ಏಳು ಭಿನ್ನಮತೀಯ ಶಾಸಕರಲ್ಲಿ ಜೆಡಿಎಸ್ ಮೊದಲ ಶಿಕಾರಿ ಮಾಗಡಿ ಬಾಲಕೃಷ್ಣ!
ಮಾಗಡಿ (ರಾಮನಗರ ಜಿಲ್ಲೆ), ಮಾರ್ಚ್ 22 : ಒಬ್ಬೊಬ್ಬ ಬಂಡಾಯ ಶಾಸಕರ ಕ್ಷೇತ್ರದಲ್ಲಿಯೂ ಶಕ್ತಿ ಪ್ರದರ್ಶನ ನಡೆಸಲು ಜೆಡಿಎಸ್ ಮುಂದಾಗಿದ್ದು, ಅದರ ಮೊದಲ ಭಾಗವಾಗಿ ಮಾಗಡಿಯಲ್ಲಿ ಮಾರ್ಚ್ 25ರಂದು ಬೃಹತ್ ಸಮಾವೇಶ ನಡೆಸಲಾಗುತ್ತಿದ್ದು, ಆ ಮೂಲಕ ಶಾಸಕ ಬಾಲಕೃಷ್ಣರಿಗೆ ಟಾಂಗ್ ನೀಡಲು ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮಾರ್ಚ್ 25ರಂದು ಮೈಸೂರಲ್ಲಿ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದು, ಅದರಲ್ಲಿ ಬಾಲಕೃಷ್ಣ ಸೇರಿದಂತೆ ಏಳು ಮಂದಿ ಬಂಡಾಯ ಶಾಸಕರು ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ. ಆದರೆ ಅದೇ ದಿನ ಮಾಗಡಿಯಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಸುತ್ತಿದ್ದು, ತನ್ನ ತಾಕತ್ತನ್ನು ಪ್ರದರ್ಶಿಸಲಿದೆ.
ಬಾಲಕೃಷ್ಣ ಅವರಿಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ನಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ನಿಂತಿದ್ದು, ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಸಮಾವೇಶ ಇದಾಗಿದೆ. ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಬಂದಿರುವ ಮಂಜು ಅವರು ಶಾಸಕರ ವಿರುದ್ಧವೇ ಸೆಟೆದು ನಿಂತಿದ್ದಾರೆ. ಹೀಗಾಗಿ ಈ ಸಮಾವೇಶದಲ್ಲಿ ಒಂದಷ್ಟು ಜನರನ್ನು ಸೇರಿಸಿ ತನ್ನ ಶಕ್ತಿ ತೋರಿಸಬೇಕು.

ಎ.ಮಂಜು ಹಾಗೂ ಬೆಂಬಲಿಗರಿಂದ ಹಗಲಿರುಳು ಶ್ರಮ
ದೇವೇಗೌಡರಿಂದ ಭೇಷ್ ಎಂದು ಹೇಳಿಸಿಕೊಳ್ಳುವುದು ಮಂಜು ಅವರಿಗೆ ಅನಿವಾರ್ಯವಾಗಿದೆ. ಸದ್ಯ ಹಗಲಿರುಳು ಎನ್ನದೆ ಮಂಜು ಮತ್ತು ಬೆಂಬಲಿಗರು ಶ್ರಮಿಸುತ್ತಿದ್ದು, ಸಮಾವೇಶವನ್ನು ಯಶಸ್ವಿಗೊಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಮಾಗಡಿ ಕೋಟೆ ಮೈದಾನದಲ್ಲಿ ಸಮಾವೇಶಕ್ಕೆ ಬೃಹತ್ ವೇದಿಕೆಯನ್ನು ಹಾಕಲಾಗುತ್ತಿದೆ, ಮಳೆ ಬಂದರೂ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಸಮಾವೇಶಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಚಾಲನೆ
ಈ ಬೃಹತ್ ಸಮಾವೇಶಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚಾಲನೆ ನೀಡಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಬಸವರಾಜು ಹೊರಟ್ಟಿ, ಶರವಣ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಶಾಸಕ ಮಧು ಬಂಗಾರಪ್ಪ, ಗೋಪಾಲಯ್ಯ, ವಿಶ್ವನಾಥ್, ಕೆ.ಬಾಗೇಗೌಡ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.

ರೋಡ್ ಶೋ ಮೂಲಕ ಕುಮಾರಸ್ವಾಮಿ ಸ್ವಾಗತ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರೋಡ್ ಶೋ ಮೂಲಕ ಭವ್ಯವಾಗಿ ಸ್ವಾಗತಿಸಲು ತೀರ್ಮಾನಿಸಲಾಗಿದ್ದು, ಮಾಗಡಿಗೆ ಬರುವ ಅವರನ್ನು ಸ್ವಾಗತಿಸಿ, ಸೋಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಲ್ಯಾಗೇಟ್ ನ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವರು. ಕೆಂಪೇಗೌಡ ಹಾಗೂ ಬಸವಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ, ಆರ್.ಆರ್.ರಸ್ತೆ ಮೂಲಕ ಕೋಟೆವರೆಗೂ ರೋಡ್ ಶೋ ಮೂಲಕ ಭವ್ಯವಾಗಿ ಸ್ವಾಗತಿಸಿ, ಕಾರ್ಯಕ್ರಮದ ವೇದಿಕೆಗೆ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕನಿಷ್ಠ 50 ಸಾವಿರ ಕಾರ್ಯಕರ್ತರನ್ನು ಸೇರಿಸುವ ಉದ್ದೇಶ
ಪಕ್ಷದ ಸಮಾವೇಶಕ್ಕೆ ಕನಿಷ್ಠ 50 ಸಾವಿರ ಕಾರ್ಯಕರ್ತರನ್ನಾದರೂ ಸೇರಿಸಬೇಕೆಂದು ತೀರ್ಮಾನಿಸಿದ್ದು, ಅವರನ್ನು ಕರೆತರಲು 750ಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಊಟದ ವ್ಯವಸ್ಥೆಗಾಗಿ 50 ಕೌಂಟರ್ ಗಳನ್ನು ಮಾಡಲಾಗುತ್ತಿದ್ದು, 30 ಪುರುಷರಿಗೆ, 20 ಮಹಿಳೆಯರಿಗೆ ಕೌಂಟರ್ ತೆರೆಯಲಾಗುತ್ತಿದೆ. ಒಟ್ಟಾರೆ ಮಾಗಡಿಯಲ್ಲಿ ನಡೆಯುತ್ತಿರುವ ಸಮಾವೇಶ ಹಲವು ಕಾರಣಗಳಿಗೆ ಮಹತ್ವದಾಗಿದ್ದು, ಇದಕ್ಕೆ ಯಾವ ರೀತಿಯ ಸ್ಪಂದನೆ ದೊರೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications