ಭುವನೇಶ್ವರ್ ಕುಮಾರ್ ಬೌಲರ್ ಅಷ್ಟೇ ಅಲ್ಲ, ಸ್ಫೋಟಕ ಬ್ಯಾಟರ್ ಕೂಡ: ಡೇಲ್ ಸ್ಟೇನ್
RCB IPL 2026: ಧರ್ಮಶಾಲಾದಲ್ಲಿ ಭಾನುವಾರ (ಏಪ್ರಿಲ್ 17) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಇದರ ಬೆನ್ನಲ್ಲೇ ಮಾಜಿ ಆರ್ಸಿಬಿ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಅವರು ಸ್ವಿಂಗ್ ಕಿಂಗ್ ಭುವನೇಶರ್ ಕುಮಾರ್ ಕುರಿತು ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ಐಪಿಎಲ್ 2026ರಲ್ಲಿ ಭುವನೇಶ್ವರ್ ಕುಮಾರ್ ಅವರ ಅಮೋಘ ಸಾಧನೆಯ ಕುರಿತು ಆರ್ಸಿಬಿ ಮಾಜಿ ವೇಗಿ ಡೇಲ್ ಸ್ಟೇನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭುವನೇಶ್ವರ್ ಒಬ್ಬ ಹೆಚ್ಚು ಪ್ರಚಾರ ಪಡೆಯದ ಕ್ರಿಕೆಟಿಗ. ಅವರು ನೋಡಲು ಹೆಚ್ಚಾಗಿ ಸಂಭ್ರಮಾಚರಣೆ ಮಾಡದಿದ್ದರೂ ತಮ್ಮ ಕೆಲಸವನ್ನು ಅತ್ಯಂತ ನಿಖರವಾಗಿ ಮಾಡುತ್ತಾರೆ ಎಂದು ಬಣ್ಣಿಸಿದ್ದಾರೆ. ಇನ್ನು ಭುವಿ ಆಡಿದ 13 ಪಂದ್ಯಗಳಲ್ಲಿ 24 ವಿಕೆಟ್ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.

ಭುವಿಯನ್ನ ಮುಕ್ತಕಂಠದಿಂದ ಶ್ಲಾಘಿಸಿದ ಸ್ಟೇನ್
ಡೇಲ್ ಸ್ಟೇನ್ ಅವರು ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡುತ್ತಾ ಭುವನೇಶ್ವರ್ ಕುಮಾರ್ ಅವರ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. "ಸೀಸನ್ನ ಅಂತ್ಯದಲ್ಲಿ ನೀವು ಗಮನಿಸಿದರೆ, ಒಂದು ಕುತೂಹಲಕಾರಿ ವಿಷಯ ಕಾಣಿಸುತ್ತದೆ. ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ಗೆಲ್ಲಬಹುದು ಅಥವಾ ಗೆಲ್ಲದೇ ಇರಬಹುದು, ಆದರೆ ಅವರ ಪ್ರದರ್ಶನ ಅದ್ಭುತವಾಗಿದೆ," ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಭುವನೇಶರ್ ಬೌಲಿಂಗ್, ಬ್ಯಾಟಿಂಗ್ಗೆ ಮೆಚ್ಚುಗೆ
"ಒಂದು ವೇಳೆ ಈ ಬಾರಿ ಆರ್ಸಿಬಿ ಚಾಂಪಿಯನ್ ಪಟ್ಟಕ್ಕೇರಿದರೆ ತಂಡವು ಹಿಂತಿರುಗಿ ನೋಡಿದಾಗ ಈತನೇ ನಮ್ಮ ತಂಡದ ಅತ್ಯಮೂಲ್ಯ ಆಟಗಾರ ಎಂದು ಹೇಳುತ್ತದೆ. ಏಕೆಂದರೆ ಅವರು ಮೈದಾನದಲ್ಲಿ ನೀಡುವ ಅದ್ಭುತ ಪ್ರದರ್ಶನ ಅಸಾಧಾರಣವಾದುದು. ಪ್ರತಿಯೊಬ್ಬ ಆಟಗಾರನೂ ಇಂತಹ ಪ್ರದರ್ಶನ ನೀಡಲು ಬಯಸುತ್ತಾನೆ. ಮೈದಾನಕ್ಕಿಳಿದು ವಿಕೆಟ್ ಪಡೆಯುವುದು ಮತ್ತು ಬ್ಯಾಟಿಂಗ್ ಮಾಡುವಾಗ ಸಿಕ್ಸರ್ ಸಿಡಿಸಿ ತನ್ನ ತಂಡಕ್ಕೆ ಜಯ ತಂದುಕೊಡುವುದು ನಿಜಕ್ಕೂ ವಿಶೇಷ," ಎಂದು ಸ್ಟೇನ್ ಹೊಗಳಿದ್ದಾರೆ.
