ಜೂನ್ 15ರಿಂದ ಕೇರಳದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಸಿಎಂ ವಿ.ಡಿ.ಸತೀಶನ್ ಆದೇಶ
ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ. ಸತೀಶನ್ ನೇತೃತ್ವದ ಯುಡಿಎಫ್ (UDF) ಸರ್ಕಾರವು ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲೇ ಪ್ರಮುಖ ಜನಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದೆ. ಮಹಿಳೆಯರಿಗೆ ಕೆಎಸ್ಆರ್ಟಿಸಿ (KSRTC) ಬಸ್ಗಳಲ್ಲಿ ಉಚಿತ ಪ್ರಯಾಣ, ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಹಾಗೂ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆ ಸ್ಥಾಪನೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಜೂನ್ 15ರಿಂದ ಉಚಿತ ಬಸ್ ಪ್ರಯಾಣ
ರಾಜ್ಯದ ಮಹಿಳೆಯರಿಗೆ ಜೂನ್ 15ರಿಂದ ಜಾರಿಗೆ ಬರುವಂತೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು. ಈ ಯೋಜನೆಗೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಸಚಿವಾಲಯದ ಎದುರು ಸುದೀರ್ಘ ಪ್ರತಿಭಟನೆ ನಡೆಸಿದ್ದ ಆಶಾ ಕಾರ್ಯಕರ್ತೆಯರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದ್ದು, ಅವರ ಮಾಸಿಕ ಗೌರವಧನವನ್ನು ₹3,000 ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಶಾಲಾ ಅಡುಗೆ ಸಿಬ್ಬಂದಿ, ಪ್ರೀ-ಪ್ರೈಮರಿ ಶಿಕ್ಷಕರು ಹಾಗೂ ಆಯಾಗಳ ಮಾಸಿಕ ಗೌರವಧನದಲ್ಲೂ ₹1,000 ಹೆಚ್ಚಳ ಮಾಡಲಾಗಿದೆ.

ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಇಲಾಖೆ
ಹಿರಿಯ ನಾಗರಿಕರ ಘನತೆ ಮತ್ತು ಆರೈಕೆಯನ್ನು ಖಾತರಿಪಡಿಸಲು ಸರ್ಕಾರವು ಪ್ರತ್ಯೇಕ ಇಲಾಖೆಯನ್ನು ರಚಿಸಲು ನಿರ್ಧರಿಸಿದೆ. "ಒಂದು ಸಮಾಜವು ತನ್ನ ಹಿರಿಯ ನಾಗರಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ ಆ ಸಮಾಜದ ಗುಣಮಟ್ಟ ನಿರ್ಧಾರವಾಗುತ್ತದೆ. ಹಿರಿಯರ ಘನತೆಯುತ ಆರೈಕೆಯನ್ನು ಖಚಿತಪಡಿಸುವ ಮೂಲಕ ಕೇರಳ ದೇಶಕ್ಕೇ ಮಾದರಿಯಾಗಬೇಕು ಎಂದು ಸಿಎಂ ಆಶಯ ವ್ಯಕ್ತಪಡಿಸಿದರು. ಇದು ದೇಶದ ಮೊದಲ ಪ್ರಯತ್ನ ಎಂದು ಹೇಳಿದರು.
2023ರ 'ನವ ಕೇರಳ ಯಾತ್ರೆ' ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಮುಖಂಡರ ಮೇಲೆ ಆಲಪ್ಪುಳದಲ್ಲಿ ನಡೆದಿದ್ದ ದಾಳಿ ಪ್ರಕರಣದ ಮರುತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಸಂಪುಟ ನಿರ್ಧರಿಸಿದೆ. ಈ ಪ್ರಕರಣದ ಮರುತನಿಖೆಗೆ 2024ರ ನವೆಂಬರ್ 8ರಂದೇ ಆಲಪ್ಪುಳ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತಾದರೂ, ಹಿಂದಿನ ಸರ್ಕಾರ ಕಳೆದ ಒಂದೂವರೆ ವರ್ಷಗಳಿಂದ ಅದನ್ನು ಜಾರಿಗೊಳಿಸಲು ವಿಫಲವಾಗಿತ್ತು ಎಂದು ಸತೀಶನ್ ಆರೋಪಿಸಿದರು.
ಇನ್ನು ಹಿರಿಯ ಶಾಸಕ ಜಿ. ಸುಧಾಕರನ್ ಅವರನ್ನು ಪ್ರೊ-ಟರ್ಮ್ ಸ್ಪೀಕರ್ ಆಗಿ ನೇಮಿಸಲು ಸಂಪುಟ ಶಿಫಾರಸು ಮಾಡಿದೆ. ಹೊಸ ಶಾಸಕರ ಪ್ರಮಾಣ ವಚನ ಮತ್ತು ಸ್ಪೀಕರ್ ಚುನಾವಣೆಗಾಗಿ ವಿಧಾನಸಭಾ ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಮೇ 21ರಂದು ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದು, ಮೇ 22ರಂದು ಸ್ಪೀಕರ್ ಚುನಾವಣೆ ನಡೆಯಲಿದೆ. ಹಿರಿಯ ನ್ಯಾಯವಾದಿ ರಾಜೀವ್ ಬಾಬು ಅವರನ್ನು ನೂತನ ಅಡ್ವೊಕೇಟ್ ಜನರಲ್ (AG) ಆಗಿ ಮತ್ತು ನ್ಯಾಯವಾದಿ ಟಿ.ಎಸ್. ಅಸಫ್ ಅಲಿ ಅವರನ್ನು ಪ್ರಾಸಿಕ್ಯೂಷನ್ ಡೈರೆಕ್ಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ.













Click it and Unblock the Notifications