಿನಲ್ಲಿ ಮುಳುಗಡೆಯಾಗಿವೆ . ಅಲ್ಲದೇ ಕಳೆದ ತಿಂಗಳು ಸುರಿದ ಬಾರಿ ಮಳೆಗೆ ಸೀರಹಳ್ಳದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು ಅಧಿಕಾರಿಗಳು ಜಾಗ್ರತೆ ವಹಿಸದ ಹಿನ್ನಲೆಯಲ್ಲಿ ಎರಡನೇ ಬಾರಿಗೆ ಸೀರಹಳ್ಳದ ಅಕ್ಕ ಪಕ್ಕದ ನಿವಾಸಿಗಳು ಸಂಕಷ್ಟಕ್ಕೆ ಒಳಾಗಾಗಿದ್ದಾರೆ.
ದಶಪಥ ಹೆದ್ದಾರಿ ಸರ್ವಿಸ್ ರಸ್ತೆ ಜಲಾವೃತ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸರ್ವಿಸ್ ರಸ್ತೆಯೂ ಜಲಾವೃತವಾಗಿ ಬೆಂಗಳೂರಿಗೆ ತೆರಳುವ ಸರ್ಕಾರಿ ವಾಹನಗಳು ಹಾಗೂ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ಹೆದ್ದಾರಿಯ ಮಧುರಾ ಗಾರ್ಮೆಂಟ್ಸ್ ಮುಂಬಾಗದ ಅಂಡರ್ ಪಾಸ್ ಮಳೆ ನೀರಿನಲ್ಲಿ ಮಳುಗಿದ ಪರಿಣಾಮ ವಾಹನಗಳು ಸುತ್ತಿ ಬಳಸಿ ಬೆಂಗಳೂರಿಗೆ ತೆರಳಿದವು . ಅಲ್ಲದೇ ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಅಂಡರ್ ಪಾಸ್ ಗಳಲ್ಲಿ ಮಳೆ ನೀರು ತುಂಬಿದೆ.
ರಾಮಮ್ಮನ ಕೆರೆ ಹೊಡೆದ ಗ್ರಾಮಕ್ಕೆ ನೀರು
ಜಿಲ್ಲೆಯ ಚನ್ನಪಟ್ಟಣ ಹಾಗೂ ಕುಣಿಗಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮನ ಕೆರೆ ಹೊಡೆದ ಪರಿಣಾಮ, ಕೆರೆಯಿಂದ ತಗ್ಗು ಪ್ರದೇಶದಲ್ಲಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳು ನೀರು ನುಗ್ಗಿದ್ದರಿಂದ ಮಧ್ಯರಾತ್ರಿಯಿಂದ ಜನರು ಮನೆಗಳಿಂದ ಹೊರ ಬೀದಿಯಲ್ಲಿ ಕಾಲ ಕಳೆದಿದ್ದಾರೆ.
ಮನೆಗಳು ಜಲಾವೃತಗೊಂಡು ಸಂಕಷ್ಟಕ್ಕೆ ಸಿಲುಕಿದ ಜನರನ್ನು ಬೆಳಗಿನ ಜಾವ ಕಾರ್ಯಚರಣೆ ನಡೆಸಿ ಜನತೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆಗೆ ಮಾಡಿದ್ದಾರೆ. ತಿಟ್ಟಮಾರನಹಳ್ಳಿಯ ರಾಮಮ್ಮನ ಕೆರೆ ಒಡೆಯಲು ಹೆದ್ದಾರಿ ಬೈಪಾಸ್ ನಿರ್ಮಾಣ ಮಾಡುತ್ತಿರುವ ಡಿಬಿಎಲ್ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ.