"ಹಮ್ಮು-ಬಿಮ್ಮು ಇಲ್ಲದ ಸರಳ ವ್ಯಕ್ತಿ ಭುವಿ"
"ಭುವನೇಶ್ವರ್ ಕುಮಾರ್ ಅವರು ನಿಜಕ್ಕೂ ಅದ್ಭುತ ಆಟಗಾರ. ಅವರು ಯಾವುದೇ ಹಮ್ಮು-ಬಿಮ್ಮು ಇಲ್ಲದ ಸರಳ ವ್ಯಕ್ತಿಯಾಗಿರುವುದರಿಂದ ಗಮನ ಸೆಳೆಯದೆ ಉಳಿದುಬಿಡುತ್ತಾರೆ ಎಂದು ನನಗನ್ನಿಸುತ್ತದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಸಕ್ರಿಯರಲ್ಲ. ಅವರ ದೃಷ್ಟಿ ಕೇವಲ ಮಾರಕ ಬೌಲಿಂಗ್ ದಾಳಿ ನಡೆಸುವುದ ಮೇಲೆ ಅದರಲ್ಲೂ ಸ್ವಿಂಗ್ ಮಾಡುವುದರಲ್ಲಿ ಎತ್ತಿದ ಕೈ," ಎಂದು ಬಣ್ಣಿಸಿದ್ದಾರೆ.
"ಅವರು ಫೀಲ್ಡಿಂಗ್ ಮಾಡುವಾಗ ಚೆಂಡನ್ನು ಹಿಡಿಯಲು ತಡಕಾಡುವುದಿಲ್ಲ. ಬ್ಯಾಟಿಂಗ್ ಮಾಡಲು ಬಂದಾಗಲೂ ಅವರು ತುಂಬಾ ಬುದ್ಧಿವಂತಿಕೆಯಿಂದ ಬ್ಯಾಟ್ ಬೀಸುತ್ತಾರೆ. ಅವರು ಒಬ್ಬ ಉತ್ತಮ ಬ್ಯಾಟರ್ ಕೂಡ ಹೌದು. ಆದರೆ ದೊಡ್ಡ ಸಿಕ್ಸರ್ಗಳನ್ನು ಹೊಡೆಯುವ ಆಟಗಾರನಲ್ಲ. ಸೂರ್ಯಕುಮಾರ್ ಯಾದವ್ ಅವರಂತೆ ಮೈದಾನದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಬಾರಿಸುವುದಿಲ್ಲ. ಅವರು ಕೆಳ ಕ್ರಮಾಂಕದ ಆಲ್ರೌಂಡರ್ ಆಗಿದ್ದು, ಪಂದ್ಯದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಬೌಲರ್ ಚೆಂಡನ್ನು ಎಲ್ಲಿ ಎಸೆಯಲಿದ್ದಾನೆ ಎಂಬುದನ್ನು ಮೊದಲೇ ಊಹಿಸಬಲ್ಲರು. ಇದು ಅವರೊಬ್ಬ ಬುದ್ಧಿವಂತ ಕ್ರಿಕೆಟಿಗ ಎಂಬುದನ್ನು ಸಾಬೀತುಪಡಿಸುತ್ತದೆ," ಎಂದು ಡೇಲ್ ಸ್ಟೇನ್ ಹೇಳಿದ್ದಾರೆ.
ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಭುವನೇಶ್ವರ್ ಕುಮಾರ್ ಹೊಸ ಚೆಂಡಿನೊಂದಿಗೆ ಪಂಜಾಬ್ ತಂಡದ ಅಪಾಯಕಾರಿ ಆರಂಭಿಕ ಜೋಡಿಯಾದ ಪ್ರಭ್ಸಿಮ್ರನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಅವರ ವಿಕೆಟ್ ಪಡೆದು ಮಿಂಚಿದರು. ಈ ಯಶಸ್ಸು ಅಂತಿಮವಾಗಿ ಹಾಲಿ ಚಾಂಪಿಯನ್ ಬೆಂಗಳೂರು ತಂಡವು 223 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದ್ದ ಪಂಜಾಬ್ ಕಿಂಗ್ಸ್ ತಂಡವನ್ನು 199ಕ್ಕೆ ನಿಯಂತ್ರಿಸಲು ಸಹಾಯ ಮಾಡಿತು. ಒಟ್ಟಿನಲ್ಲಿ ಆರ್ಸಿಬಿ ಮಾಜಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಬೌಲಿಂಗ್ ಬಗ್ಗೆ ಕೊಂಡಾಡಿ ಗಮನ ಸೆಳೆದಿದ್ದಾರೆ.












Click it and Unblock the Notifications