ದಕ್ಷಿಣ ರೈಲ್ವೆಗೆ ಕೋಟಿ ಕೋಟಿ ಆದಾಯ ತಂದ ವಂದೇ ಭಾರತ್, ಅಗ್ರಸ್ಥಾನದಲ್ಲಿ ಮಂಗಳೂರು–ತಿರುವನಂತಪುರಂ ರೈಲು!
ಭಾರತೀಯ ರೈಲ್ವೆಯ ಅತ್ಯಾಧುನಿಕ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಪ್ರಯಾಣಿಕರಿಂದ ಭಾರೀ ಮೆಚ್ಚುಗೆ ಪಡೆಯುತ್ತಿವೆ. ಅದರಲ್ಲೂ ಮಂಗಳೂರು-ತಿರುವನಂತಪುರಂ ವಂದೇ ಭಾರತ್ ರೈಲು ದಕ್ಷಿಣ ರೈಲ್ವೆಯ ವಂದೇ ಭಾರತ್ ಸೇವೆಗಳ ಪೈಕಿ ಅತಿ ಹೆಚ್ಚು ಆದಾಯ ತಂದುಕೊಟ್ಟ ರೈಲು ಎಂದು ಹೇಳಲಾಗಿದೆ.
ಮಂಗಳೂರು-ತಿರುವನಂತಪುರಂ ವಂದೇ ಭಾರತ್ ರೈಲು 2025ರ ಆಗಸ್ಟ್ನಿಂದ ಅಕ್ಟೋಬರ್ ಅವಧಿಯಲ್ಲಿ 73.35 ಲಕ್ಷ ಭರ್ಜರಿ ಆದಾಯ ಗಳಿಸಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ಈ ಮೂಲಕ ಈ ಪ್ರಮುಖ ರೈಲ್ವೆ ಮಾರ್ಗದ ಜನಪ್ರಿಯತೆ ಹಾಗೂ ಪ್ರಯಾಣಿಕರ ದಟ್ಟಣೆ ಮತ್ತೊಮ್ಮೆ ಸ್ಪಷ್ಟವಾಗಿ ಸಾಬೀತಾದಂತಾಗಿದೆ.

ದಕ್ಷಿಣ ರೈಲ್ವೆಯ ವಂದೇ ಭಾರತ್ ಸಾಧನೆ: ಪ್ರಯಾಣಿಕರ ಸಂಖ್ಯೆ, ಆದಾಯದಲ್ಲಿ ಭಾರಿ ಏರಿಕೆ!
ದಾಖಲೆಯ ಪ್ರಯಾಣಿಕರು: 2025-26ನೇ ಹಣಕಾಸು ವರ್ಷದಲ್ಲಿ ದಕ್ಷಿಣ ರೈಲ್ವೆ ವ್ಯಾಪ್ತಿಯ 24 ವಂದೇ ಭಾರತ್ ರೈಲುಗಳಲ್ಲಿ ಬರೋಬ್ಬರಿ 77.38 ಲಕ್ಷ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.
ಕೋಟಿ ಕೋಟಿ ಆದಾಯ: ಈ ಭಾರಿ ಜನಪ್ರಿಯತೆಯಿಂದಾಗಿ ರೈಲ್ವೆ ಇಲಾಖೆಗೆ 803.86 ಕೋಟಿ ಆದಾಯ ಹೆಚ್ಚಾಗಿದೆ.
ಹಿಂದಿನ ವರ್ಷದ ಸಾಧನೆ: ಇದೇ ಅವಧಿಯ ಕಳೆದ ಹಣಕಾಸು ವರ್ಷದಲ್ಲಿ 54.12 ಲಕ್ಷ ಪ್ರಯಾಣಿಕರು ವಂದೇ ಭಾರತ್ ಬಳಸಿದ್ದು, 540.65 ಕೋಟಿ ಆದಾಯ ಗಳಿಕೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷದ ಬೆಳವಣಿಗೆಯು ದಕ್ಷಿಣ ಭಾರತದಲ್ಲಿ ರೈಲಿನ ಯಶಸ್ಸನ್ನು ಹೇಳುತ್ತದೆ.
