Kunal Shah: ಮನೆ ಸಾಲ ತೀರಿಸಲು ಡೆಲಿವರಿ ಬಾಯ್ ಆಗಿದ್ದವ ಈಗ ವಾಟ್ಸ್ ಆ್ಯಪ್ ಸಿಇಒ, ಕುನಾಲ್ ಶಾ ಹಿನ್ನೆಲೆ ಇದು
ಒಂದು ಕಾಲದಲ್ಲಿ ತಮ್ಮ ಕುಟುಂಬದ ಸಾಲ ತೀರಿಸಲು ಮನೆ ಮನೆಗೆ ತೆರಳಿ ಪಾರ್ಸೆಲ್ಗಳನ್ನು ತಲುಪಿಸುವ 'ಡೆಲಿವರಿ ಬಾಯ್' ಆಗಿ ಕೆಲಸ ಮಾಡುತ್ತಿದ್ದ ಕುನಾಲ್ ಶಾ, ಇಂದು ಜಾಗತಿಕ ತಂತ್ರಜ್ಞಾನ ಲೋಕದ ಅತಿದೊಡ್ಡ ಸಂಸ್ಥೆಯೊಂದರ ಸಾರಥಿಯಾಗಿ ಆಯ್ಕೆಯಾಗಿದ್ದಾರೆ. ಹೌದು, ಮೆಟಾ ಸಂಸ್ಥೆಯು ವಾಟ್ಸ್ ಆ್ಯಪ್ನ ಮುಂದಿನ ಜಾಗತಿಕ ಮುಖ್ಯಸ್ಥರಾಗಿ ಕುನಾಲ್ ಶಾ ಅವರನ್ನು ನೇಮಕ ಮಾಡಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಭಾರತೀಯ ಸ್ಟಾರ್ಟ್ಅಪ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಇಂದು ಕುನಾಲ್ ಶಾ... ಕೇವಲ ಒಂದು ಹೆಸರಲ್ಲ, ಛಲ ಮತ್ತು ಪರಿಶ್ರಮದ ಸಂಕೇತ ಎನ್ನಬಹುದು. ಏಕೆಂದರೆ 15ನೇ ವಯಸ್ಸಿನಲ್ಲಿ ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ನೀಗಿಸಲು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅಂದು ಕುನಾಲ್ ಶಾ ತಮ್ಮ ಬದುಕಿಗಾಗಿ ನಡೆಸಿದ ಹೋರಾಟ ಇಂದು ಪ್ರತಿಯೊಬ್ಬರಿಗೂ ಅತ್ಯಂತ ಸ್ಫೂರ್ತಿದಾಯಕವಾಗಿದೆ.

ಬಾಲ್ಯದ ಕಠಿಣ ದಿನಗಳು ಮತ್ತು ಸಂಘರ್ಷ
ಬಾಲ್ಯದಲ್ಲಿ ಕುನಾಲ್ ಶಾ ಅವರ ಜೀವನ ಅಷ್ಟು ಸುಲಭವಾಗಿರಲಿಲ್ಲ. ಅವರ ತಂದೆಯ ವ್ಯವಹಾರ ಲಾಸ್ ಆದಾಗ, ಕುಟುಂಬಕ್ಕೆ ಆಸರೆಯಾಗಲು ತಮ್ಮ 15ನೇ ವಯಸ್ಸಿನಲ್ಲಿಯೇ ಅವರು ಕೆಲಸಕ್ಕೆ ಇಳಿದರು. ಮನೆ ಸಾಲ ತೀರಿಸಲು ಮತ್ತು ದೈನಂದಿನ ಖರ್ಚುಗಳನ್ನು ನಿಭಾಯಿಸಲು ಅವರು ಡೆಲಿವರಿ ಬಾಯ್ ಆಗಿ ಕೆಲಸ ಆರಂಭಿಸಿದರು. ಬರಿ ಡೆಲಿವರಿ ಬಾಯ್ ಮಾತ್ರವಲ್ಲ, ಡೇಟಾ ಎಂಟ್ರಿ ಆಪರೇಟರ್ ಆಗಿ, ಡಿಸೈನ್ ಕ್ಷೇತ್ರದಲ್ಲಿ ಫ್ರೀಲಾನ್ಸರ್ ಆಗಿ ಹೀಗೆ ಸಿಕ್ಕಸಿಕ್ಕ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಹಣ ಸಂಪಾದಿಸಲು ಶುರುಮಾಡಿದರು.
