ಸಿಟಿ ರವಿ ಕಾರು ಅಪಘಾತ ಪ್ರಕರಣ, ಮೃತರ ಕುಟುಂಬದವರು ಹೇಳಿದ್ದೇನು?
ರಾಮನಗರ, ಫೆಬ್ರವರಿ 19: ''ಅವರೆಲ್ಲ ದೊಡ್ಡವರು ಸ್ವಾಮಿ, ನಮಗೆಲ್ಲಿ ನ್ಯಾಯ ಸಿಗುತ್ತೆ ಹೇಳಿ''ಎಂದು ಹೇಳುತ್ತಾ ಮೃತ ಶಶಿಕುಮಾರ್ ಅವರ ತಂದೆ ಜಯರಾಮ್ ಭಾವುಕರಾದರು.
ಬಿಜೆಪಿ ಶಾಸಕ ಸಿಟಿ ರವಿ ಅವರಿದ್ದ ಕಾರು ರಸ್ತೆಯಲ್ಲಿ ನಿಂತಿದ್ದ ಎರಡು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತರಾದ ದುರ್ಘಟನೆ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ ಅದರಲ್ಲಿ ಶಶಿಕುಮಾರ್, ಸುನಿಲ್ ಎಂಬುವವರು ಮೃತಪಟ್ಟಿದ್ದರು.
ಮಗನ ಸಾವಿನ ನೋವಿನಲ್ಲಿಯೇ ಪ್ರತಿಕ್ರಿಯೆ ನೀಡಿರುವ ತಂದೆ ನಮ್ಮಂಥವರಿಗೆಲ್ಲ ಎಲ್ಲಿ ನ್ಯಾಯ ಸಿಗುತ್ತೆ, ಕಾರು ಬಂದು ಮಕ್ಕಳಿಗೆ ಗುದ್ದಿದಾಗ ಅವರಿಗಿನ್ನು ಜೀವ ಇತ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಪ್ರಾಣ ಉಳಿಯುತ್ತಿತ್ತೇನೋ ಆದರೆ ಆ ಕೆಲಸವನ್ನು ಅವರು ಮಾಡಿಲ್ಲ.

ಶಶಿಕುಮಾರ್ ಅತ್ತಿಬೆಲೆಯಲ್ಲಿ ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದ, ಬೈಕ್ ಬೇಕೇ ಬೇಕು ಎಂದಿದ್ದಕ್ಕೆ ಸ್ವಲ್ಪ ಸಿನಗಳ ಹಿಂದೆ ಬೈಕ್ ಕೊಡ್ಸಿದ್ದೆ, ಆದರೆ ಇಷ್ಟು ಬೇಗ ಮಗ ಈ ರೀತಿ ಕಳೆದು ಹೋಗ್ತಾನೆ ಅಂದುಕೊಂಡಿರಲಿಲ್ಲ, ನಮಗೆ ಇನ್ಯಾರು ಆಸರೆ ತಂದೆಯೇ ಎದುರೇ ಮಗನ ಸಾವು ನೋಡುವ ಪರಿಸ್ಥಿತಿ ಬಂದುಬಿಡ್ತು ಎಂದು ಕಣ್ಣೀರ ಕೋಡಿಯನ್ನೇ ಹರಿಸುತ್ತಿದ್ದಾರೆ.
ನನ್ನ ಮಗನನ್ನು ವಾಪಸ್ ಕೊಡಿಸಿ, ಆತನಿಗೆ ಮದುವೆ ಮಾಡಬೇಕು ಎನ್ನುವ ಆಸೆ ಇತ್ತು, ಕಷ್ಟಪಟ್ಟು ಬೆಳೆಸಿದ ಮಗ ಹೋದಮೇಲೆ ಇನ್ಯಾವ ಸಂಪತ್ತಿಗಾಗಿ ನಾನು ಬದುಕಿರಲಿ ಎಂದು ಗೋಳಾಡುತ್ತಿದ್ದಾರೆ.
ಕುಣಿಗಲ್ ಠಾಣೆಯಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ಸಭೆ ಆರಂಭವಾಗಿದೆ. ಕುಣಿಗಲ್ ಅಪಘಾತದ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದಾರೆ. ಆದರೆ ನೀಡಿರುವ ದೂರಿನಲ್ಲಿ ಚಾಲಕನ ಅಜಾಗರೂಕತಯಿಂದ ಘಟನೆ ನಡೆದಿದೆ, ಕಾರಿನ ಸಂಖ್ಯೆ ಹಾಗೂ ಚಾಲಕನ ಹೆಸರು ಬಿಟ್ಟು ಎಲ್ಲಿಯೂ ಸಿಟಿ ರವಿ ಹೆಸರು ಪ್ರಸ್ತಾಪವಾಗದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.












Click it and Unblock the Notifications