ನಮ್ಮ ಗ್ಯಾರಂಟಿ ಯೋಜನೆಗಳಿಗೆ ಮುದ್ರೆ ಒತ್ತುವ ದಿನ ಇದು: ಡಿ.ಕೆ.ಶಿವಕುಮಾರ್
ರಾಮನಗರ, ಮೇ, 10: ರಾಜ್ಯ ವಿಧಾನಸಭೆ ಚುನವಾಣೆಯ ಮತದಾನ ಬಿರುಸಿನಿಂದ ಸಾಗಿದ್ದು, ಕನಕಪುರ ತಾಲೂಕಿನ ದೊಡ್ಡಾಲನಹಳ್ಳಿಯಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಮತದಾನ ಮಾಡಿದರು. ಬಳಿಕ ಮಾತನಾಡಿದ ಡಿ.ಕೆ.ಶಿ, ನಮ್ಮ ಗ್ಯಾರಂಟಿ ಯೋಜನೆಗಳಿಗೆ ಮುದ್ರೆ ಒತ್ತುವ ದಿನ ಇದು ಎಂದರು.
ಕುಟುಂಬ ಸಮೇತ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರು ಸರತಿ ಸಾಲಿನಲ್ಲಿ ನಿಂತು ಮತಗಟ್ಟೆ ಸಂಖ್ಯೆ 245ರಲ್ಲಿ ಮತ ಚಲಾವಣೆ ಮಾಡಿದರು. ಅಲ್ಲದೆ. ಪತ್ನಿ ಉಷಾ ಶಿವಕುಮಾರ್, ಪುತ್ರ ಆಕಾಶ್ ಕೆಂಪೇಗೌಡ, ಸಹೋದರರ ಡಿ.ಕೆ.ಸುರೇಶ್ ಅವರು ಮತಯಾಚನೆ ಮಾಡಿದರು.

ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕೆಂಕೇರಮ್ಮ ದೇವಿ ನಮ್ಮ ಮನೆ ದೇವರು. ನಾಮಪತ್ರ ಸಲ್ಲಿಕೆ ಮುನ್ನ ನಾವು ಇಲ್ಲಿ ಪೂಜೆ ಸಲ್ಲಿಸಿದ್ದೆವು. ಈಗ ಮತದಾನ ಮುನ್ನ ಪೂಜೆ ಸಲ್ಲಿಸುತ್ತಿದ್ದೇವೆ. ಇಲ್ಲಿಂದ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ನಂತರ ಮತದಾನ ಮಾಡುತ್ತಿದ್ದೇವೆ ಎಂದರು.
ಎಲ್ಲಾ ಬೂತ್ ಬಳಿ ಖಾಲಿ ಅಡುಗೆ ಅನಿಲ ಸಿಲಿಂಡರ್ ಇಟ್ಟು ಪೂಜೆ ಮಾಡಿ ಮತದಾನ ಮಾಡುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದ್ದೇನೆ. ಪ್ರಧಾನಿ ಅವರ ಮಾರ್ಗದರ್ಶನದಂತೆ ಈ ಸೂಚನೆ ನೀಡಿದ್ದೇನೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವು ನೀಡಲು ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ. ಇಂದು ರಾಜ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ದಿನ, ನಮ್ಮ ಭವಿಷ್ಯ ನಾವೇ ಬರೆದುಕೊಳ್ಳುವ ದಿನ, ನಮ್ಮ ಗ್ಯಾರಂಟಿ ಯೋಜನೆಗಳಿಗೆ ಮುದ್ರೆ ಒತ್ತುವ ದಿನ ಎಂದರು.
ನನ್ನ ಪುತ್ರ ಹಾಗೂ ಪುತ್ರಿ ಇಬ್ಬರೂ ಈ ಬಾರಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದಾರೆ. ಹೊಸ ಮತದಾರರಿಗೆ ಮತದಾನ ಮಾಡುವ ಉರುಪು ಇರುತ್ತದೆ. ರಾಜ್ಯದ ಎಲ್ಲಾ ಯುವ ಮತದಾರರಿಗೆ ಶುಭ ಕೋರಿ, ರಾಜ್ಯಕ್ಕೆ ದೊಡ್ಡ ಬದಲಾವಣೆ ತರುವ ಜವಾಬ್ದಾರಿ ಇದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವಂತೆ ಸಲಹೆ ನೀಡುತ್ತೇನೆ ಎಂದರು.
ಅಲ್ಲದೆ ಯುವ ಮತದಾರರು ಪ್ರಜ್ಞಾವಂತರಾಗಿದ್ದು, ಈ ದುರಾಡಳಿತವನ್ನು ಕೊನೆಗಾಣಿಸುತ್ತಾರೆ ಎಂದು ಭಾವಿಸಿದ್ದೇನೆ. ಈ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ರಾಜೀವ್ ಗಾಂಧಿ ಅವರು. ಈ ಯುವ ಮತದಾರರು ಪ್ರಜಾಪ್ರಭುತ್ವದ ಆಚರಣೆ ಮಾಡಲಿ ಎಂದು ಕರೆ ನೀಡಿದರು.
ಸಚಿವ ಅಶೋಕ್ ನಿಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದು, ಎಷ್ಟು ಅಂತರದಿಂದ ಗೆಲುವು ಸಾಧಿಸುತ್ತೀರಿ ಎಂದು ಕೇಳಿದಾಗ, 'ಅಶೋಕ್ ಅವರು, ಮುಖ್ಯಮಂತ್ರಿಗಳು ಇಲ್ಲಿ ಬಂದು ಪ್ರಚಾರ ಮಾಡಿದ್ದಾರೆ. ಇದು ಗುಪ್ತ ಮತದಾನ, ಯಾರು ಗೆಲ್ಲುತ್ತಾರೆ ಎಂದು 13ರಂದು ನೋಡೋಣ' ಎಂದು ತಿಳಿಸಿದರು.












Click it and Unblock the Notifications