ಬದುಕಿನ ಅತ್ಯಂತ ಕಷ್ಟದ ದಿನಗಳಲ್ಲಿ ಅವರು ಕಲಿತ ಜೀವನಪಾಠಗಳೇ ಅವರ ಮುಂದಿನ ದೊಡ್ಡ ಸಾಧನೆಗಳಿಗೆ ಬಲವಾದ ಬುನಾದಿಯಾದವು.
ಕುನಾಲ್ ಶಾ ಜೀವನ ಚರಿತ್ರೆ
ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಕಾಲೇಜು ಮೆಟ್ಟಿಲೇರುತ್ತಾರೆ. ಆದರೆ ಕುನಾಲ್ ಶಾ ಅವರ ಕಾಲೇಜು ಆಯ್ಕೆಯ ಹಿಂದೆ ಯಾವುದೇ ವಿಶೇಷ ಪ್ಯಾಶನ್ ಅಥವಾ ಆಸಕ್ತಿ ಇರಲಿಲ್ಲ. ಅವರು ಪದವಿಯಲ್ಲಿ 'ಫಿಲಾಸಫಿ' (ತತ್ವಶಾಸ್ತ್ರ) ವಿಷಯವನ್ನು ಆಯ್ಕೆ ಮಾಡಿಕೊಂಡರು.
ಇದಕ್ಕೆ ಕಾರಣ ತತ್ವಶಾಸ್ತ್ರದ ಮೇಲಿನ ಪ್ರೀತಿಯಲ್ಲ, ಬದಲಾಗಿ ಆ ತರಗತಿಗಳು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಮಾತ್ರ ನಡೆಯುತ್ತಿದ್ದವು! ಉಳಿದ ಇಡೀ ದಿನ ಕೆಲಸ ಮಾಡಲು, ಹಣ ಗಳಿಸಲು ಅವರಿಗೆ ಸಾಕಷ್ಟು ಸಮಯ ಸಿಗುತ್ತಿತ್ತು. ಪದವಿಯ ನಂತರ ಉನ್ನತ ವ್ಯಾಸಂಗಕ್ಕಾಗಿ ಎಂಬಿಎ ಕೋರ್ಸ್ಗೆ ಸೇರಿಕೊಂಡರಾದರೂ, ಅದನ್ನು ಮಧ್ಯದಲ್ಲೇ ಬಿಟ್ಟರು. ಆದರೆ, ಹೊಸದನ್ನು ಕಲಿಯುವ ಮತ್ತು ಹೊಸತೇನನ್ನಾದರೂ ಕಟ್ಟುವ ಅವರ ತುಡಿತ ಮಾತ್ರ ಎಂದಿಗೂ ನಿಂತಿರಲಿಲ್ಲ.
ಉದ್ಯಮಶೀಲತೆಯತ್ತ ಪಯಣ
ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟರೂ, ತಮ್ಮ ಉದ್ಯಮಶೀಲತೆಯ ಕನಸುಗಳನ್ನು ಅವರು ಕೈಬಿಡಲಿಲ್ಲ. ತಮ್ಮ ನಿರಂತರ ಪ್ರಯತ್ನ ಮತ್ತು ವಿಶಿಷ್ಟ ಐಡಿಯಾಗಳ ಮೂಲಕ ಉದ್ಯಮ ರಂಗಕ್ಕೆ ಕಾಲಿಟ್ಟರು. ಅವರ ಈ ಪರಿಶ್ರಮವೇ 'ಫ್ರೀಚಾರ್ಜ್' ಎಂಬ ಯಶಸ್ವಿ ಸ್ಟಾರ್ಟ್ಅಪ್ ಹುಟ್ಟಿಗೆ ಕಾರಣವಾಯಿತು.
