Bengaluru Rain: ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಜಲಾವೃತಗೊಂಡ ರಸ್ತೆಗಳು, ವಾಹನ ಸವಾರರು ಹೈರಾಣು
ಬೆಂಗಳೂರು:ಉದ್ಯಾನನಗರಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ದಿಢೀರ್ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಮೇತ ಧಾರಾಕಾರ ಮಳೆಯಾಗಿದೆ. ಇದರಿಂದ ಇಡೀ ನಗರವನ್ನು ಜಲಾವೃತಗೊಳಿಸಿದೆ. ವರುಣನ ಆರ್ಭಟಕ್ಕೆ ನಗರದ ಪ್ರಮುಖ ರಸ್ತೆಗಳು, ಅಂಡರ್ಪಾಸ್ಗಳು ಕೆರೆಗಳಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಎಲ್ಲೆಲ್ಲಿ ಮಳೆ?
ಹವಾಮಾನ ಇಲಾಖೆಯು ಇಂದು ಬೆಂಗಳೂರಿಗೆ ಈಗಾಗಲೇ 'ಯೆಲ್ಲೋ ಅಲರ್ಟ್' (Yellow Alert) ಘೋಷಣೆ ಮಾಡಿದ್ದು, ಮುಂದಿನ ಮೂರು ಗಂಟೆಗಳ ಕಾಲ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ಹಾಗೂ ಎಚ್ಚರಿಕೆಯನ್ನು ನೀಡಿದೆ. ನಗರದ ಬಹುತೇಕ ಎಲ್ಲಾ ಭಾಗಗಳಲ್ಲೂ ಮಳೆಯ ಅಬ್ಬರ ಜೋರಾಗಿತ್ತು. ಮುಖ್ಯವಾಗಿ ವಿಧಾನಸೌಧ, ಶಿವಾಜಿನಗರ, ಮಲ್ಲೇಶ್ವರ, ಕಾರ್ಪೊರೇಷನ್ ಭಾಗ, ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಚಾಮರಾಜಪೇಟೆ, ಶೇಷಾದ್ರಿಪುರ, ಹೆಬ್ಬಾಳ ಮತ್ತು ರಾಜಾಜಿನಗರ, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಹಲವೆಡೆ ಗಾಳಿ ಸಮೇತ ಧಾರಾಕಾರ ಮಳೆಯಾಗಿದೆ.

ಭಾರೀ ಮಳೆಗೆ ಟೌನ್ ಹಾಲ್ ಮುಂಭಾಗದ ರಸ್ತೆ ಮತ್ತು ಫ್ರೀಡಂ ಪಾರ್ಕ್ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ನೋಡಲು ಕೆರೆಯಂತಿತ್ತು. ಇದರಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ಸವಾರರು ತೀವ್ರ ಪರದಾಡುವಂತಾಗಿದೆ. ವಿಧಾನಸೌಧದ ಪಕ್ಕದಲ್ಲೇ ಇರುವ ಪ್ರಮುಖ ಪ್ಯಾಲೇಸ್ ರಸ್ತೆಯೂ ಮಳೆನೀರಿನಿಂದ ತುಂಬಿ ಹೋಗಿದೆ. ಇದರಿಂದ ಹೈರಾಣಾದ ವಾಹನ ಸವಾರರು ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಪ್ರಸಿದ್ಧ 'ಮಾಲ್ ಆಫ್ ಏಷ್ಯಾ' ಹಿಂಭಾಗದ ಗೇಟ್ ಬಳಿಯಿರುವ ರೈಲ್ವೆ ಅಂಡರ್ಪಾಸ್ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ. ಇದರಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದಲ್ಲಿ ಸದ್ಯಕ್ಕೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಮತ್ತು ಸವಾರರು ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಸಹಕರಿಸಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಅಪಾರ್ಟ್ಮೆಂಟ್ ಬೇಸ್ಮೆಂಟ್ಗಳಿಗೆ ನುಗ್ಗಿದ ನೀರು
ಕೇವಲ ರಸ್ತೆಗಳಷ್ಟೇ ಅಲ್ಲದೆ, ನಗರದ ತಗ್ಗು ಪ್ರದೇಶಗಳು ಹಾಗೂ ಇಳಿಜಾರು ಪ್ರದೇಶಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹಗೊಂಡು ಜನಜೀವನ ತೊಂದರೆಗೆ ಸಿಲುಕಿದೆ. ಕೆಲವು ಬಡಾವಣೆಗಳ ಅಪಾರ್ಟ್ಮೆಂಟ್ಗಳ ಬೇಸ್ಮೆಂಟ್ಗಳಿಗೂ ಮಳೆನೀರು ನುಗ್ಗಿದ್ದು, ಪಾರ್ಕ್ ಮಾಡಲಾಗಿದ್ದ ವಾಹನಗಳು ಮುಳುಗಡೆಯಾಗಿವೆ. ಇದರಿಂದಾಗಿ ನಿವಾಸಿಗಳು ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಜಿಲ್ಲೆಗಳಲ್ಲೂ ವರುಣನ ಅಬ್ಬರ ಜೋರಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಮುಂದಿನ ಕೆಲವು ಗಂಟೆಗಳಲ್ಲಿ ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ, ವಿಜಯಪುರ, ಧಾರವಾಡ, ಮೈಸೂರು, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ವಾರದ ಆರಂಭದಲ್ಲೇ ಸುರಿದ ಈ ಧಾರಾಕಾರ ಮಳೆ ಬೆಂಗಳೂರಿಗರಿಗೆ ತಂಪೆರೆದಿದ್ದರೂ, ಸಂಚಾರ ದಟ್ಟಣೆ ಹಾಗೂ ರಸ್ತೆಗಳ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ದಿ. 18.05.2026 ಆರ್.ಟಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜಯಮಹಲ್ ಮುಖ್ಯರಸ್ತೆ ಸಿ.ಕ್ಯೂ.ಎ.ಎಲ್ ಕ್ರಾಸ್ ಬಳಿ ಮಳೆ ಬರುತ್ತಿರುವ ಕಾರಣ ವಾಟರ್ ಲಾಗಿಂಗ್ ಆಗಿದ್ದು ಸಂಚಾರ ನಿಧಾನಗತಿಯಲ್ಲಿರುತ್ತದೆ ಸಾರ್ವಜನಿಕರು ಸಹಕರಿಸಲು ಕೋರಿದೆ... pic.twitter.com/QtFq5idb6a
— R T NAGAR TRAFFIC BTP (@rtnagartraffic) May 18, 2026













Click it and Unblock the Notifications