Karnataka Assembly Election 2023 : ನಾಮಪತ್ರ ವಾಪಸ್ ಪಡೆಯಲಿರುವ ಡಿಕೆ ಸುರೇಶ್
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಡಿಕೆ ಸುರೇಶ್, ತಮ್ಮ ನಾಮಪತ್ರವನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಡಿಕೆ ಶಿವಕುಮಾರ್ ನಾಮಪತ್ರ ಅಂಗೀಕಾರವಾದ ಬೆನ್ನಲ್ಲೇ ಡಿಕೆ ಸುರೇಶ್ ಈ ನಿರ್ಧಾರ ಮಾಡಿದ್ದು, ಸೋಮವಾರ ನಾಮಪತ್ರ ಹಿಂಪಡೆಯುವುದಾಗಿ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತವಾಗುವ ಆತಂಕ ಎದುರಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಏಪ್ರಿಲ್ 17ರಂದು ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ಡಿಕೆಶಿ ನಾಮಪತ್ರ ಸಲ್ಲಿಕೆ ಬಳಿಕೆ ಆದಾಯ ತೆರಿಕೆ ಇಲಾಖೆ ಅಧಿಕಾರಿಗಳು ಡಿಕೆಶಿ ಅವರ ಆಸ್ತಿ ವಿವರ ಕಲೆಹಾಕಿದ್ದರು.

ಕನಕಪುರಕ್ಕೂ ತೆರಳಿದ್ದ ಅಧಿಕಾರಿಗಳು ಡಿಕೆಶಿಗೆ ಸಂಬಂಧಿಸಿದ ಆಸ್ತಿಗಳ ವಿವರನ್ನು ಸಂಗ್ರಹಿಸಿದ್ದರು. ಅವರ ಐದು ವರ್ಷ ತೆರಿಗೆ ಪಾವತಿ ವಿವರವನ್ನು ಕಲೆ ಹಾಕಿದ್ದರು. ಡಿಕೆ ಶಿವಕುಮಾರ್ ತೆರಿಗೆ ಇಲಾಖೆಗೆ ನೀಡಿರುವ ಮಾಹಿತಿ ಮತ್ತು ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ವ್ಯತ್ಯಾಸವಿದೆ ಎನ್ನುವ ಮಾತು ಕೇಳಿಬಂದಿತ್ತು. ಇದು ಡಿಕೆಶಿ ಅವರ ನಾಮಪತ್ರ ತಿರಸ್ಕೃತವಾಗುವ ಆತಂಕಕ್ಕೆ ಕಾರಣವಾಗಿತ್ತು.
ಆದರೆ ಏಪ್ರಿಲ್ 21ರಂದು ಶುಕ್ರವಾರ ಚುನಾವಣಾಧಿಕಾರಿಗಳು ಡಿಕೆ ಶಿವಕುಮಾರ್ ಅವರ ಆಸ್ತಿ ಪರಿಶೀಲನೆ ನಡೆಸಿದ ಬಳಿಕ, ನಾಮಪತ್ರವನ್ನು ಅಂಗೀಕರಿಸಿದ್ದಾರೆ. ಇದರಿಂದ ಡಿಕೆ ಶಿವಕುಮಾರ್ ದೊಡ್ಡ ಆಘಾತದಿಂದ ತಪ್ಪಿಸಿಕೊಂಡಿದ್ದಾರೆ. ಅಣ್ಣನ ನಾಮಪತ್ರ ತಿರಸ್ಕೃತವಾದ ಬೆನ್ನಲ್ಲೇ ಡಿಕೆ ಸುರೇಶ್ ತಮ್ಮ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.












Click it and Unblock the Notifications