ಬಳಿಕ ಅವರು ಭಾರತದ ಅತಿ ಪ್ರಭಾವಶಾಲಿ ಫಿನ್ಟೆಕ್ ಕಂಪನಿಗಳಲ್ಲಿ ಒಂದಾದ 'ಕ್ರೆಡ್' ಅನ್ನು ಸ್ಥಾಪಿಸಿದರು. ಕೇವಲ ಕೆಲವೇ ವರ್ಷಗಳಲ್ಲಿ, ಕ್ರೆಡ್ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಅಚ್ಚುಮೆಚ್ಚಿನ ಪ್ಲಾಟ್ಫಾರ್ಮ್ ಆಗಿ ದೊಡ್ಡದಾಗಿ ಬೆಳೆದು ನಿಂತಿತು.
ಕ್ರೆಡ್ನಲ್ಲಿ ಮೆಟಾ ಹೂಡಿಕೆ ಮತ್ತು ಜಾಗತಿಕ ವಾಟ್ಸ್ ಆ್ಯಪ್ ಸಿಇಒ ಆಗಿ ನೇಮಕ
ಕ್ರೆಡ್ ಕಂಪನಿಯ ಯಶಸ್ಸು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಜಾಗತಿಕ ಮಟ್ಟದಲ್ಲೂ ತೀವ್ರ ಸದ್ದು ಮಾಡಿತು. ಇದೀಗ ಜಾಗತಿಕ ಟೆಕ್ ದೈತ್ಯ ಮಾರ್ಕ್ ಜುಕರ್ಬರ್ಗ್ ನೇತೃತ್ವದ ಮೆಟಾ ಸಂಸ್ಥೆಯು, ಕ್ರೆಡ್ನಲ್ಲಿ ಬರೋಬ್ಬರಿ 900 ಮಿಲಿಯನ್ ಡಾಲರ್ (ಅಂದಾಜು 7,500 ಕೋಟಿ ರೂ.) ಹೂಡಿಕೆ ಮಾಡಿದೆ.
ಈ ಒಪ್ಪಂದದ ಭಾಗವಾಗಿ, ಕುನಾಲ್ ಶಾ ಅವರು ಕ್ರೆಡ್ನ ಸಿಇಒ ಹುದ್ದೆಯಿಂದ ಕೆಳಗಿಳಿದು, ವಾಟ್ಸ್ ಆ್ಯಪ್ನ ಜಾಗತಿಕ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ವಾಟ್ಸ್ ಆ್ಯಪ್ನ ನಿರ್ಗಮನ ಮುಖ್ಯಸ್ಥ ವಿಲ್ ಕ್ಯಾಥಕಾರ್ಟ್ ಅವರ ನಂತರದ ಸ್ಥಾನವನ್ನು ಕುನಾಲ್ ಶಾ ತುಂಬಲಿದ್ದಾರೆ.
ವಿಶ್ವದಾದ್ಯಂತ 300 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ ಆ್ಯಪ್ನಲ್ಲಿ, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ವಾಣಿಜ್ಯ ವ್ಯವಹಾರಗಳನ್ನು ಉತ್ತೇಜಿಸುವ ಜವಾಬ್ದಾರಿ ಕುನಾಲ್ ಶಾ ಅವರ ಹೆಗಲ ಮೇಲಿದೆ.
ಒಂದು ಕಾಲದಲ್ಲಿ ಬದುಕಿಗಾಗಿ ಪಾರ್ಸೆಲ್ ಡೆಲಿವರಿ ಮಾಡುತ್ತಿದ್ದ ಕೈಗಳು, ಇಂದು ವಿಶ್ವಾದ್ಯಂತ ಕೋಟ್ಯಂತರ ಜನರ ಮೊಬೈಲ್ನಲ್ಲಿರುವ ವಾಟ್ಸ್ ಆ್ಯಪ್ನ ಭವಿಷ್ಯವನ್ನು ಬರೆಯಲಿವೆ. ಕುನಾಲ್ ಶಾ ಅವರ ಈ ಕಠಿಣ ಪಯಣ, ಸತತ ಪ್ರಯತ್ನವಿದ್ದರೆ ಎಂತಹ ದೊಡ್ಡ ಕನಸನ್ನಾದರೂ ನನಸು ಮಾಡಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.














Click it and Unblock the Notifications