ಮುತ್ತಪ್ಪ ರೈ ಅಂತ್ಯಸಂಸ್ಕಾರಕ್ಕೆ ಬಿಡದಿ ನಿವಾಸದ ಬಳಿ ಸಿದ್ಧತೆ
ರಾಮನಗರ, ಮೇ 15: ಜಯ ಕರ್ನಾಟಕ ಸಂಘಟನೆಯ ಸ್ಥಾಪಕ, ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ (68) ಇಂದು ಬೆಳಗ್ಗಿನ ಜಾವ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ 4 ಗಂಟೆಗೆ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಸ್ವಗ್ರಾಮದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಬಿಡದಿಯ ನಿವಾಸದಲ್ಲಿ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದ್ದು, ಮುತ್ತಪ್ಪ ರೈ ಅವರ ನಿವಾಸಕ್ಕೆ ಹೋಗುವ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಮನೆಯಿಂದ 2 ಕಿ.ಮಿ ದೂರದಲ್ಲೇ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ.
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ ನಿಧನ
ರೈ ಅವರು ವಾಸ ಮಾಡುತ್ತಿದ್ದ ಬಿಡದಿ ಮನೆಯ ಪಕ್ಕದಲ್ಲೇ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಬಂಟ ಸಮುದಾಯದ ಸಂಪ್ರದಾಯಂತೆ ಅಂತ್ಯಸಂಸ್ಕಾರ ನೆರವೇರಲಿದೆ. ರೈ ಅವರ ಹಿರಿಯ ಮಗ ರಿಕ್ಕಿ ವಿಧಿ ವಿಧಾನ ಕಾರ್ಯ ನೆರವೇರಿಸುವರು.
ಕಳೆದ ಎರಡು ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮುತ್ತಪ್ಪ ರೈ ಒಂದು ವಾರದ ಹಿಂದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊರೊನಾ ಭೀತಿ ಇರುವ ಹಿನ್ನೆಲೆ ಕೇವಲ ಕುಟುಂಬಸ್ಥರಿಗೆ ಮಾತ್ರ ಅಂತ್ಯಕ್ರಿಯೆ ಭಾಗಿಯಾಗಲು ಅವಕಾಶ ನೀಡಲಾಗಿದೆ.