ನಾಲ್ಕಾರು ಗ್ರಾಮಗಳ ಸಂಪರ್ಕ ಕಡಿತ
ಚನ್ನಪಟ್ಟಣದ ಎಲೇಕೇರಿ ಬಡವಾಣೆ ಕಳೆದ ರಾತ್ರಿ ಸುರಿದ ಬಾರಿ ಮಳೆಗೆ ಬಡವಾಣೆಯ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಹಾಲಿನ ಡೈರಿ ಹಾಗೂ ರಸ್ತೆ ನೀರಿನಿಂದ ಆವೃತ್ತಗೊಂಡಿದ್ದು, ಸಾರ್ವಜನಿಕರು ಓಡಾಡಲು ತೊಂದರೆ ಉಂಟಾಗಿದೆ. ಸುಮಾರು 4 ಅಡಿಗೂ ಹೆಚ್ಚು ನೀರು ರಸ್ತೆಯಲ್ಲಿ ನಿಂತಿದ್ದರಿಂದಾಗಿ ದೇವರಹೊಸಹಳ್ಳಿ, ರಾಂಪುರ ಕೋಮನಹಳ್ಳಿ ಸೇರಿದಂತೆ ನಾಲ್ಕಾರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಹಾಲಿನ ಡೈರಿ ಮಳೆ ನೀರಿನಿಂದ ಆವೃತವಾದ ಕಾರಣ ಹಾಲು ಹಾಕುವವರಿಗೆ ದೇವಸ್ಥಾನದ ಬಳಿ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು.
ಕಾಲುವೆ ಮುಚ್ಚಿದ ಪರಿಣಾಮ ಜಮೀನಿಗೆ ನೀರು
ಪಟ್ಟಣದ ಕುಡಿನೀರು ಕೆರೆ ತುಂಬಿ ಕೋಡಿ ಹರಿದಿದ್ದರಿಂದ ತಗ್ಗು ಪ್ರದೇಶದಲ್ಲಿರುವ ಲಾಳಘಟ್ಟ, ಬೀಡಿ ಕಾಲೋನಿ ಹಾಗೂ ರೈಸ್ ಮಿಲ್ ನೀರಿನಿಂದ ಅವೃತವಾಗಿವೆ. ರಾಜ ಕಾಲುವಯನ್ನು ಸ್ಥಳಿಯರು ಮುಚ್ಚಿರುವ ಕಾರಣ ಕೆರೆಯ ನೀರು ಬಾರಿ ಅವಾಂತರ ಸೃಷ್ಟಿಮಾಡಿದೆ. ಇನ್ನೂ ಬಾರಿ ಮಳೆಯಿಂದಾಗಿ ಚಕ್ಕರೆ ಗ್ರಾಮ ಹಾಗೂ ಬೈರಾಪಟ್ಟಣ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಅಲ್ಲದೇ ತೋಟಗಳಿಗೆ ಮಳೆ ನೀರು ನುಗ್ಗಿದ ಮಳೆ ಕೆರೆಯಂತೆ ಬಾಸವಾಗುತ್ತಿವೆ.
ತಾಲ್ಲೂಕಿನ ಮತ್ತಿಕೆರೆ ಬಳಿ ಶೆಟ್ಟಿಹಳ್ಳಿ ಕೆರೆಯಿಂದ ಬರುವ ನೀರು ಹರಿದು ಹೋಗಲು ದೊಡ್ಡ ಕಾಲುವೆ ಇತ್ತು. ಹೆದ್ದಾರಿ ನಿರ್ಮಾಣದ ವೇಳೆ ಕಾಲುವೆ ಅತಿಕ್ರಮಿಸಿಕೊಂಡ ಪರಿಣಾಮ ಕಾಲುವೆಯೇ ಇಲ್ಲದೇ ನೀರು ಜಮೀನುಗಳ ಮೇಲೆ ಹರಿದು ಹೋಗುತ್ತಿದೆ. ಅಚ್ಚುಕಟ್ಟು ಪ್ರದೇಶದ ನಡುವೆ ನಕ್ಷೆಯಲ್ಲಿ ಕಾಲುವೆ ಇದೆ. ಅದನ್ನು ಅಭಿವೃದ್ಧಿಪಡಿಸದ ಹೊರತು ಶಾಶ್ವತ ಪರಿಹಾರವಿಲ್ಲ. ಜಮೀನು, ಬೆಳೆಗಳು ಕೊಚ್ಚಿ ಹೋಗಿ ರೈತರು, ನಿವಾಸಿಗಳು ಸಂತ್ರಸ್ತರಾಗಿ ಪರಿತಪಿಸುತ್ತಿದ್ದಾರೆ. ಇದಕ್ಕೆಲ್ಲ ಡಿಬಿಎಲ್ ನವರ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾರಣ ಎಂದು ರೈತರು ಆರೋಪಿಸಿದ್ದಾರೆ.