ಶಾಸಕ ಇಕ್ಬಾಲ್ ಹುಸೇನ್ ಬೆಂಬಲಿಗರಿಂದ ದಲಿತರ ಮೇಲೆ ಗೂಂಡಾಗಿರಿ ಆರೋಪ
ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಅವರ ಬೆಂಬಲಿಗರ ಮೇಲೆ ಜೆಡಿಎಸ್ ಗಂಭೀರ ಆರೋಪ ಮಾಡಿದೆ. ರೌಡಿಗಳನ್ನು ಬಿಟ್ಟು ದಲಿತ ನಾಯಕರ ಮೇಲೆ ಹಲ್ಲೆ ಯತ್ನ ಮಾಡಿಸಿದ್ದಾರೆ ಎಂದು ಜೆಡಿಎಸ್ ದೂರಿದೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ನೀವು ಜನಪ್ರತಿನಿಧಿಯೋ? ಬೀದಿ ರೌಡಿಯೋ? ಎಂದು ಪ್ರಶ್ನಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು, ನೀವು ಶಾಸಕರಾಗಲು ದಲಿತರ ಮತಗಳು ಬೇಕು. ಆದರೆ, ನೀವು ಮಾಡುತ್ತಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಪ್ರಶ್ನಿಸಿದರೆ ಕೊಲೆ ಬೆದರಿಕೆ ಹಾಕುತ್ತೀರಾ? ರೌಡಿಗಳನ್ನು ಬಿಟ್ಟು ದಲಿತ ನಾಯಕರ ಮೇಲೆ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದೀರಾ? ಎಂದು ವಾಗ್ದಾಳಿ ನಡೆಸಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದರೆ ನಿಮಗೇನು ಸಮಸ್ಯೆ? ದಲಿತ ನಾಯಕರ ಮೇಲೆ ನಿಮಗೇಕೆ ದ್ವೇಷ? ಕಾಂಗ್ರೆಸ್ ಸೇಡಿನ ರಾಜಕಾರಣ, ಇಂತಹ ಹಲ್ಲೆಗಳನ್ನು ಸಹಿಸಲು ಸಾಧ್ಯವಿಲ್ಲ. ಗೃಹ ಸಚಿವರಾದ ಪರಮೇಶ್ವರ್ ಅವರು, ದಲಿತ ಮುಖಂಡರ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಶಾಸಕ ಇಕ್ಬಾಲ್ ಹುಸೇನ್ ಅವರ ಬೆಂಬಲಿಗರ ಗುಂಪೊಂದು ದಲಿತ ಮುಖಂಡ ಕೊತ್ತಿಪುರ ಗೋವಿಂದರಾಜು ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಶಾಸಕರ ವಿರುದ್ಧ ಮಾತನಾಡ್ತೀಯಾ? ಎಂದು ದಲಿತ ಮುಖಂಡನ ಮೇಲೆ ಹಲ್ಲೆ ನಡೆಸಿದ್ದರು. ಗಾಯಗೊಂಡಿರುವ ಗೋವಿಂದರಾಜು ಅವರನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ತನ್ನ ಮೇಲಿನ ಹಲ್ಲೆ ಆರೋಪಿಸಿ ಗೋವಿಂದರಾಜು ಅವರು ಶಾಸಕ ಹುಸೇನ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ಕುಮಾರ್, ಕಾಂಗ್ರೆಸ್ ಮುಖಂಡ ಅನಿಲ್ ಜೋಗಿಂದರ್ ಸೇರಿ ಆರು ಮಂದಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
ಬ್ಯಾಂಕ್ಗೆ ಹೋಗಿ ಬರುವಾಗ ಆರು ಮಂದಿ ನನ್ನನ್ನು ಸುತ್ತುವರಿದರು. ಶಾಸಕರ ವಿರುದ್ಧ ಮಾತನಾಡ್ತೀಯಾ? ಎಂದು ಜಾತಿ ನಿಂದನೆ ಮಾಡಿದ್ದಲ್ಲದೆ, ಹಲ್ಲೆಯೂ ನಡೆಸಿದರು ಎಂದು ಗೋವಿಂದರಾಜು ದೂರಿನಲ್ಲಿ ತಿಳಿಸಿದ್ದಾರೆ. ಶಾಸಕರು ನಡೆಸಿದ್ದ ಅಂಬೇಡ್ಕರ್ ಜಯಂತಿಗೆ ವಿರುದ್ಧವಾಗಿ ದಲಿತ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ನಾನು ಭಾಗವಹಿಸಿದ್ದೆ. ಕ್ಷೇತ್ರದಲ್ಲಿ ನಡೆದಿದ್ದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದ ಕುರಿತು ಲೋಕಾಯುಕ್ತಕ್ಕೆ ದೂರು ಕೊಡುವುದಾಗಿ ಹೇಳಿದ್ದೆ. ಈ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಗೋವಿಂದರಾಜು ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ ಕಾರಣ ಹಲ್ಲೆ ವಿಚಾರ ತಿಳಿದು ಜಿಲ್ಲೆಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದರು. ನ್ಯಾಯ ಸಿಗುವವರೆಗೆ ಹೋರಾಟ ಮಾಡೋಣ ಎಂದು ಗೋವಿಂದರಾಜು ಅವರಿಗೆ ತಿಳಿಸಿದ್ದಾರೆ.

ಈ ಹಿಂದೆಯೂ ಇಕ್ಬಾಲ್ ಹುಸೇನ್ ವಿರುದ್ಧ ದಲಿತರು ಆರೋಪ ಮಾಡಿದ್ದರು. ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ದಲಿತ ಸಂಘಟನೆಗಳು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಇಕ್ಬಾಲ್ ಹೇಳಿದ್ದರು. ದಲಿತ ಪರ ಸಂಘಟನೆಗಳ ಮುಖಂಡರು ಕೆಟ್ಟ ಚಾಳಿ ಬಿಡಬೇಕು ಎಂದಿದ್ದರು. ಈ ಬಗ್ಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದರು.












Click it and Unblock the Notifications