ಕೊನೆಯ ಕ್ಷಣದ ಟಿಕೆಟ್ ಬುಕ್ಕಿಂಗ್ ಯಶಸ್ವಿ: ಶೇ. 80 ರಷ್ಟು ಹೆಚ್ಚಿದ ಪ್ರಯಾಣಿಕರು
ರೈಲು ಹೊರಡುವ ಕೇವಲ 15 ನಿಮಿಷಗಳ ಮೊದಲು ಟಿಕೆಟ್ ಬುಕ್ ಮಾಡುವ ಭಾರತೀಯ ರೈಲ್ವೆಯ ಪ್ರಾಯೋಗಿಕ ಯೋಜನೆಗೆ ಭಾರಿ ಯಶಸ್ಸು ಸಿಕ್ಕಿದೆ. 2025ರ ಆಗಸ್ಟ್ನಿಂದ ಅಕ್ಟೋಬರ್ವರೆಗಿನ ಮೂರು ತಿಂಗಳ ಅವಧಿಯಲ್ಲಿ ಎಂಟು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಲ್ಲಿ ಈ ಸೌಲಭ್ಯವನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು. ಇದರ ಪರಿಣಾಮವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 80 ರಷ್ಟು ದಾಖಲೆಯ ಪ್ರಗತಿ ಕಂಡುಬಂದಿದ್ದು, ಕೊನೆಯ ಕ್ಷಣದಲ್ಲಿ ಪ್ರಯಾಣದ ಯೋಜನೆ ರೂಪಿಸುವ ನೂರಾರು ಜನರಿಗೆ ಇದು ಅತ್ಯಂತ ಸಹಕಾರಿಯಾಗಿದೆ.
ರೈಲ್ವೆ ಇಲಾಖೆಯ ಹೊಸ ಮಾಸ್ಟರ್ ಪ್ಲಾನ್; ಖಾಲಿ ಸೀಟುಗಳ ಭರ್ತಿಯೊಂದಿಗೆ ಆದಾಯವೂ ಡಬಲ್!
ರೈಲ್ವೆ ಇಲಾಖೆ ತಂದಿರುವ ಈ ಹೊಸ ಸುಧಾರಿತ ವ್ಯವಸ್ಥೆಯು ರೈಲುಗಳಲ್ಲಿ ಖಾಲಿ ಉಳಿಯುತ್ತಿದ್ದ ಆಸನಗಳಿಗೆ ಹೊಸ ಪ್ರಯಾಣಿಕರನ್ನು ತಂದುಕೊಟ್ಟಿದೆ. ರೈಲು ನಿಗದಿತ ನಿಲ್ದಾಣದಿಂದ ಹೊರಡುವ ಕೊನೆಯ ನಿಮಿಷದವರೆಗೂ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಿರುವುದರಿಂದ, ಆಸನ ಭರ್ತಿ ಪ್ರಮಾಣ (Occupancy Rate) ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದು ಕೊನೆಯ ಕ್ಷಣದಲ್ಲಿ ಪ್ರಯಾಣಿಸುವ ಜನರಿಗೆ ನೆರವಾಗುವುದರ ಜೊತೆಗೆ, ರೈಲ್ವೆ ಇಲಾಖೆಯ ಆರ್ಥಿಕ ಆದಾಯವನ್ನು ಹೆಚ್ಚಿಸುವಲ್ಲಿಯೂ ಭಾರಿ ಯಶಸ್ಸು ಕಂಡಿದೆ.
ಈಗ 17 ವಂದೇ ಭಾರತ್ ರೈಲುಗಳಿಗೆ ವಿಸ್ತರಣೆ
ಪೈಲಟ್ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ, 15 ನಿಮಿಷಗಳ ಮೊದಲು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಈಗ 17 ವಂದೇ ಭಾರತ್ ರೈಲುಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಹೆಚ್ಚಿನ ಪ್ರಯಾಣಿಕರು ತುರ್ತು ಸಂದರ್ಭದಲ್ಲಿಯೂ ಸುಲಭವಾಗಿ ಟಿಕೆಟ್ ಪಡೆಯುವ ಅವಕಾಶ ಸಿಗಲಿದೆ.
ವಂದೇ ಭಾರತ್ ಸ್ಲೀಪರ್ ರೈಲುಗಳಿಗೆ ಸಿದ್ಧತೆ
ಬೆಂಗಳೂರು, ದೆಹಲಿ ಹಾಗೂ ಮುಂಬೈ ಸೇರಿದಂತೆ ಪ್ರಮುಖ ನಗರಗಳ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲುಗಳ ಸೇವೆ ಆರಂಭವಾಗಲಿದೆ. ಇದು ದೂರದ ಊರುಗಳ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವೇಗದ ರಾತ್ರಿ ಪ್ರಯಾಣದ ಹೊಸ ಅನುಭವ ನೀಡಲಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಂದೇ ಭಾರತ್ ರೈಲುಗಳ ಜನಪ್ರಿಯತೆಯು, ಭಾರತೀಯ ರೈಲ್ವೆಯ ಡಿಜಿಟಲ್ ಹಾಗೂ ಮೂಲಸೌಕರ್ಯ ಆಧುನೀಕರಣದ ಕನಸಿಗೆ ಮತ್ತಷ್ಟು ಬಲ ತಂದಿದೆ.














Click it and Unblock the Notifications